ಆರ್ಟಿಇ ಶುಲ್ಕ ಮರುಪಾವತಿ ಕುರಿತು ಶಿಕ್ಷಣ ಇಲಾಖೆ ಮಹತ್ವದ ತೀರ್ಮಾನ!
ಬೆಂಗಳೂರು, ಫೆ. 22: ಕೊರೊನಾವೈರಸ್ ಸೋಂಕು ಪ್ರಸರಣ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಹಾಜರಾತಿ ಮತ್ತು ದಾಖಲಾತಿ ಕಡಿಮೆಯಾಗಿರುವುದರಿಂದ ಪ್ರಸ್ತುತ ವರ್ಷಕ್ಕೆ ಸೀಮಿತಗೊಳಿಸಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವ ಮತ್ತು ಆರ್ಟಿಇ ಶುಲ್ಕ ಮರುಪಾವತಿಗೆ ಸಂಬಂಧಿಸಿದಂತೆ ಹಾಜರಾತಿ ಮತ್ತು ದಾಖಲಾತಿ ಕುರಿತ ನಿಯಮಗಳಲ್ಲಿ ವಿನಾಯ್ತಿ ನೀಡಲು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ.
ಹಾಗೆಯೇ ಕೋರೋನಾ ಹಿನ್ನೆಲೆಯಲ್ಲಿ ಶಾಲೆಗಳು ತಡವಾಗಿ ಆರಂಭವಾಗಿರುವುದು ಮತ್ತು ಮಕ್ಕಳ ಶಾಲಾ ಹಾಜರಾತಿಯನ್ನು ಪೋಷಕರು ಮತ್ತು ವಿದ್ಯಾರ್ಥಿಗಳ ವಿವೇಚನೆಗೆ ಬಿಟ್ಟು ಪ್ರಸ್ತುತ ವರ್ಷ ಹಾಜರಾತಿ ಕಡ್ಡಾಯವಲ್ಲವೆಂದು ಶಿಕ್ಷಣ ಇಲಾಖೆಯೇ ಆದೇಶಿಸಿರುವ ಹಿನ್ನೆಲೆಯಲ್ಲಿ ಖಾಸಗಿ ಅನುದಾನರಹಿತ ಶಾಲೆಗಳ ಹಿತದೃಷ್ಟಿಯಿಂದ ಪ್ರಸ್ತುತ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಮಕ್ಕಳಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುವ ಮತ್ತು ಆರ್.ಟಿ.ಇ. ಶುಲ್ಕ ಮರುಪಾವತಿಗೆ ಸಂಬಂಧಿಸಿದಂತೆ ಹಾಜರಾತಿ ಮತ್ತು ದಾಖಲಾತಿ ಕುರಿತು ನಿಯಮದಲ್ಲಿ ಸಡಿಲಿಕೆ ಮಾಡಿ ವಿನಾಯ್ತಿ ನೀಡಬೇಕೆಂದು ಸಚಿವರು ಸೂಚಿಸಿದ್ದಾರೆ.
ಆರ್.ಟಿ.ಇ. ಶುಲ್ಕ ಮರುಪಾವತಿ
ರಾಜ್ಯದ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ದಾಖಲಾತಿ ಮತ್ತು ಹಾಜರಾತಿಗಳ ಆಧಾರದಲ್ಲಿ ಶಾಲೆಗಳ ಮಾನ್ಯತೆ ನವೀಕರಿಸುವ ಮೂಲಕ ವಿದ್ಯಾರ್ಥಿಗಳ ಆರ್.ಟಿ.ಇ. ಶುಲ್ಕ ಮರುಪಾವತಿ ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷೆಗಳನ್ನು ಬರೆಯಲು ಅವಕಾಶಗಳನ್ನು ಕಲ್ಪಿಸುವ ಪ್ರಕ್ರಿಯೆಗಳು ಪ್ರತಿ ಶೈಕ್ಷಣಿಕ ಸಾಲಿನಲ್ಲಿ ಸಾಮಾನ್ಯ ಪ್ರಕ್ರಿಯೆಗಳಾಗಿವೆ.
