ಲಾರಿ ಮುಷ್ಕರಕ್ಕೆ ಈದ್ ಮತ್ತು ಸಂಕ್ರಾಂತಿ ರಜೆ !
ಬೆಂಗಳೂರು, ಜ.13 : ಲಾರಿ ಮಾಲೀಕರೊಂದಿಗೆ ಸಿಎಂ ಸಿದ್ದರಾಮಯ್ಯ ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದ್ದು, ಮರಳು ಲಾರಿ ಮುಷ್ಕರ ಬೆಂಬಲಿಸಿ ಸರಕು ಸಾಗಾಣಿಕೆ ಸ್ಥಗಿತ ಮಾಡಿ ಲಾರಿ ಮಾಲೀಕರು ಆರಂಭಿಸಿದ್ದ ಮುಷ್ಕರ ಅಂತ್ಯಗೊಂಡಿದೆ. ಸೋಮವಾರ ಸಂಜೆಯಿಂದಲೇ ಲಾರಿಗಳ ಸಂಚಾರ ಎಂದಿನಂತೆ ಆರಂಭವಾಗಲಿದೆ.
ಶನಿವಾರ ಮಧ್ಯರಾತ್ರಿಯಿಂದ ಸರಕು ಸಾಗಾಣೆ ಲಾರಿ ಮಾಲೀಕರು ಮರಳು ಲಾರಿ ಮುಷ್ಕರಕ್ಕೆ ಬೆಂಬಲ ಸೂಚಿಸಿ, ಸರಕು ಸಾಗಣೆ ಸ್ಥಗಿತಗೊಳಿಸಿದ್ದರು. ಸೋಮವಾರ ಮರಳು ಮತ್ತು ಇತರ ಲಾರಿ ಮಾಲೀಕರೊಂದಿಗೆ ಸಿಎಂ ಸಿದ್ದರಾಮಯ್ಯ ಸರಣಿ ಸಭೆ ನಡೆಸಿದ್ದು, ಮಾಲೀಕರು ಮುಷ್ಕರ ವಾಪಸ್ ಪಡೆದಿದ್ದಾರೆ. [ಲಾರಿ ಮಾಲೀಕರ ಮುಷ್ಕರ]
ಪ್ರತಿ ದಿನ ಕನಿಷ್ಠ 20 ಸಾವಿರ ಲೋಡ್ ಮರಳು ಸಾಗಿಸಲು ಪರವಾನಗಿ ನೀಡಬೇಕೆಂಬ ಲಾರಿ ಮಾಲೀಕರ ಮನವಿಗೆ ಸಿಎಂ ಸಿದ್ದರಾಮಯ್ಯ ಮಣಿಯಲಿಲ್ಲ. ಆದ್ದರಿಂದ ಮೊದಲ ಹಂತದದಲ್ಲಿ ನಡೆದ ಲಾರಿ ಮಾಲೀಕರ ಸಭೆ ವಿಫಲವಾಗಿತ್ತು. ನಂತರ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಗೃಹ ಸಚಿವ ಕೆ.ಜೆ.ಜಾರ್ಜ್ ಅವರೊಂದಿಗೆ ಸಭೆ ನಡೆಸಿದ ಸಿಎಂ ಮುಷ್ಕರವನ್ನು ಪರಿಹರಿಸುವ ಸಂಬಂಧ ಯಾವ ಕ್ರಮಗಳನ್ನು ಕೈಗೊಳ್ಳಬೇಕೆಂದು ಚರ್ಚೆ ನಡೆಸಿದರು.
ಲಾರಿ ಮಾಲೀಕರೊಂದಿಗೆ ಶುಕ್ರವಾರ ನಡೆಸಿದ ಸಂಧಾನ ಸಭೆ ವಿಫಲವಾಗಿತ್ತು. ಶನಿವಾರ ಸಂಜೆವರೆಗೆ ಸರ್ಕಾರ ಮಾತುಕತೆಗೆ ಆಹ್ವಾನಿಸದ ಹಿನ್ನೆಲೆಯಲ್ಲಿ ಕಟ್ಟಡ ಸಾಮಗ್ರಿ, ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ ಸಾಗಣೆ ವಾಹನಗಳು, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಮಾಲೀಕರು ಮುಷ್ಕರ ಆರಂಭಿಸಿದ್ದರು, ಆದ್ದರಿಂದ ಸರ್ಕಾರ ಮಾಲೀಕರೊಂದಿಗೆ ಮಾತುಕತೆ ನಡೆಸಿ, ಮುಷ್ಕರ ಹಿಂಪಡೆಯುವಂತೆ ಮನವಿ ಮಾಡಿತು.
