ಪ್ರಶಸ್ತಿಗೆ ಪಾತ್ರರಾದವರ ಸಾಧನೆಯನ್ನು ಅಕಾಡೆಮಿ ತಿಳಿಸಲಿ
ಬೆಂಗಳೂರು, ಸೆಪ್ಟೆಂಬರ್. 20: ಸಾಹಿತ್ಯ ಅಕಾಡೆಮಿ ಪ್ರೋ. ಕೆ. ಎಸ್. ಭಗವಾನ್ ಅವರಿಗೆ ಯಾವ ಆಧಾರದಲ್ಲಿ ಗೌರವ ಪ್ರಶಸ್ತಿ ಘೋಷಣೆ ಮಾಡಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಸಾಹಿತಿ ಆತ್ರಾಡಿ ಸುರೇಶ ಹೆಗ್ಡೆ ಆಗ್ರಹಿಸಿದ್ದಾರೆ.
ಬೆಂಗಳೂರು ಹಿರಿಯ ಸಾಹಿತಿಗಳಾದ ಪ್ರೊ.ಕೆ.ಎಸ್.ಭಗವಾನ್, ಡಾ.ರಹಮತ್ ತರೀಕೆರೆ, ಡಾ. ಬಿ.ಎನ್.ಸುಮಿತ್ರಾಬಾಯಿ, ಡಾ.ಮೊಗಳ್ಳಿ ಗಣೇಶ್, ಡಾ.ರಾಜೇಂದ್ರ ಚೆನ್ನಿ ಸೇರಿ ಐವರಿಗೆ 2013ನೆ ಸಾಲಿನ ಪ್ರತಿಷ್ಠಿತ ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ ಸಂದಿದೆ.
ಶನಿವಾರ ನಗರದ ಕನ್ನಡ ಭವನದಲ್ಲಿನ ಅಕಾಡೆಮಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದ ಅಕಾಡೆಮಿ ಅಧ್ಯಕ್ಷೆ ಪ್ರೊ.ಮಾಲತಿ ಪಟ್ಟಣಶೆಟ್ಟಿ, ಕನ್ನಡ ಸಾಹಿತ್ಯಕ್ಕೆ ನೀಡಿರುವ ಅಮೂಲ್ಯ ಕೊಡುಗೆಯನ್ನು ಪರಿಗಣಿಸಿ ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್, ಡಾ.ರಹಮತ್ ತರೀಕೆರೆ, ವಿಮರ್ಶಕಿ ಡಾ. ಬಿ.ಎನ್.ಸುಮಿತ್ರಾಬಾಯಿ, ಡಾ.ಮೊಗಳ್ಳಿ ಗಣೇಶ್, ಡಾ.ರಾಜೇಂದ್ರ ಚೆನ್ನಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದರು.
ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಗಳನ್ನು ನೀಡಿದವರನ್ನು ಅಕಾಡಮಿಯು ಗುರುತಿಸಿ ಸನ್ಮಾನಿಸುತ್ತಿರುವುದು ಸ್ವಾಗತಾರ್ಹವೇ. ಆದರೆ, ಇಂತಹ ಪ್ರಶಸ್ತಿಗಳನ್ನು ಘೋಷಣೆ ಮಾಡುವಾಗ, ಕನ್ನಡ ಸಾರಸ್ವತ ಲೋಕಕ್ಕೆ ಈ ಪ್ರಶಸ್ತಿ ವಿಜೇತರ ಕೊಡುಗೆಗಳೇನು ಅನ್ನುವುದನ್ನು ವಿಸ್ತೃತವಾಗಿ ತಿಳಿಸಬೇಕಾಗಿರುವುದು ಅತೀ ಅಗತ್ಯವಾಗಿದೆ.
ಒಂದು ಕಡೆ ಶ್ರೀರಾಮಯಣ ದರ್ಶನಂ ಗ್ರಂಥಕ್ಕೆ ಜ್ಞಾನಪೀಠ ಪ್ರಶಸ್ತಿ ಪಡೆದ ಡಾ. ಕುವೆಂಪು ಅವರನ್ನು 1979ರಲ್ಲಿ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಿರುವ ಕನ್ನಡ ಸಾಹಿತ್ಯ ಅಕಾಡೆಮಿ, ಇದೀಗ ಆ ಶ್ರೀರಾಮನನ್ನು ದಿನಬೆಳಗಾದರೆ ಬೀದಿಬೀದಿಗಳಲ್ಲಿ ತೆಗಳುವ ಪ್ರೊ. ಕೆ. ಎಸ್. ಭಗವಾನ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.
ಹೀಗಿರುವಾಗ, ಅಕಾಡೆಮಿಯು ತನ್ನ ಗೌರವವನ್ನು ಕಾಪಾಡಿಕೊಳ್ಳಲು, ಪ್ರಶಸ್ತಿಗೆ ಆಯ್ಕೆ ಮಾಡುವಾಗ ಬಳಸಿದ ಮಾನದಂಡ ಏನು ಅನ್ನುವುದರ ವಿಸ್ತೃತ ಮಾಹಿತಿಯನ್ನು, ಪತ್ರಿಕಾ ಹೇಳಿಕೆಗಳ ಮೂಲಕ ಈ ನಾಡಿನ ಜನಗೆತೆ ದಯವಿಟ್ಟು ಒದಗಿಸಬೇಕೆಂದು ಹೆಗ್ಡೆ ವಿನಂತಿ ಮಾಡಿಕೊಂಡಿದ್ದಾರೆ.