ಈ ರಾಜ್ಯಗಳಿಂದ ಕರ್ನಾಟಕಕ್ಕೆ ಆಗಮಿಸುವವರಿಗೆ ಆರ್ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ
ಬೆಂಗಳೂರು, ಜು.31: ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಮೂರನೇ ಅಲೆಯ ಉಂಟಾಗುವ ಭೀತಿಯ ಮಧ್ಯೆ ಕೆಲವು ರಾಜ್ಯಗಳಲ್ಲಿ ಕೊರೊನಾ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿದೆ. ಕರ್ನಾಟಕದ ನೆರೆಯ ರಾಜ್ಯಗಳಾದ ಕೇರಳ ಮತ್ತು ಮಹಾರಾಷ್ಟ್ರದಲ್ಲಿಯೂ ಕೊರೊನಾ ಸೋಂಕು ಪ್ರಕರಣಗಳು ಏರಿಕೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ನೆರೆಯ ಕೇರಳ ಮತ್ತು ಮಹಾರಾಷ್ಟ್ರದಿಂದ ರಾಜ್ಯಕ್ಕೆ ಪ್ರವೇಶಿಸುವವರಿಗೆ ಆರ್ಟಿಪಿಸಿಆರ್ ಕೋವಿಡ್ ನೆಗೆಟಿವ್ ಫಲಿತಾಂಶವು ಕಡ್ಡಾಯ ಮಾಡಲಾಗಿದೆ.
ಕೇರಳ ಮತ್ತು ಮಹಾರಾಷ್ಟ್ರದಿಂದ ಆಗಮಿಸುವವರು ತಮ್ಮ ಪ್ರಯಾಣ ಆರಂಭಕ್ಕೂ ಸುಮಾರು 72 ಗಂಟೆಗೂ ಮುನ್ನಾ ಮಾಡಿಸಿದ ಕೋವಿಡ್ ಆರ್ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯವಾಗಿದೆ ಎಂದು ಕರ್ನಾಟಕವು ಇಂದು ತನ್ನ ಪರಿಷ್ಕರಿಸಿದ ಮಾರ್ಗಸೂಚಿಯಲ್ಲಿ ತಿಳಿಸಿದೆ. ಕರ್ನಾಟಕ ಸರ್ಕಾರವು ಹೊರಡಿಸಿದ ಸುತ್ತೋಲೆಯ ಪ್ರಕಾರ ಇದು ಸಂದರ್ಶಕರ ಕೋವಿಡ್ ಲಸಿಕೆ ಸ್ಥಿತಿಯನ್ನು ಲೆಕ್ಕಿಸದೆ ಎಲ್ಲರೂ ಕೋವಿಡ್ ಆರ್ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿರಬೇಕಾಗಿದೆ.
ರಾಜ್ಯಕ್ಕೆ ಆಗಸ್ಟ್ನಲ್ಲಿ ಕೊರೊನಾ 3ನೇ ಅಲೆ ಆತಂಕ:ತುರ್ತು ಸಭೆ ಕರೆದ ಸಿಎಂ ಬಸವರಾಜ ಬೊಮ್ಮಾಯಿ!
ಕರ್ನಾಟಕದಲ್ಲಿ ಗುರುವಾರ 2,052 ಹೊಸ ಕೋವಿಡ್ ಪ್ರಕರಣಗಳು ದಾಖಲಾಗುವ ಮೂಲಕ ದಿಡೀರ್ ಕೋವಿಡ್ ಪ್ರಕರಣಗಳು ಏರಿಕೆಯಾಗಿದೆ. ಇದಾಗಿ ಎರಡು ದಿನಗಳ ನಂತರ ಕರ್ನಾಟಕ ಸರ್ಕಾರವು ಈ ಕ್ರಮವನ್ನು ಕೈಗೊಂಡಿದೆ.
ಕೇರಳದ ನಂತರ, ನೆರೆಯ ಕರ್ನಾಟಕ ಮತ್ತು ತಮಿಳುನಾಡು ಕೂಡ ಗುರುವಾರ ಹೊಸ ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಳ ದಾಖಲಿಸಿದೆ. ಕರ್ನಾಟಕದಲ್ಲಿ 2,052 ಹೊಸ ಕೋವಿಡ್ -19 ಪ್ರಕರಣಗಳು ಮತ್ತು 35 ಸಾವುಗಳು ಗುರುವಾರ ವರದಿಯಾಗಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 29,01,247 ಕ್ಕೆ ಏರಿತ್ತು. ಹಾಗೆಯೇ ಬುಧವಾರದ 1,531 ಹೊಸ ಪ್ರಕರಣಗಳಿಂದ ದೈನಂದಿನ ಪ್ರಮಾಣವು 34 ಪ್ರತಿಶತದಷ್ಟು ಗುರುವಾರ ಹೆಚ್ಚಾಗಿದೆ. ಅಂದರೆ ಹಿಂದಿನ ದಿನದ ಕೋವಿಡ್ ಪ್ರಕರಣಗಳ ಸಂಖ್ಯೆಗಿಂತ 376 ಕ್ಕಿಂತ ತೀವ್ರ ಹೆಚ್ಚಾಗಿದೆ.
