ಕೋಟಿಗೊಬ್ಬ - 3 ಗೆ ಪೈರಸಿ ಕಾಟ: ಟೆಲಿಗ್ರಾಮ್ ಗೆ ಸಿಐಡಿ ಪೊಲೀಸ್ ನೋಟಿಸ್
ಬೆಂಗಳೂರು, ಅ. 16: ಕೊರೊನಾ ಬಳಿಕ ಧೈರ್ಯದೊಂದಿಗೆ ಬಿಡುಗಡೆಯಾದ ಎರಡು ಸ್ಟಾರ್ ನಟರ ಸಿನಿಮಾಗಳು ಒಂದೇ ದಿನದಲ್ಲಿ 'ಟೆಲಿಗ್ರಾಮ್' ಲಿಂಕ್ ಮೂಲಕ ಲೀಕ್ ಆಗಿವೆ. ಕನ್ನಡ ರಾಕರ್ಸ್ ಟೆಲಿಗ್ರಾಮ್ ಚಾನೆಲ್ ನಲ್ಲಿ ಲೀಕ್ ಆದ ಬೆನ್ನಲ್ಲೇ ಸಿಐಡಿ ಸೈಬರ್ ಘಟಕದ ಪೊಲೀಸರು ದುಬೈನಲ್ಲಿರುವ ಟೆಲಿಗ್ರಾಮ್ ಆಪ್ ಮುಖ್ಯಸ್ಥರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಕೊರೊನಾ ಹೊಡೆತಕ್ಕೆ ಸಂಪೂರ್ಣ ನೆಲ ಕಚ್ಚಿದ್ದ ಸ್ಯಾಂಡಲ್ ವುಡ್ನಲ್ಲಿ ಸ್ಟಾರ್ ನಟರ ಎರಡು ಸಿನಿಮಾಗಳು ತೆರೆ ಕಂಡಿವೆ. ದುನಿಯಾ ವಿಜಯ್ ನಿರ್ದೇಶನದ ಸಲಗ ಸಿನಿಮಾ ಅ. 14 ರಂದು ಬಿಡುಗಡೆಯಾಗಿತ್ತು. ಅ. 15 ರಂದು ನಟ ಸುದೀಪ್ ನಟನೆಯ ಬಹು ನಿರೀಕ್ಷಿತ ಚಿತ್ರ ಕೋಟಿಗೊಬ್ಬ-3 ಬಿಡುಗಡೆಯಾಗಿತ್ತು. ಬಿಡುಗಡೆಯಾದ ಕ್ಷಣದಲ್ಲಿಯೇ ಎರಡು ಸಿನಿಮಾಗಳನ್ನು ಕನ್ನಡ ರಾಕರ್ಸ್ ಟೆಲಿಗ್ರಾಮ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಲಾಗಿದೆ. ಎರಡು ಸಿನಿಮಾಗಳಿಗೂ ಪೈರಸಿ ಭೂತ ದೊಡ್ಡ ಪೆಟ್ಟು ನೀಡಿದೆ.
ಕೋಟಿಗೊಬ್ಬ -3 ಸಿನಿಮಾ ಬಿಡುಗಡೆಗೂ ಮುನ್ನವೇ ಕೋಟಿಗೊಬ್ಬ- 3 ಸಿನಿಮಾ ವೀಕ್ಷಿಸಲು ನಮ್ಮ ಚಾನೆಲ್ ಗೆ ಸಬ್ಸ್ಕ್ರೈಬ್ ಆಗಿ ಎಂಬ ಸಂದೇಶಗಳು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡಿದ್ದವು. ಪೈರಸಿ ಸಂದೇಶಕ್ಕೆ ಹೆದರಿದ್ದ ಕೋಟಿಗೊಬ್ಬ - 3 ನಿರ್ಮಾಪಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ನೀಡಿದ್ದರು. ಪೈರಸಿ ಸಂದೇಶ ಹರಿದಾಡುತ್ತಿದ್ದು, ಈ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಕೋರಿದ್ದರು. ಈ ಕುರಿತ ದೂರನ್ನು ತನಿಖೆ ನಡೆಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಅವರಿಗೆ ಮುಖ್ಯಮಂತ್ರಿ ಬೊಮ್ಮಾಯಿ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ದೂರನ್ನು ಸಿಸಿಬಿ ಪೊಲೀಸರಿಗೆ ವರ್ಗಾಯಿಸಿದ್ದರು. ಇದರ ಜತೆಗೆ ಸಿಐಡಿ ಸೈಬರ್ ಘಟಕಕ್ಕೂ ದೂರು ನೀಡಲಾಗಿತ್ತು. ಇದು ದೊಡ್ಡ ಮಟ್ಟದ ಸುದ್ದಿಯಾಗಿತ್ತು.