Recommended Video
ಈ ವರ್ಷ ವಿನಾಯಿತಿ
ಆದರೆ ಈ ವರ್ಷ ಕೊರೋನಾ ಹಿನ್ನೆಲೆಯಲ್ಲಿ ಮಕ್ಕಳ ದಾಖಲಾತಿ ಕಡಿಮೆ ಇದೆ. ಹಾಗೆಯೇ ಹಾಜರಾತಿಯೂ ಕಡಿಮೆ ಇದೆ. ಅಲ್ಲದೇ ಇಲಾಖೆಯೇ ಹಾಜರಾತಿಗೆ ವಿನಾಯ್ತಿ ಸಹ ನೀಡಿದೆ. ಹೀಗಿರುವಾಗ ಖಾಸಗಿ ಅನುದಾನ ರಹಿತ ಶಾಲೆಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಪ್ರಸ್ತುತ ಶೈಕ್ಞಣಿಕ ವರ್ಷಕ್ಕೆ ಸೀಮಿತಗೊಳಿಸಿ ಈ ನಿಟ್ಟಿನಲ್ಲಿ ವಿನಾಯಿತಿ ನೀಡುವುದು ಮತ್ತು ಉಳಿದ ಷರತ್ತುಗಳನ್ನು ಖಚಿತಪಡಿಸಿಕೊಂಡು ಕ್ರಮ ವಹಿಸಬೇಕೆಂದು ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ಸಚಿವ ಸುರೇಶ್ ಕುಮಾರ್ ಅವರು ಟಿಪ್ಟಣಿಯಲ್ಲಿ ಸೂಚಿಸಿದ್ದಾರೆ.
ಆರ್ಟಿಇ ಶುಲ್ಕದ ನಿರಾಳತೆ
ಸರ್ಕಾರದ ಈ ಕ್ರಮದಿಂದಾಗಿ ಖಾಸಗಿ ಶಾಲೆಗಳಿಗೆ ಆರ್ ಟಿ ಇ ಶುಲ್ಕ ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷೆಗೆ ವಿದ್ಯಾರ್ಥಿಗಳ ಹಾಜರಾತಿಗೆ ಇದ್ದ ಹಾಜರಾತಿ/ದಾಖಲಾತಿ ಸಂಖ್ಯೆ ಕುರಿತ ನಿಯಮ ಸಡಿಲಿಕೆಯಿಂದ ಪ್ರಸ್ತುತ ವರ್ಷಕ್ಕೆ ಸಂಬಂಧಿಸಿದಂತೆ ನಿರಾಳತೆ ಬಂದಂತಾಗಿದೆ.
ಇಂದಿನಿಂದ ತರಗತಿಗಳು ಆರಂಭ
ಕೋವಿಡ್ ತಾಂತ್ರಿಕ ಸಲಹಾ ಸಮಿತಿ 5ನೇ ಬಾರಿ ಸಭೆ ನಡೆಸಿ ಪೂರ್ಣ ಪ್ರಮಾಣದಲ್ಲಿ ಶಾಲೆಗಳನ್ನು ಆರಂಭಿಸುವ ಕುರಿತು ಮಹತ್ವದ ಸಲಹೆ ನೀಡಿತ್ತು. ಅದರಂತೆ ಇಂದಿನಿಂದ ರಾಜ್ಯದಲ್ಲಿ 6, 7, 8 ಪೂರ್ಣ ಪ್ರಮಾಣದಲ್ಲಿ ಆರಂಭವಾಗಿವೆ. ವಿದ್ಯಾರ್ಥಿಗಳು ಆತಂಕ ಬಿಟ್ಟು ಶಾಲೆಯತ್ತ ಹೆಜ್ಜೆ ಹಾಕಿದ್ದು, ಹಾಜರಾತಿ ಕುರಿತು ಇನ್ನಷ್ಟೇ ಶಿಕ್ಷಣ ಇಲಾಖೆಯಿಂದ ಮಾಹಿತಿ ಬರಬೇಕಿದೆ. ಇವತ್ತು ಆಫ್ಲೈನ್ ತರಗತಿಗಳು ಆರಂಭವಾಗಿದ್ದರೂ ಆನ್ಲೈನ್ನಲ್ಲೂ ವಿದ್ಯಾಭ್ಯಾಸ ಮುಂದುವರೆಸಲಿ ಶಿಕ್ಷಣ ಇಲಾಖೆ ಅವಕಾಶ ಮಾಡಿಕೊಟ್ಟಿದೆ.