ಬಿಗ್ ಬಾಸ್ ನಲ್ಲಿ ಸಮೀರಾಚಾರ್ಯ, ಬ್ರಾಹ್ಮಣ್ಯದ ಬಿಗ್ ಚರ್ಚೆ
ಬಿಗ್ ಬಾಸ್ ನ ಕನ್ನಡ ಸೀಸನ್ ಐದರಲ್ಲಿ ಭಾನುವಾರ ರಾತ್ರಿ ಮನೆಯೊಳಗೆ ಒಬ್ಬೊಬ್ಬರೇ ಹೋಗುವಾಗ, ಪಂಚೆಯುಟ್ಟು, ಶಿಖೆ ಬಿಟ್ಟ, ಚೀಲದಲ್ಲಿ ಅಗ್ಗಿಷ್ಟಿಕೆಯನ್ನು ಇಟ್ಟುಕೊಂಡ ಸಮೀರಾಚಾರ್ಯರನ್ನು ಸ್ಪರ್ಧಿಯಾಗಿ ಕಂಡಾಗ ಅರೆ ಕ್ಷಣ ಗಾಬರಿಯಾಯಿತು. ಏಕೆಂದರೆ ಇವರು ಲೌಕಿಕ ಬ್ರಾಹ್ಮಣರಲ್ಲ, ವೈದಿಕ ಬ್ರಾಹ್ಮಣರು.
ತ್ರಿಕಾಲ ಸಂಧ್ಯಾವಂದನೆ, ವೈಶ್ವದೇವ ಇಲ್ಲದೆ, ದೇವರ ನೈವೇದ್ಯ ಮಾಡದೆ ಸಮೀರಾಚಾರ್ಯ ಭೋಜನ ಸ್ವೀಕಾರ ಮಾಡ್ತಾರಾ? ದೇವರ ಪೂಜೆಗೆ ಬಾವಿಯ ನೀರು ಅಥವಾ ನದಿ ನೀರನ್ನೇ ಬಳಸುತ್ತಾರೆ. ಬಿಗ್ ಬಾಸ್ ಮನೆಯಲ್ಲಿ ಯಾವ ಬಾವಿ, ಅದ್ಯಾವ ನದಿ? ಆದರೆ ಕೆಲವರು ಹೇಳುವ ಪ್ರಕಾರ, ನೀರಿಗೆ ದೋಷವಿಲ್ಲ.
'ಇವರು'ಗಳೇ ನೋಡಿ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ 17 ಸ್ಪರ್ಧಿಗಳು.!
ಇನ್ನು ಮಧ್ವಾಚಾರ್ಯರ ತಂತ್ರಸಾರ ಸಂಗ್ರಹದಲ್ಲಿ, ವಿಷ್ಣು ಸರ್ವೋತ್ತಮತ್ವ ಒಪ್ಪಿಕೊಳ್ಳದವರ ಬಳಿ ಆಹಾರ ಸ್ವೀಕಾರ ಮಾಡಬಾರದು ಎಂದಿದೆ. ಹೆಣ್ಣುಮಕ್ಕಳು ಗಾಯತ್ರಿ ಮಂತ್ರವನ್ನೇ ಕೇಳಿಸಿಕೊಳ್ಳಬಾರದು, ತಿಂಗಳ ಮೂರು ದಿನ ಪ್ರತ್ಯೇಕವಾಗಿ ಕೂರಬೇಕು ಎಂದು ಬಲವಾಗಿ ನಂಬುವ ಪಂಗಡವನ್ನು ಪ್ರತಿನಿಧಿಸುವ ಸಮೀರಾಚಾರ್ಯ ಅಷ್ಟು ಮಹಿಳೆಯರ ಮಧ್ಯೆ ನಿತ್ಯ ಕರ್ಮಗಳನ್ನು ಹೇಗೆ ಮಾಡುತ್ತಾರೆ?
ಧಾರ್ಮಿಕ ಕಾರ್ಯಕ್ಕಾಗಿ ಧರ್ಮಾಚರಣೆಯನ್ನು ಬಿಡಬೇಕೆ?
ಬಿಗ್ ಬಾಸ್ ನಲ್ಲಿ ಅವರು ನೂರು ದಿನ ಇದ್ದರೆ, ಅದರಲ್ಲಿ ಗೆದ್ದರೆ ಆ ಮೊತ್ತವನ್ನು ದೇವಾಲಯ ನಿರ್ಮಾಣಕ್ಕೆ ಬಳಸುವ ಉದ್ದೇಶವಿದೆಯಂತೆ. ಧಾರ್ಮಿಕ ಕಾರ್ಯಕ್ಕಾಗಿ ಧರ್ಮಾಚರಣೆಯನ್ನು ಬಿಡಬೇಕೆ? ದೇವಾಲಯ ನಿರ್ಮಾಣಕ್ಕೆ ಜನರಿಂದಲೇ ನೆರವು ಕೇಳಬಹುದಿತ್ತಲ್ಲವಾ?
