ಸಾಗರ್ ಸೈಕ್ಲೋನ್: 5 ರಾಜ್ಯಗಳಿಗೆ ಭಾರಿ ಮಳೆ ಮುನ್ನೆಚ್ಚರಿಕೆ
ಬೆಂಗಳೂರು, ಮೇ 19: ಏಡನ್ ಕೊಲ್ಲಿಯಲ್ಲಿ ಕೇಂದ್ರಿತವಾಗಿರುವ ಸಾಗರ್ ಚಂಡಮಾರುವ ಮುಂದಿನ 12 ಗಂಟೆಯೊಳಗೆ ತೀವ್ರಗೊಳ್ಳುವ ಸಾಧ್ಯತೆಯಿದ್ದು, ಕರ್ನಾಟಕ ಸೇರಿದಂತೆ 5 ರಾಜ್ಯಗಳ ಕರಾವಳಿ ಹಾಗೂ ಒಳನಾಡಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಕರ್ನಾಟಕ, ಕೇರಳ, ತಮಿಳುನಾಡು, ಗೋವಾ, ಮಹಾರಾಷ್ಟ್ರ ಹಾಗೂ ಲಕ್ಷದ್ವೀಪ ಸಮೂಹದಲ್ಲಿ ಸಾಗರ್ ಸೈಕ್ಲೋನ್ ಪ್ರಭಾವ ಕಂಡುಬರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಗಂಟೆಗೆ 70-80 ಕಿ.ಮೀ ವೇಗದ ಸುಂಟರ ಗಾಳಿಯು ಆಡೆನ್ ಕೊಲ್ಲಿ ಮತ್ತು ಈಶಾನ್ಯ ಅರಬ್ಬಿ ಸಮುದ್ರದ ಸುತ್ತಮುತ್ತಲ ಭಾಗದಲ್ಲಿ ಮುಂದಿನ 24 ಗಂಟೆ ಪ್ರಭಾವ ಬೀರಲಿದ್ದು, ಆ ನಂತರ ತೀವ್ರತೆ ಕಡಿಮೆಯಾಗಲಿದೆ ಎಂದು ಹೇಳಲಾಗಿದೆ.
ಬೆಂಗಳೂರು ಬೆಂಬಿಡದ ಮಾನ್ಸೂನ್ ಪೂರ್ವ ಮಳೆ!
ಪಶ್ಚಿಮ ಬಂಗಾಳ, ತ್ರಿಪುರಾ ಸೇರಿದಂತೆ ಹಲವೆಡೆ ಭಾರಿ ಬಿರುಗಾಳಿ ಸಹಿತ ಮಳೆ ಅವಾಂತರ ಸೃಷ್ಟಿಸಿದೆ. ಶುಕ್ರವಾರ ಮಧ್ಯಾಹ್ನ 3.30ರಿಂದ 4 ಗಂಟೆ ನಡುವೆ ಕೋಲ್ಕತ್ತಾದಲ್ಲಿ ಗಂಟೆಗೆ ಗರಿಷ್ಠ 92 ಕಿ.ಮೀ ವೇಗದಲ್ಲಿ ಬೀಸಿದ ಬಿರುಗಾಳಿಯಿಂದಾಗಿ ಹಲವು ಮರಗಳು ಧರೆಗುರುಳಿದ್ದು, ವಾಹನಗಳು ಜಖಂಗೊಂಡಿದೆ.
ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತೆಗೊಂಡಿತು. ದೆಹಲಿ, ಪಶ್ಚಿಮ ಬಂಗಾಳ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆ ಯಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.