ಮಾಗಿದ ರಾಷ್ಟ್ರಪತಿ ಕೋವಿಂದ್, ಸಾಲುಮರದ ತಿಮ್ಮಕ್ಕನಿಗೆ 'ಬಾಗಿದಾಗ'
ಶನಿವಾರ (ಮಾ 16) ದೆಹಲಿಯ ರಾಷ್ಟ್ರಪತಿ ಭವನದ ದರ್ಬಾರ್ ಹಾಲ್ ನಲ್ಲಿ ದೇಶದ ಅತ್ಯುನ್ನತ 'ಪದ್ಮ ಪ್ರಶಸ್ತಿ' ವಿತರಣಾ ಸಮಾರಂಭ, ಕಿಕ್ಕಿರಿದು ತುಂಬಿದ ಸಭಾಂಗಣ. ಮೊದಲ ಸಾಲಿನಲ್ಲಿ ಪ್ರಧಾನಿ ಮೋದಿ, ಗೃಹಸಚಿವ ರಾಜನಾಥ್ ಸಿಂಗ್ ಆದಿಯಾಗಿ ಕ್ಯಾಬಿನೆಟ್ ಸಚಿವರು ಆಸೀನರಾಗಿದ್ದರು. ತಮ್ಮವರು ಪ್ರಶಸ್ತಿ ಸ್ವೀಕರಿಸುವ ಅಪೂರ್ವ ಗಳಿಗೆಯನ್ನು ಕಣ್ತುಂಬಿಸಿಕೊಳ್ಳಲು ಕುಟುಂಬದ ಸದಸ್ಯರೂ ಹಾಜರಿದ್ದರು.
ಕ್ರಿಕೆಟ್ ಆಟಗಾರ ಗೌತಂ ಗಂಭೀರ್, ನಟ ಮನೋಜ್ ಬಾಜ್ಪೇಯಿ, ಇಸ್ರೋ ವಿಜ್ಞಾನಿ ನಂಬಿ ನಾರಾಯಣ್ ಸೇರಿದಂತೆ ನಮ್ಮ ಕರ್ನಾಟಕದ ಹೆಮ್ಮೆಯ ಸಾಲುಮರದ ತಿಮ್ಮಕ್ಕನೂ ಪದ್ಮ ಪ್ರಶಸ್ತಿ ಸ್ವೀಕರಿಸುವ ಪಟ್ಟಿಯಲ್ಲಿದ್ದರು. ವ್ಯವಸ್ಥಿತ ಸಮಾರಂಭದಲ್ಲಿ ಸರತಿಯಲ್ಲಿ ಪ್ರಶಸ್ತಿಯನ್ನು ನೀಡುತ್ತಾ ಬರಲಾಗುತ್ತಿತ್ತು. ಅದರಂತೆಯೇ ತಿಮ್ಮಕ್ಕನ ಸರದಿ, " ಸಾಲುಮರದ ತಿಮ್ಮಕ್ಕ, ಸಮಾಜಸೇವಾ" ಎಂದು ನಿರೂಪಕರು ತಿಮ್ಮಕ್ಕನನ್ನು ಪ್ರಶಸ್ತಿ ಸ್ವೀಕರಿಸಲು ಆಹ್ವಾನಿಸಿದರು.
ಕೆಲವರಿಗೆ ಹೊರತಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಿಗೆ ಸಾಲುಮರದ ತಿಮ್ಮಕ್ಕ ಯಾರು ಎಂದು ಗೊತ್ತಿರಲಿಲ್ಲ. ಚಪ್ಪಾಳೆ ಹೊಡೆಯುತ್ತಲೇ ಕುತೂಹಲದಿಂದಲೇ ತಿಮ್ಮಕ್ಕ ಬರುವುದನ್ನು ನೋಡುತ್ತಿದ್ದರು. ನೂರಾಏಳು ವರ್ಷದ ತಿಮ್ಮಕ್ಕನನ್ನು ನೋಡಿದ ಕೂಡಲೇ ಚಪ್ಪಾಳೆಯ ಸದ್ದು ಇನ್ನಷ್ಟು ಜೋರಾಯಿತು. ಕೈಮುಗಿಯುತ್ತಲೇ ತಿಮ್ಮಕ್ಕ ಅಂಗರಕ್ಷಕರ ಸಹಾಯದೊಂದಿಗೆ ರಾಷ್ಟಪತಿ ಬಳಿ ಬಂದರು.
