ಸೋಮವಾರದಿಂದ ಕರ್ನಾಟಕದಲ್ಲಿ ಸಕಾಲ ಸಪ್ತಾಹ
ಬೆಂಗಳೂರು, ನವೆಂಬರ್ 29: ಸಕಾಲ ಯೋಜನೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕರ್ನಾಟಕ ಸರ್ಕಾರ ಸಕಾಲ ಸಪ್ತಾಹವನ್ನು ಆಯೋಜನೆ ಮಾಡಿದೆ. ನವೆಂಬರ್ 30ರಿಂದ ಡಿಸೆಂಬರ್ 19ರ ತನಕ ಸಪ್ತಾಹ ರಾಜ್ಯಾದ್ಯಂತ ನಡೆಯಲಿದೆ.
ಜನರಿಗೆ ನಿಗದಿತ ಕಾಲ ಮಿತಿಯಲ್ಲಿ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಸಕಾಲ ಯೋಜನೆಯನ್ನು ಜಾರಿಗೆ ತರಲಾಗಿದೆ. ವಿವಿಧ ಇಲಾಖೆಗಳಲ್ಲಿ ಬಾಕಿ ಉಳಿದಿರುವ ಸಕಾಲ ಅರ್ಜಿಗಳು ಹಾಗೂ ಮೇಲ್ಮನವಿಗಳನ್ನು ತ್ವರಿತ ವಿಲೇವಾರಿಗಾಗಿ ಸಪ್ತಾಹ ಕೈಗೊಳ್ಳಲಾಗಿದೆ.
ಸಕಾಲ ಸೇವೆ ಬಳಕೆ: ಬೆಂಗಳೂರಿಗೆ ಕೊನೆಯ ಸ್ಥಾನ
"ನವೆಂಬರ್ 30ರಿಂದ ಡಿಸೆಂಬರ್ 19ವರೆಗೆ ಸಕಾಲ ಸಪ್ತಾಹ ಹಮ್ಮಿಕೊಳ್ಳಲಾಗಿದೆ. ಹೊಸ ಅರ್ಜಿಗಳ ಸ್ವೀಕಾರದ ಜೊತೆ ಬಾಕಿ ಉಳಿದಿರುವ ಅರ್ಜಿಗಳನ್ನು ಸಹ ವಿಲೇವಾರಿ ಮಾಡಲಾಗುತ್ತದೆ" ಎಂದು ರಾಜ್ಯ ಸಕಾಲ ಮಿಷನ್ ನಿರ್ದೇಶಕಿ ಡಾ. ಬಿ. ಆರ್. ಮಮತಾ ಹೇಳಿದ್ದಾರೆ.
ನೇಮಕಾತಿ ಸ್ಥಗಿತ; ಹಲವರ ಕೈ ತಪ್ಪಲಿದೆ ಸರ್ಕಾರಿ ಉದ್ಯೋಗ!
"ರಾಜ್ಯದ 98 ಇಲಾಖೆಗಳಲ್ಲಿನ 1025 ಸೇವೆಗಳನ್ನು ಸಕಾಲ ವ್ಯಾಪ್ತಿಗೆ ತರಲಾಗಿದೆ. ಸಾರ್ವಜನಿಕರಿಗೆ ಸಕಾಲ ಬಗೆಗೆ ಹೆಚ್ಚಿನ ಮಾಹಿತಿ ನೀಡಿ ಜಾಗೃತಿ ಮೂಡಿಸುವ ಉದ್ದೇಶವನ್ನು ಸಪ್ತಾಹದಲ್ಲಿ ಹೊಂದಲಾಗಿದೆ" ಎಂದು ಬಿ. ಆರ್. ಮಮತಾ ತಿಳಿಸಿದರು.
ವಿಧಾನಸೌಧ; ಕಿರಿಯ ಸಹಾಯಕರ ಹುದ್ದೆಗಳು ರದ್ದು?
ಯಾವ-ಯಾವ ಇಲಾಖೆ; ನವೆಂಬರ್ 30ರಿಂದ ಡಿಸೆಂಬರ್ 5ರ ತನಕ ಕಂದಾಯ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಸಾರಿಗೆ ಇಲಾಖೆ ಒಳಗೊಂಡಂತೆ 4 ಇಲಾಖೆಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಲೇವಾರಿ ನಡೆಯಲಿದೆ.
ಡಿಸೆಂಬರ್ 7 ರಿಂದ 11ರವರೆಗೆ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಪ್ರಕರಣಗಳ ವಿಲೇವಾರಿ ಹಾಗೂ ಡಿಸೆಂಬರ್ 14 ರಿಂದ 19ರವರೆಗೆ ಸಕಾಲ ವ್ಯಾಪ್ತಿಗೆ ಒಳಪಡುವ ಉಳಿದ ಎಲ್ಲ ಸರ್ಕಾರಿ ಇಲಾಖೆಗಳ ಪ್ರಕರಣಗಳ ಅರ್ಜಿ ವಿಲೇವಾರಿ ನಡೆಯಲಿದೆ.
ಸಪ್ತಾಹದಲ್ಲಿ ಹೊಸ ಅರ್ಜಿಗಳನ್ನು ಸಹ ಸ್ವೀಕಾರ ಮಾಡಲಾಗುತ್ತದೆ. ಅವಧಿ ಮೀರಿ ಬಾಕಿ ಉಳಿಸಿಕೊಂಡ ಅರ್ಜಿಗಳ ವಿಲೇವಾರಿ ಮಾಡುವುದು ಸಹ ಸೇರಿದೆ. ಮೇಲ್ಮನವಿಗಳನ್ನು ಇತ್ಯರ್ಥಪಡಿಸಬೇಕು, ಅರ್ಜಿಗಳ ವಿಲೇವಾರಿ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು, ಸಾರ್ವಜನಿಕರಿಂದ ಬರುವ ಅರ್ಜಿಗಳನ್ನು ಸಕಾಲದಡಿಯಲ್ಲಿಯೇ ನೋಂದಾಯಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಹೊಸದಾಗಿ ಸ್ವೀಕರಿಸಿದ ಅರ್ಜಿಗಳನ್ನು ಈ ಸಪ್ತಾಹದಲ್ಲಿ ವಿಲೇವಾರಿ ಮಾಡಬೇಕು. ಪ್ರತಿ ಕಚೇರಿಯಲ್ಲಿ ಸಪ್ತಾಹದ ಬ್ಯಾನರ್ ಅಳವಡಿಸಬೇಕು. ಕಚೇರಿಯ ಪ್ರವೇಶ ದ್ವಾರದಲ್ಲಿ ಹೆಲ್ಪ್ ಡೆಸ್ಕ್ ಸ್ಥಾಪಿಸಿ, ಜನರಿಗೆ ಸಕಾಲ ಯೋಜನೆ ಕುರಿತು ಮಾಹಿತಿ ನೀಡಬೇಕು ಎಂದು ನಿರ್ದೇಶನ ನೀಡಲಾಗಿದೆ.