ಇಷ್ಟೆಲ್ಲಾ ಮುನ್ನೆಚ್ಚರಿಕೆ ಕ್ರಮದ ನಡುವೆಯೂ ಕನ್ನಡ ರಾಕರ್ಸ್ ಹೆಸರಿನ ಟೆಲಿಗ್ರಾಮ್ ಚಾನೆಲ್ ನಲ್ಲಿ ಎರಡು ಸ್ಟಾರ್ ನಟರ ಸಿನಿಮಾಗಳು ಅದಾಗಲೇ ಟೆಲಿಗ್ರಾಮ್ ಮೂಲಕ ಅಪ್ಲೋಡ್ ಮಾಡಲಾಗಿದೆ. ಸಿನಿಮಾ ಲಿಂಕ್ ಒತ್ತಿ ಲಕ್ಷಾಂತರ ಮಂದಿ ಡೌನ್ಲೋಡ್ ಮಾಡಿ ವೀಕ್ಷಣೆ ಮಾಡಿದ್ದಾರೆ. ಕೊರೊನಾ ಹೊಡೆತ ಭಯದಿಂದ ಮೇಲೆದಿದ್ದ ಸಿನಿಮಾ ರಂಗಕ್ಕೆ ಪೈರಸಿ ದೊಟ್ಟ ಪೆಟ್ಟು ಕೊಟ್ಟಿದ್ದು, ಸ್ಯಾಂಡಲ್ ವುಡ್ ಸಿನಿ ರಂಗವನ್ನೇ ಬೆಚ್ಚಿ ಬೀಳಿಸಿದೆ. ಬಿಡುಗಡೆಯಾಗುವ ಪ್ರತಿ ಸಿನಿಮಾಗೂ ಇದೇ ಸ್ಥಿತಿ ಒದಗಿ ಬಂದರೆ ಸಿನಿಮಾ ಬಿಡುಗಡೆಗೆ ನಿರ್ಮಾಪಕರು ಭಯ ಬೀಳುವ ವಾತಾವರಣ ನಿರ್ಮಾಣವಾಗಿದೆ.
ಟೆಲಿಗ್ರಾಮ್ ಗೆ ನೋಟಿಸ್:
ಕೋಟಿಗೊಬ್ಬ -3 ಸಿನಿಮಾ ಪೈರಸಿ ದೂರು ಸಂಬಂಧ ಸಿಐಡಿ ಸೈಬರ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕೋಟಿಗೊಬ್ಬ -3 ಸಿನಿಮಾ ಲಿಂಕ್ ಅಪ್ಲೋಡ್ ತಾಂತ್ರಿಕ ವಿವರಗಳನ್ನು ಒದಗಿಸುವ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಸಿಐಡಿ ಸೈಬರ್ ಘಟಕದ ಅಧಿಕಾರಿಗಳು ದುಬೈನಲ್ಲಿರುವ ಟೆಲಿಗ್ರಾಮ್ ಆಡಳಿತ ಕಚೇರಿಯ ಮುಖ್ಯಸ್ಥರಿಗೆ ನೋಟಿಸ್ ನೀಡಿದ್ದಾರೆ. ಈ ಮೂಲಕ ಪೈರಸಿ ಮೂಲ ಹುಡುಕಲು ಮುಂದಾಗಿದ್ದಾರೆ.
