ಲಾಕ್ ಡೌನ್ ವಿರುದ್ಧ ಗ್ರಾಮೀಣ ಭಾಗದಲ್ಲಿ ದಂಗೆಯಾಗಲಿದೆ: ಸಿದ್ದರಾಮಯ್ಯ
ಬೆಂಗಳೂರು, ಮೇ 10: ಕೊರೊನಾಗಿಂತಲೂ ರಾಜ್ಯ ಸರ್ಕಾರದ ಅವೈಜ್ಞಾನಿಕ, ಜನ ವಿರೋಧಿ ಕ್ರಮಗಳಿಂದ ಸಾರ್ವಜನಿಕರು ಬೇಸತ್ತಿದ್ದಾರೆ. ಗೊಂದಲದ ಗೂಡಾಗಿರುವ ಲಾಕ್ ಡೌನ್ ವಿರುದ್ಧ ಗ್ರಾಮೀಣ ಭಾಗದಲ್ಲಿ ದಂಗೆಯಾಗಲಿದೆ ಎಂಬ ಆತಂಕ ಮೂಡಿದೆ ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಲಾಕ್ ಡೌನ್ ಮಾರ್ಗಸೂಚಿಯನ್ನು ಮತ್ತೊಮ್ಮೆ ಪರಿಷ್ಕರಿಸಲಾಗಿದ್ದು, ಬೆಳಗ್ಗೆ 6 ರಿಂದ 10 ರವರೆಗೆ ದಿನಸಿ, ತರಕಾರಿ, ಮೀನು ಮಾಂಸ ಖರೀದಿಗೆ ಅವಕಾಶ ನೀಡಲಾಗಿದೆ. ಆದರೆ, ವಾಹನ ಸಂಚಾರ ನಿರ್ಬಂಧಿಸಿ, ನಡೆದುಕೊಂಡೇ ಹೋಗಬೇಕು ಎಂಬ ನಿಯಮ ಮೂರ್ಖತನದ ಪರಮಾವಧಿ, ಹಳ್ಳಿಗಳಿಂದ ಐದರಿಂದ ಹತ್ತಾರು ಕಿ.ಮೀ ದೂರದ ಪಟ್ಟಣದ ಮಾರುಕಟ್ಟೆಗೆ ನಿಗದಿತ ಅವಧಿಯಲ್ಲಿ ನಡೆದುಕೊಂಡು ಹೋಗಿ ಬರುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ. ಹಿರಿಯರು, ಅಶಕ್ತರು ದಿನನಿತ್ಯ ಹೊರಗೆ ತೆರಳುವುದು ಕಷ್ಟವಾಗಲಿದೆ.
ಲಾಠಿ ಬೀಸುವ ''ಖಾಕಿ ರೌಡಿಸಂ'' ವಿರುದ್ಧ ದೂರು ನೀಡುವುದು ಹೇಗೆ?
ಗ್ರಾಮೀಣ ಭಾಗದಲ್ಲಿ ಬ್ಯಾಂಕ್, ಎಟಿಎಂ, ಹೋಟೆಲ್ ಎಲ್ಲವೂ ಬಾಗಿಲು ತೆರೆಯುವುದೇ ನಿಧಾನವಾಗಿ, ಎಲ್ಲಾ ನಿಯಮಗಳನ್ನು ಬೆಂಗಳೂರನ್ನು ಗಮನದಲ್ಲಿಟ್ಟುಕೊಂಡು ಮಾತ್ರ ಮಾಡಿದಂತೆ ಇದೆ, ಅಧಿಕಾರಿಗಳು ಮೊದಲು ಹಳ್ಳಿಗಳಿಗೆ ತೆರಳಿ ಅಲ್ಲಿನ ವಾಸ್ತವ ಸ್ಥಿತಿ ಅರಿಯಲಿ ಎಂದರು.
Recommended Video
ಜನ ಉದ್ಯೋಗಗಳನ್ನು ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಸರ್ಕಾರ ಪ್ರತಿಯೊಬ್ಬರಿಗೂ ತಿಂಗಳಿಗೆ ತಲಾ 10 ಕೆ.ಜಿ. ಅಕ್ಕಿ ನೀಡಬೇಕು. ಜೊತೆಗೆ ಬೇಳೆ, ಅಡುಗೆ ಎಣ್ಣೆ, ಮುಂತಾದ ದಿನಸಿ ಪದಾರ್ಥಗಳುಳ್ಳ ಕಿಟ್ಗಳನ್ನು ನೀಡಬೇಕು. ಪ್ರತಿ ಬಿ.ಪಿ.ಎಲ್ ಕುಟುಂಬಕ್ಕೆ ಮೊದಲಿಗೆ ರೂ.10,000 ಗಳನ್ನು ನೀಡಬೇಕು. ನಂತರ ತಿಂಗಳಿಗೆ ರೂ.6,000 ಗಳನ್ನು ನೀಡಬೇಕು. ರಾಜ್ಯದ ರೈತರಿಗೆ, ಕುಶಲಕರ್ಮಿ ಸಮುದಾಯಗಳಿಗೆ, ಕಾರ್ಮಿಕರಿಗೆ, ಡ್ರೈವರುಗಳಾದಿಯಾಗಿ ಎಲ್ಲ ದುಡಿಯುವ ವರ್ಗಗಳಿಗೆ ರೂ.10,000 ಗಳನ್ನು ನೀಡಬೇಕು. ಸಣ್ಣ, ಅತಿ ಸಣ್ಣ, ಸೂಕ್ಷ್ಮ, ಗೃಹ ಕೈಗಾರಿಕೆಗಳಿಗೆ, ವಾಹನಗಳ ಮಾಲೀಕರ ಸಭೆಗಳನ್ನು ನಡೆಸಿ ಸೂಕ್ತ ಪ್ಯಾಕೇಜ ಅನ್ನು ನೀಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.