ರಾಜ್ಯದಲ್ಲಿ ಬರ: ನೆರವಿಗಾಗಿ ಕೇಂದ್ರಕ್ಕೆ ಸಚಿವ ದೇಶಪಾಂಡೆ ಪತ್ರ
ಬೆಂಗಳೂರು, ನವೆಂಬರ್ 03: ರಾಜ್ಯದಲ್ಲಿ ಉಲ್ಬಣಿಸಿರುವ ಬರ ಪರಿಸ್ಥಿತಿ ಬಗ್ಗೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರು ಕೇಂದ್ರಕ್ಕೆ ಪತ್ರ ಬರೆದಿದ್ದು ನೆರವು ನೀಡುವಂತೆ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ತೀವ್ರ ಬರಗಾಲ ಇದ್ದು ರಾಜ್ಯದ ಬಹುತೇಕ ಭಾಗಗಳಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಅನುವಾಗುವಂತೆ ಆದಷ್ಟು ಬೇಗ ಎನ್.ಡಿ.ಆರ್.ಎಫ್ ವತಿಯಿಂದ ಪರಿಹಾರ ಬಿಡುಗಡೆ ಮಾಡಬೇಕು ಎಂದು ದೇಶಪಾಂಡೆ ಅವರು ಕೇಂದ್ರವನ್ನು ಪತ್ರಮುಖೇನ ಕೋರಿದ್ದಾರೆ.
ರಾಜ್ಯದಲ್ಲಿ ಹಿಂಗಾರು ಕೈಕೊಟ್ಟಿದ್ದು ಇಡೀ ರಾಜ್ಯದಲ್ಲಿ ಶೇಕಡ 49ರಷ್ಟು ಮಳೆ ಕೊರತೆ ಎದುರಾಗಿದೆ. ಉತ್ತರ ಒಳನಾಡಿನಲ್ಲಿ ಬಿತ್ತನೆ ಮಾಡಿರುವ ಶೇಕಡ 90ರಷ್ಟು ಹಿಂಗಾರು ಬೆಳೆ ಒಣಗುತ್ತಿದ್ದು, ಆ ಭಾಗದಲ್ಲಿ ಶೇಕಡ 67ರಷ್ಟು ತೀವ್ರ ಮಳೆ ಕೊರತೆ ಎದುರಾಗಿದೆ, ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಕೇಂದ್ರ ಸರಕಾರವು ಬರ ಅಧ್ಯಯನಕ್ಕೆ ಕಳಿಸಿದ್ದ 10 ಸದಸ್ಯರ ತಂಡವು ತನ್ನ ವರದಿಯನ್ನು ಒಂದೆರಡು ದಿನಗಳಲ್ಲಿ ನ್ಯಾಷನಲ್ ಎಕ್ಸಿಕ್ಯುಟೀವ್ ಕಮಿಟಿಗೆ ಸಲ್ಲಿಸಲಿದೆ. ಹೀಗಾಗಿ, ಪರಿಹಾರ ಬಿಡುಗಡೆ ಪ್ರಕ್ರಿಯೆಯನ್ನು ಚುರುಕುಗೊಳಿಸಿ, ಶೀಘ್ರವೇ ರಾಜ್ಯಕ್ಕೆ ಎನ್.ಡಿ.ಆರ್.ಎಫ್. ನಿಧಿಯಿಂದ ಪರಿಹಾರವನ್ನು ಬಿಡುಗಡೆ ಮಾಡಬೇಕು ಎಂದು ದೇಶಪಾಂಡೆ ಕೋರಿದ್ದಾರೆ.
ದೇಶಪಾಂಡೆ ಅವರು ಪ್ರಧಾನಿ ನರೇಂದ್ರ ಮೋದಿಯವರಲ್ಲದೆ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಕೃಷಿ ಸಚಿವ ರಾಧಾಮೋಹನ್ ಸಿಂಗ್ ಅವರಿಗೂ ಪತ್ರವನ್ನು ಕಳುಹಿಸಿದ್ದಾರೆ.