6 ತಿಂಗಳೊಳಗೆ ಕನ್ನಡ ಕಲಿಯದಿದ್ದರೆ ಕರ್ತವ್ಯದಿಂದ ಬಿಡುಗಡೆ
ಬೆಂಗಳೂರು, ಆಗಸ್ಟ್ 08: 'ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅನ್ಯಭಾಷಿಕ ಅಧಿಕಾರಿಗಳು 6 ತಿಂಗಳ ಒಳಗೆ ಕನ್ನಡ ಕಲಿಯಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ತಾಕೀತು ಮಾಡಿದೆ.
6 ತಿಂಗಳೊಳಗೆ ಕನ್ನಡ ಕಲಿಯದಿದ್ದರೆ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಬೇಕು' ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸೂಚಿಸಿದ್ದು, ಈ ಕುರಿತು ರಾಷ್ಟ್ರೀಕೃತ ಬ್ಯಾಂಕ್, ಷೆಡ್ಯೂಲ್ಡ್ ಬ್ಯಾಂಕ್ ಹಾಗೂ ಗ್ರಾಮೀಣ ಬ್ಯಾಂಕ್ ಗಳ ಪ್ರಾಂತೀಯ ಮುಖ್ಯಸ್ಥರಿಗೆ ಕನ್ನಡ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಸೋಮವಾರ ಪತ್ರ ಬರೆದಿದ್ದಾರೆ,
'ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಬ್ಯಾಂಕ್ಗಳ ಆಡಳಿತ ವ್ಯವಸ್ಥೆಯಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ಸಿಗಬೇಕು' ಎಂದು ಸ್ಪಷ್ಟಪಡಿಸಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್ ಜಿ ಸಿದ್ದರಾಮಯ್ಯ ಸಂದರ್ಶನ
ಕನ್ನಡ ಭಾಷೆ ಕಲಿಯದ ಅನ್ಯಭಾಷಿಕ ಅಧಿಕಾರಿಗಳನ್ನು ಕರ್ತವ್ಯದಿಂದ ಬಿಡುಗಡೆ ಮಾಡಲು ನೇಮಕಾತಿ ನಿಯಮದಲ್ಲೂ ಅವಕಾಶ ಇದೆ' ಎಂಬುವುದನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
https://t.co/uBteZ9YkQW ಅನ್ಯಭಾಷಿಕ ಅಧಿಕಾರಿ/ಸಿಬ್ಬಂದಿ ವರ್ಗದವರು ನೇಮಕಾತಿ ಹೊಂದಿದ ಆರುತಿಂಗಳೊಳಗೆ ಕನ್ನಡಕಲಿಯದಿದ್ದಲ್ಲಿ ಸೇವೆಯಿಂದ ಬಿಡುಗಡೆಗೊಳಿಸಿ-ಎಸ್.ಜಿಸಿ pic.twitter.com/TxDwvYappN
— ಕ.ಅ.ಪ್ರಾ. (@kdabengaluru) August 7, 2017
'ಹಲವಾರು ಬ್ಯಾಂಕ್ಗಳು ಸ್ಥಳೀಯ ಭಾಷೆಯನ್ನು ಅನುಷ್ಠಾನಗೊಳಿಸುವ ಬದ್ಧತೆ ತೋರುತ್ತಿಲ್ಲ. ಬ್ಯಾಂಕಿನ ಆಡಳಿತ ವ್ಯವಹಾರದಲ್ಲಿ ತ್ರಿಭಾಷಾ ಸೂತ್ರದ ಅನ್ವಯ ಸ್ಥಳೀಯ ಭಾಷೆಯಲ್ಲಿ ಮಾಹಿತಿ ನೀಡುತ್ತಿಲ್ಲ.
ಇದರಿಂದ ಬಹಳಷ್ಟು ಬಡವರು ಹಾಗೂ ಗ್ರಾಮೀಣ ಜನರು ಬ್ಯಾಂಕಿಂಗ್ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಈ ಸೂಚನೆಗಳನ್ನು ಪಾಲಿಸಿರುವ ಬಗ್ಗೆ ಪ್ರಾಧಿಕಾರಕ್ಕೆ ವರದಿ ನೀಡಬೇಕು. ಶೀಘ್ರದಲ್ಲೇ ಬ್ಯಾಂಕ್ಗಳಿಗೆ ಭೇಟಿ ನೀಡಿ ಕನ್ನಡ ಅನುಷ್ಠಾನದ ಕುರಿತು ಪರಿಶೀಲಿಸುತ್ತೇವೆ' ಎಂದೂ ಅವರು ತಿಳಿಸಿದ್ದಾರೆ.