ಯಾಕೆ ಟೆಲಿಗ್ರಾಮ್ ಬಳಕೆ:
ಸ್ಟಾರ್ ನಟರ ಸಿನಿಮಾಗಳನ್ನು ತಮಿಳುರಾಕರ್ಸ್ ವೆಬ್ ತಾಣದಲ್ಲಿ ಈ ಮೊದಲು ಲೀಕ್ ಮಾಡಲಾಗುತ್ತಿತ್ತು. ತಮಿಳು ಸಿನಿಮಾ ರಂಗಕ್ಕೆ ತಮಿಳು ರಾಕರ್ಸ್ ದೊಡ್ಡ ಕಾಟ ಕೊಟ್ಟಿದ್ದರು. ನಿರ್ಮಾಪಕರೆಲ್ಲರೂ ಸೇರಿ ತಮಿಳು ರಾಕರ್ಸ್ ವೆಬ್ ತಾಣವನ್ನೇ ಬ್ಲಾಕ್ ಮಾಡಿಸಿದ್ದರು. ಪೈರಸಿ ಕುರಿತ ಭೀತಿಯಿಂದ ಸ್ವಲ್ಪ ಪಾರಾಗಿದ್ದರು. ಆದರೆ, ಕ್ಲೌಡ್ ಆಧಾರತ ಟೆಲಿಗ್ರಾಮ್ ಸಂದೇಶ ವಿನಿಮಯ ಆಪ್ ಚಾಲ್ತಿಗೆ ಬಂದಂತೆ ಇದೀಗ ಟೆಲಿಗ್ರಾಮ್ ಚಾನೆಲ್ ಮಾಡಿಕೊಂಡು ಸಿನಿಮಾ ಲಿಂಕ್ ಹಾಕಲಾಗುತ್ತಿದೆ. ಕ್ಲೌಡ್ ಆಧಾರಿತ ಟೆಲಿಗ್ರಾಮ್ ಸಾಮಾಜಿಕ ಜಾಲ ತಾಣದಲ್ಲಿ ಅನಿಯಮಿತ ವಿಡಿಯೋ ರವಾನಿಸುವ ಅವಕಾಶವಿದ್ದು, ಇದನ್ನು ಬಳಸಿಕೊಂಡು ತಮಿಳು ರಾಕರ್ಸ್, ಕನ್ನಡ ರಾಕರ್ಸ್ ಸಿನಿಮಾಗಳನ್ನು ಟೆಲಿಗ್ರಾಮ್ ಸಾಮಾಜಿಕ ಜಾಲ ತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ಈ ಹಿಂದೆ ಹಲವು ಪೈರಸಿ ಪ್ರಕರಣದಲ್ಲಿ ಟೆಲಿಗ್ರಾಮ್ ಭಾರತದ ಮುಖ್ಯ ಕಚೇರಿಗೆ ನೋಟಿಸ್ ನೀಡಿದರೂ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಇದೀಗ ದುಬೈನಲ್ಲಿರುವ ಟೆಲಿಗ್ರಾಮ್ ಮುಖ್ಯ ಕಚೇರಿಯ ಮುಖ್ಯಸ್ಥರಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ ಎಂದು ಸಿಐಡಿ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಟೆಲಿಗ್ರಾಮ್ ನಲ್ಲಿ ಅಪ್ಲೋಡ್ ಗೆ ಬ್ರೇಕ್ ?
ಅನಿಯಮಿತ ವಿಡಿಯೋ ಕಳಿಸಲು ಅವಕಾಶ ನೀಡಿದ ಪರಿಣಾಮ ಭಾರತದಲ್ಲಿ ವಾಟ್ಸಪ್ ಗಿಂತಲೂ ಹೆಚ್ಚು ಮಂದಿ ಟೆಲಿಗ್ರಾಮ್ ಆಪ್ ಬಳಕೆ ಮಾಡುತ್ತಿದ್ದಾರೆ. ಇದನ್ನು ಅರಿತ ಪೈರಸಿ ಕಿರಾತರಕರು ಟೆಲಿಗ್ರಾಮ್ನ್ನು ಪೈರಸಿ ಸಿನಿಮಾ ಬಿಡುಗಡೆಗೆ ದೊಡ್ಡ ವೇದಿಕೆಯನ್ನಾಗಿ ಬಳಸುತ್ತಿದ್ದಾರೆ. ಸಿನಿಮಾ ತಾಂತ್ರಿಕ ತಂಡದಲ್ಲಿರುವರೇ ಶಾಮೀಲಾಗಿರುವ ಮಾತು ಕೇಳಿ ಬರುತ್ತಿವೆ. ಅಂತೂ ಕೋಟಿಗೊಬ್ಬ -3 ಚಿತ್ರತಂಡ ನೀಡಿರುವ ದೂರಿನ ತನಿಖೆಯೇ ಪೈರಸಿಯಲ್ಲಿ ಶಾಮೀಲಾಗಿರುವರನ್ನು ಪತ್ತೆ ಮಾಡಿ ಹೆಡೆಮುರಿ ಕಟ್ಟಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕು.
Recommended Video