ಆರ್ಟಿ-ಪಿಸಿಆರ್ ಪರೀಕ್ಷೆಗಳ ನೆಗೆಟಿವ್ ವರದಿಯು ವಿಮಾನಗಳು, ರೈಲುಗಳು, ಬಸ್ಗಳು ಮತ್ತು ವೈಯಕ್ತಿಕ ಸಾರಿಗೆಯ ಮೂಲಕ ಕರ್ನಾಟಕ ರಾಜ್ಯಕ್ಕೆ ಕೇರಳ ಹಾಗೂ ಮಹಾರಾಷ್ಟ್ರದಿಂದ ಪ್ರವೇಶಿಸುವ ಎಲ್ಲರಿಗೂ ಕಡ್ಡಾಯವಾಗಿದೆ ಎಂದು ಸರ್ಕಾರದ ಸುತ್ತೋಲೆಯಲ್ಲಿ ಹೇಳಲಾಗಿದೆ.
"ವಿಮಾನಯಾನ ಸಂಸ್ಥೆಗಳು 72 ಗಂಟೆಗಳಿಗಿಂತ ಹಳೆಯದಾದ ಆರ್ಟಿ-ಪಿಸಿಆರ್ ಕೋವಿಡ್ ನೆಗೆಟಿವ್ ಪರೀಕ್ಷೆಗಳ ಪ್ರಮಾಣಪತ್ರಗಳನ್ನು ಹೊಂದಿರುವ ಪ್ರಯಾಣಿಕರಿಗೆ ಮಾತ್ರ ಬೋರ್ಡಿಂಗ್ ಪಾಸ್ಗಳನ್ನು ನೀಡಬೇಕು," ಎಂದು ಕರ್ನಾಟಕ ಸರ್ಕಾರವು ನಿರ್ದೇಶಿಸಿದೆ. ಹಾಗೆಯೇ ರೈಲ್ವೇ ಅಧಿಕಾರಿಗಳಿಗೆ ಮತ್ತು ಬಸ್ಗಳ ಕಂಡಕ್ಟರ್ಗಳಿಗೆ ಇದೇ ರೀತಿಯ ನಿರ್ದೇಶನವನ್ನು ನೀಡಿದೆ.
ಕರ್ನಾಟಕದ ಈ ಎರಡು ನೆರೆಯ ರಾಜ್ಯಗಳಾದ ಕೇರಳ ಹಾಗೂ ಮಹಾರಾಷ್ಟ್ರವು ಪ್ರಸ್ತುತ ಭಾರತ ದೇಶದಲ್ಲಿ ಅಧಿಕ ಹೊಸ ಕೊರೊನಾ ವೈರಸ್ ಸೋಂಕು ಪ್ರಕರಣಗಳು ದಾಖಲಾಗುವುದಕ್ಕೆ ಕಾರಣವಾಗಿದೆ.
ಎರಡನೇ ಕೋವಿಡ್ ಅಲೆಯ ಸಂದರ್ಭದಲ್ಲಿ ಕಟ್ಟುನಿಟ್ಟಾದ ಲಾಕ್ಡೌನ್ ನಂತರ, ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಆಸ್ಪತ್ರೆಯಲ್ಲಿ ಹಾಸಿಗೆಗಳು, ಔಷಧಿಗಳು ಮತ್ತು ಆಮ್ಲಜನಕ ಸಿಲಿಂಡರ್ಗಳ ಕೊರತೆ ಉಂಟಾಗಿತ್ತು. ಈ ಪರಿಸ್ಥಿತಿಯನ್ನು ಎದುರಿಸಲು ಬೇಕಾದ ವ್ಯವಸ್ಥೆಗಳನ್ನು ಕೈಗೊಂಡ ಬೆನ್ನಲ್ಲೇ ಕೋವಿಡ್ ಪ್ರಕರಣಗಳು ಇಳಿಕೆ ಕಂಡ ಹಿನ್ನೆಲೆ ಕರ್ನಾಟಕದಲ್ಲಿ ಸರ್ಕಾರವು ಹೇರಲಾಗಿದ್ದ ಲಾಕ್ಡೌನ್ ಅನ್ನು ಸಡಿಲಿಕೆ ಮಾಡಲಾಗಿದೆ.
ಜುಲೈ 19 ರಿಂದ, ಸರ್ಕಾರವು ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟಿತು ಹಾಗೂ ರಾತ್ರಿ ಕರ್ಫ್ಯೂ ಅವಧಿಯನ್ನು ಒಂದು ಗಂಟೆ ಕಡಿಮೆ ಮಾಡಿತು. ಜುಲೈ 26 ರಿಂದ ಆಫ್ಲೈನ್ ತರಗತಿಗಳನ್ನು ನಡೆಸಲು ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಅನುಮತಿ ನೀಡಲಾಗಿದೆ.
ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಕಳೆದ ವಾರ ಅಧಿಕಾರ ವಹಿಸಿಕೊಂಡಾಗ, ಕೋವಿಡ್ನಿಂದ ರಾಜ್ಯದಲ್ಲಿ ಉಂಟಾದ ಪರಿಸ್ಥಿತಿಯ ಬಗ್ಗೆ ಹೆಚ್ಚಿನ ಗಮನ ವಹಿಸಲಾಗುವುದು. ