ಗೌರಿ ಲಂಕೇಶ್ ಹತ್ಯೆ ಹಿಂದೆ ಸೇನೆಯ ನಿವೃತ್ತ ಕರ್ನಲ್?
ಬೆಂಗಳೂರು, ಜುಲೈ 6: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಲಪಂಥೀಯ ಸಂಘಟನೆಯೊಂದಿಗೆ ಗುರುತಿಸಿಕೊಂಡಿರುವ ಭಾರತೀಯ ಸೇನೆಯ ನಿವೃತ್ತ ಕರ್ನಲ್ ಸೇರಿದಂತೆ ನಾಲ್ವರು ಪ್ರಭಾವಿ ಮುಖಂಡರ ಕೈವಾಡ ಇರುವ ಬಗ್ಗೆಯೂ ವಿಶೇಷ ತನಿಖಾ ದಳದ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಪ್ರಮುಖರು ಈ ಪ್ರಕರಣದಲ್ಲಿ ಭಾಗಿಯಾಗಿರುವ ಸಂದೇಹದಲ್ಲಿ ಅವರ ವಿರುದ್ಧ ಸಾಕ್ಷ್ಯಗಳನ್ನು ಸಂಗ್ರಹಿಸಲು ಎಸ್ಐಟಿ ಪ್ರಯತ್ನಿಸುತ್ತಿದೆ.
ಗೌರಿ ಲಂಕೇಶ್ ಹತ್ಯೆ : ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ
ಹಿಂದೂ ಧರ್ಮದ ವಿರುದ್ಧ ಅವಹೇಳನಾಕಾರಿಯಾಗಿ ಮಾತನಾಡಿದ್ದಾರೆ ಎನ್ನಲಾದ ಗೌರಿ ಅವರನ್ನು ಮುಗಿಸುವಂತೆ ಅಮೋಲ್ ಕಾಳೆಗೆ ನಾಲ್ವರು ಆದೇಶ ನೀಡಿದ್ದರು ಎಂದು ಶಂಕಿಸಲಾಗಿದೆ.
ಬಲಪಂಥೀಯ ಸಂಘಟನೆಯಲ್ಲಿ ಪ್ರಮುಖ ಹುದ್ದೆಯಲ್ಲಿ ಇರುವ ನಾಲ್ವರು ಈ ಸಂಚಿನಲ್ಲಿ ಭಾಗಿಯಾದ ಅನುಮಾನವಿದೆ. ಅವರಲ್ಲಿ ಒಬ್ಬರು ನಿವೃತ್ತ ಕರ್ನಲ್ ಆಗಿದ್ದಾರೆ. ಕೊಲೆಗಾರನಿಗೆ ಬಂದ ಫೋನ್ ಕರೆ ಅವರಿಂದ ಬಂದಿದೆ ಎಂದು ನಾವು ನಂಬಿದ್ದರೂ ಅದಕ್ಕೆ ಬಲವಾದ ಸಾಕ್ಷ್ಯ ಲಭ್ಯವಿಲ್ಲ. ಅವರ ವಿರುದ್ಧ ಸಾಕ್ಷ್ಯಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ನಿರತರಾಗಿದ್ದೇವೆ ಎಂದು ಎಸ್ಐಟಿಯ ಮೂಲಗಳು ತಿಳಿಸಿವೆ.
ಈ ಪ್ರಕರಣದಲ್ಲಿ ಕನಿಷ್ಠ ಮೂರು ಮಂದಿ ಭಾಗಿಯಾಗಿದ್ದಾರೆ. ಅವರ ಬಂಧನವಾಗದಂತೆ ತಡೆದು ತಲೆಮರೆಸಿಕೊಳ್ಳಲು ಸಂಘಟನೆಯು ಸಹಾಯ ಮತ್ತು ಹಣಕಾಸಿನ ನೆರವು ನೀಡುತ್ತಿದೆ ಎನ್ನಲಾಗಿದೆ.
ಮಂಪರು ಪರೀಕ್ಷೆಗೆ ಗೌರಿ ಹತ್ಯೆ ಆರೋಪಿ ಒಪ್ಪಿಗೆ, ಹೊರ ಬರುತ್ತಾ ಸತ್ಯ?
ಅಮೋಲ್ ಕಾಳೆ, ಗೌರಿ ಅವರ ಹತ್ಯೆಯ ಯೋಜನೆಯನ್ನು ರೂಪಿಸಿ ಕಾರ್ಯರೂಪಕ್ಕೆ ತಂದಿದ್ದ. ಈ ಕೊಲೆಯ ಸಂಚನ್ನು ರೂಪಿಸಿದ್ದು ಆತನೇ ಆಗಿದ್ದರೂ, ಬೇರೆ ಸಂಚುಕೋರರ ಪರವಾಗಿ ಈ ಕೊಲೆ ಮಾಡಿದ್ದಾನೆ ಎಂದು ಎಸ್ಐಟಿ ಅನುಮಾನ ವ್ಯಕ್ತಪಡಿಸಿದೆ.
ಇಡೀ ಕಾರ್ಯಾಚರಣೆಗೆ ಬಲಪಂಥೀಯ ಸಂಘಟನೆಯೊಂದು ಹಣಕಾಸಿನ ನೆರವು ನೀಡಿದೆ.
ಗೌರಿ ಅವರ ಹತ್ಯೆ ಸಂಚು ಆರಂಭವಾದ 2017ರ ಜನವರಿಯಿಂದಲೂ ಅಮೋಲ್ ಕಾಳೆಗೆ ಪ್ರತಿ ತಿಂಗಳೂ ಕನಿಷ್ಠ 1.25 ಲಕ್ಷ ರೂಪಾಯಿ ನೀಡಲಾಗುತ್ತಿತ್ತು. ತನ್ನ ಕೆಲಸಕ್ಕೆ ಬೇಕಾದವರನ್ನು ನೇಮಿಸಿಕೊಳ್ಳಲು ಮತ್ತು ಇತರೆ ಕೆಲಸಗಳಿಗಾಗಿ ಹಣ ನೀಡಲಾಗುತ್ತಿತ್ತು ಎಂದು ಮೂಲಗಳು ಹೇಳಿವೆ.