ಸಂಧಾನ ಸಭೆಯ ಪ್ರಮುಖ ಅಂಶಗಳು : ಸಂಧಾನ ಸಭೆಯ ಸಮಯದಲ್ಲಿ ಮರಳು ಸಾಗಾಣೆ ಸಂದರ್ಭದಲ್ಲಿ ಲಾರಿ ಮಾಲೀಕರ ಮೇಲೆ ಹಾಕಲಾಗಿರುವ 1600ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳನ್ನು ವಾಪಸ್ ಪಡೆಯುವುದಾಗಿ ಸಿಎಂ ಸಿದ್ದರಾಮಯ್ಯ ಮಾಲೀಕರಿಗೆ ಭರವಸೆ ನೀಡಿದ್ದಾರೆ. ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಲಾರಿ ಮಾಲೀಕರು ಸಿಎಂಗೆ ಮನವಿ ಮಾಡಿದರು.
ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಎರಡು ದಿನಗಳ ಕಾಲಾವಕಾಶ ನೀಡುವಂತೆ ಸಿಎಂ ಲಾರಿ ಮಾಲೀಕರಿಗೆ ಮನವಿ ಮಾಡಿದರು. ಸಿಎಂ ಮನವಿಗೆ ಸ್ಪಂದಿಸಿದ ಮಾಲೀಕರು ಮುಷ್ಕರ ವಾಪಸ್ ಪಡೆಯುತ್ತೇವೆ. ಮಕರ ಸಂಕ್ರಾಂತಿ, ಈದ್ಮಿಲಾದ್ ಹಬ್ಬಗಳ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಂತೆ, ಲಾರಿ ಸಂಚಾರವನ್ನು ಸೋಮವಾರ ಸಂಜೆಯಿಂದಲೇ ಆರಂಭಿಸಲಾಗುವುದು ಎಂದು ಮಾಲೀಕರು ಹೇಳಿದರು.
ಸರ್ಕಾರ ಒಪ್ಪದಿದ್ದರೆ ಪುನಃ ಮುಷ್ಕರ : ಸರ್ಕಾರ ಮರಳು ಲಾರಿ ಮಾಲೀಕರ ಬೇಡಿಕೆಯನ್ನು ಈಡೇರಿಸದಿದ್ದರೆ ಮುಂದಿನ ಹೋರಾಟದ ಕುರಿತು ಆಲೋಚನೆ ನಡೆಸಲಾಗುವುದು ಎಂದು ಲಾರಿ ಮಾಲೀಕರ ಮತ್ತು ಏಜೆಂಟರುಗಳ ಸಂಘದ ಅಧ್ಯಕ್ಷ ಷಣ್ಮುಗಪ್ಪ ಹೇಳಿದ್ದಾರೆ. ಸಿಎಂ ಜೊತೆಗಿನ ಸಭೆಯಲ್ಲಿ ಪ್ರತಿ ದಿನ ಕನಿಷ್ಠ 20 ಸಾವಿರ ಲೋಡ್ ಮರಳು ಸಾಗಿಸಲು ಸರ್ಕಾರ ಅನುಮತಿ ನೀಡಬೇಕು ಎಂದು ಅವರು ಒತ್ತಾಯಿಸಿದ್ದರು.
ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಧಿಕಾರಿಗಳು, ಇಷ್ಟು ಪ್ರಮಾಣದ ಮರಳು ನೀಡಿದರೆ ಪ್ರಕೃತಿಯ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಪ್ರತಿ ದಿನ 8 ರಿಂದ 10 ಸಾವಿರ ಲೋಡ್ ಮರಳು ಸಾಗಿಸಲು ಅನುಮತಿ ನೀಡಬಹುದು ಎಂದು ಅಭಿಪ್ರಾಯಪಟ್ಟರು. ಸದ್ಯ ಲಾರಿ ಹಾಗೂ ಸರಕು ಸಾಗಣೆ ಲಾರಿಗಳ ಮುಷ್ಕರ ಅಂತ್ಯಗೊಂಡಿದ್ದು, ಸರ್ಕಾರ ಬೇಡಿಕೆ ಈಡೇರಿಸದಿದ್ದರೆ, ಮುಷ್ಕರ ಮುಂದುವರೆಯುವ ಸಾಧ್ಯತೆ ಇದೆ.