'ವಸುಧೈವ ಕುಟುಂಬಕಂ' ತತ್ವದಡಿ ಮುನ್ನಡೆಯೋಣ: ಕೋವಿಂದ್
ಪ್ರಧಾನಿ ಮೋದಿ ಚಪ್ಪಾಳೆ ಹೊಡೆಯುತ್ತಲೇ ತಿಮ್ಮಕ್ಕ ನಡೆದುಕೊಂಡು ಬರುತ್ತಿದ್ದನ್ನು ನೋಡುತ್ತಿದ್ದರು. 107ವರ್ಷದಲ್ಲೂ, ಲವಲವಿಕೆ, ಬತ್ತದ ಜೀವನೋತ್ಸಾಹ ಇತರರಿಗೆ ಮಾದರಿಯಂತಿರುವ ಸಾಲುಮರದ ತಿಮ್ಮಕ್ಕ, ರಾಷ್ಟ್ರಪತಿ ರಾಮನಾಥ್ ಕೋವಿಂದ ಅವರಿಂದ ಪ್ರಶಸ್ತಿ ಪದಕ ಮತ್ತು ಪತ್ರವನ್ನು ಸ್ವೀಕರಿಸಿದರು. ರಾಷ್ಟ್ರಪತಿ ಭವನದ ಶಿಷ್ಟಾಚಾರಗಳು ತಿಮ್ಮಕ್ಕನ ಮುಗ್ದತೆಗೆ ಅಡ್ಡಿಯಾಗಲಿಲ್ಲ. ರಾಷ್ಟ್ರಪತಿಗಳು ಮಾಡಿರುವ ಸಾಲುಸಾಲು ಟ್ವೀಟ್..
ಕೋವಿಂದ್ ಅಷ್ಟೇ ಗೌರವದಿಂದ ಶಿರಬಾಗಿ ತಿಮ್ಮಕ್ಕನಿಗೆ ನಮಸ್ಕರಿಸಿದರು
ತೀರಾ ಅಪರೂಪದ ಘಟನೆ ಎನ್ನುವಂತೆ, ಪ್ರಶಸ್ತಿ ಸ್ವೀಕರಿಸಿದ ಸಾಲುಮರದ ತಿಮ್ಮಕ್ಕ ರಾಷ್ಟ್ರಪತಿಗಳ ತಲೆಗೆ ಕೈಯಿಟ್ಟು ಆಶೀರ್ವದಿಸಿದರು, ರಾಮನಾಥ್ ಕೋವಿಂದ್ ಅಷ್ಟೇ ಗೌರವದಿಂದ ಶಿರಬಾಗಿ ತಿಮ್ಮಕ್ಕನಿಗೆ ನಮಸ್ಕರಿಸಿದರು. ಪ್ರಧಾನಿಯಾದಿಯಾಗಿ, ಈ ವಿದ್ಯಮಾನಕ್ಕೆ ಸಾಕ್ಷಿಯಾದವರು ಭಾರೀ ಕರತಾಡನದೊಂದಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಾಲುಮರದ ತಿಮ್ಮಕ್ಕ ಸೇರಿ 12 ಸಾಧಕಿಯರು ಭೂಮಿಕಾ ಪ್ರಶಸ್ತಿಗೆ ಆಯ್ಕೆ
ದೇಶದ ಮೊದಲ ಪ್ರಜೆ ಹಂತಕ್ಕೆ ಬಂದ ರಾಷ್ಟ್ರಪತಿ
ಹೋರಾಟದ ಹಾದಿಯಿಂದಲೇ ಬದುಕು ಕಟ್ಟಿಕೊಂಡು ದೇಶದ ಮೊದಲ ಪ್ರಜೆ ಹಂತಕ್ಕೆ ಬಂದ ರಾಷ್ಟ್ರಪತಿಗಳಿಗೆ, ತಿಮ್ಮಕ್ಕ ತಲೆಮೇಲೆ ಕೈಯಿಟ್ಟು ಆಶೀರ್ವದಿಸಿದಾಗ, ಅವರಿಗಾದ ಆನಂದ ಅವರ ಮುಖದಲ್ಲೇ ಹೇಳುತ್ತಿತ್ತು. ತಿಮ್ಮಕ್ಕನಿಗಿಂತ 32ವರ್ಷ ಚಿಕ್ಕವರಾಗಿರುವ ಕೋವಿಂದ್, ತನಗಾದ ಆನಂದದ ಆ ಕ್ಷಣವನ್ನು ಕನ್ನಡದಲ್ಲೇ ಟ್ವೀಟ್ ಮಾಡುವ ಮೂಲಕ ಹಂಚಿಕೊಂಡರು ಕೂಡಾ..