ಬಿಗ್ ಬಾಸ್ ಟಾಸ್ಕ್ ಗಳಲ್ಲಿ ಪಾಲ್ಗೊಳ್ಳುವುದಾ ಸಲೀಸಾ?
ಇನ್ನು ಅಲ್ಲಿ ನೀಡುವ ಚಟುವಟಿಕೆಗಳಲ್ಲಿ ಖಂಡಿತಾ ಪಾಲ್ಗೊಳ್ಳಲೇ ಬೇಕು. ಅದು ಯಾವ ಬಗೆಯ ಚಟುವಟಿಕೆಗಳಾಗಿರುತ್ತವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಟಿವಿಯಲ್ಲಿ ಸಮೀರಾಚಾರ್ಯರು ಮಾತನಾಡುವ ಹಲವು ಕಾರ್ಯಕ್ರಮಗಳನ್ನು ನೋಡಿದವರಿಗೆ ಸ್ಪಷ್ಟವಾಗುತ್ತದೆ: ಅವರು ವೈದಿಕ ಬ್ರಾಹ್ಮಣರು. ಅಂಥ ಯಾವ ಕಟ್ಟುಪಾಡನ್ನೂ ಬಿಗ್ ಬಾಸ್ ಮನೆಯಲ್ಲಿ ಪಾಲಿಸಲು ಸಾಧ್ಯವಿಲ್ಲ.
ಗೃಹಸ್ಥರ ಕರ್ತವ್ಯ ಪಾಲನೆ ಸಾಧ್ಯವೆ?
ಅಧ್ಯಯನ, ಅಧ್ಯಾಪನ, ಯಜನ (ಯಾಗ ಮಾಡುವುದು), ಯಾಜನ (ಯಾಗ ಮಾಡಿಸುವುದು), ದಾನ, ಪ್ರತಿಗ್ರಹದ (ದಕ್ಷಿಣೆ ಸ್ವೀಕರಿಸುವುದು) ಗೃಹಸ್ಥರ ಕರ್ತವ್ಯ ಎನ್ನಲಾಗಿದೆ. ಈ ಪೈಕಿ ಯಾವುದನ್ನು ಅಲ್ಲಿದ್ದು ಮಾಡಲು ಸಾಧ್ಯ?
ಆಪತ್ತಿನ ಸಂದರ್ಭದಲ್ಲಿ ಧರ್ಮಾಚರಣೆಯಿಂದ ವಿನಾಯಿತಿ
ಆಪತ್ತಿನಲ್ಲಿ ಧರ್ಮಾಚರಣೆಯಿಂದ ವಿನಾಯಿತಿ ಇದೆ. ಅದೆಂಥ ಆಪತ್ತು? ಅದಾಗಿಯೇ ಸೃಷ್ಟಿಯಾದದ್ದೋ ಅಥವಾ ನಾವೇ ಸೃಷ್ಟಿಸಿಕೊಂಡಿದ್ದೋ? ಸನ್ಯಾಸ ಸ್ವೀಕರಿಸಿದವರಿಗೆ ಇರುವಂಥ ಕಟ್ಟುಪಾಡುಗಳು ಗೃಹಸ್ಥರಿಗೆ ಇಲ್ಲದಿರಬಹುದು. ಆದರೆ ಗೃಹಸ್ಥರು ಆಚರಿಸುವ ಕಟ್ಟುಪಾಡನ್ನಾದರೂ ಪಾಲಿಸುವಂಥ ಸನ್ನಿವೇಶ ಇರಬೇಕಲ್ಲವೆ?
ಮಾತನಾಡುವುದಕ್ಕೆ ಅವಕಾಶ ಸಿಕ್ಕಂತಾಯಿತು
"ಬ್ರಾಹ್ಮಣರ ಬುದ್ಧಿಯೇ ಇಷ್ಟು. ತಮಗೆ ಅನ್ವಯ ಆಗುವ ಶಾಸ್ತ್ರವೇ ಬೇರೆ. ಇನ್ನೊಬ್ಬರಿಗೆ ಹೇಳುವಾಗಿನ ಕಟ್ಟುಪಾಡೇ ಬೇರೆ" ಎಂದು ಮಾತನಾಡಿಕೊಳ್ಳಲು ಸಮೀರಾಚಾರ್ಯರೇ ಅವಕಾಶ ಮಾಡಿಕೊಟ್ಟಂತಾಗಿದೆ. ಬಿಗ್ ಬಾಸ್ ಅಥವಾ ಬಿಗ್ ಬ್ರದರ್ ಯಾವುದಕ್ಕಾದರೂ ಹೋಗುವುದು ವೈಯಕ್ತಿಕ ವಿಚಾರ. ಆದರೆ ಧಾರ್ಮಿಕ ಪ್ರತಿನಿಧಿಯಂತೆ ಸಮಾಜದಲ್ಲಿ ಗುರುತಿಸಿಕೊಂಡು, ಶಾಸ್ತ್ರ- ಧರ್ಮ ನಿರ್ಣಯದ ಮಾತನಾಡಿ, ಈ ರೀತಿ ಮಾಡುವುದಕ್ಕೆ ನೀವೇನಂತೀರಿ?