|
ಅರ್ಹ ಸಾಧಕರನ್ನು ಗೌರವಿಸುವ ಸುಯೋಗ ರಾಷ್ಟ್ರಪತಿಗಳದಾಗಿತ್ತು
"ಪದ್ಮ ಪುರಸ್ಕಾರ ಸಮಾರಂಭದಲ್ಲಿ ಭಾರತದ ಸರ್ವೋತ್ತಮ ಮತ್ತು ಅರ್ಹ ಸಾಧಕರನ್ನು ಗೌರವಿಸುವ ಸುಯೋಗ ರಾಷ್ಟ್ರಪತಿಗಳದಾಗಿತ್ತು. ಕರ್ನಾಟಕದ ಪರಿಸರವಾದಿ 107 ವರ್ಷ ವಯಸ್ಸಿನ ಈ ವರ್ಷದ ಪದ್ಮ ಪುರಸ್ಕೃತರಲ್ಲಿಯೇ ಹಿರಿಯರಾದ ಸಾಲು ಮರದ ತಿಮ್ಮಕ್ಕ ಅವರು ನನ್ನನ್ನು ಆಶೀರ್ವದಿಸಿದ್ದು ನನ್ನ ಮನದಾಳವನ್ನು ತಟ್ಟಿತು" . ಇದು ರಾಷ್ಟ್ರಪತಿಗಳು ಮಾಡಿರುವ ಟ್ವೀಟ್.
|
ಮಹಿಳೆಯರ ಸಂಕಲ್ಪ ಶಕ್ತಿ, ಧೃಢತೆ ಮತ್ತು ನಿರಂತರ ಪರಿಶ್ರಮ
ಇನ್ನೊಂದು ಟ್ವೀಟ್ ಕನ್ನಡದಲ್ಲೇ ಮಾಡಿದ ರಾಷ್ಟ್ರಪತಿಗಳು, " ಸಾಲು ಮರದ ತಿಮ್ಮಕ್ಕ ಅವರು ಸಾಮಾನ್ಯ ಭಾರತೀಯ ನಾಗರಿಕರ, ಅದರಲ್ಲಿಯೂ ವಿಶೇಷವಾಗಿ ಮಹಿಳೆಯರ ಸಂಕಲ್ಪ ಶಕ್ತಿ, ಧೃಢತೆ ಮತ್ತು ನಿರಂತರ ಪರಿಶ್ರಮವನ್ನು ಪ್ರತಿನಿಧಿಸುತ್ತಿದ್ದಾರೆ. ಅವರ ಮತ್ತು ಪ್ರತಿ ಪದ್ಮ ಪುರಸ್ಕೃತರ ಉದಾಹರಣೆಗಳು ನಮ್ಮ ಭಾರತವು ಇನ್ನಷ್ಟು ಔನ್ನತ್ಯವನ್ನು ಸಾಧಿಸಲು ಪ್ರೇರಕಶಕ್ತಿಯಾಗಲಿ" ಎಂದು ಟ್ವೀಟ್ ಮಾಡಿದ್ದಾರೆ.
|
ಕನ್ನಡ, ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಒಟ್ಟು ಆರು ಟ್ವೀಟ್
ಕನ್ನಡ, ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಒಟ್ಟು ಆರು ಟ್ವೀಟ್ ಅನ್ನು ರಾಷ್ಟ್ರಪತಿಗಳು ಮಾಡಿರುವುವು ವಿಶೇಷ. 107ವರ್ಷದ ತಿಮ್ಮಕ್ಕ ನನ್ನನ್ನು ಆಶೀರ್ವದಿಸಿದ ಕ್ಷಣವನ್ನು ನಾನೆಂದಿಗೂ ಮರೆಯುವುದಿಲ್ಲ ಎಂದು ರಾಷ್ಟ್ರಪತಿಗಳು ಟ್ವೀಟ್ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿರುವ ಹುಳಿಕಲ್ಲು ಗ್ರಾಮದವರಾದ ತಿಮ್ಮಕ್ಕ ಅವರು ತಮ್ಮ ಪತಿ ಚಿಕ್ಕಯ್ಯ ಅವರ ಜತೆಗೂಡಿ ಗ್ರಾಮದ ಹೆದ್ದಾರಿಯಲ್ಲಿ 4 ಕಿಲೋಮೀಟರ್ ಅಂತರದಲ್ಲಿ ಒಟ್ಟು 284 ಆಲದ (ಸಾಲು ಮರಗಳು)ಮರಗಳನ್ನು ಬೆಳೆಸಿದವರು.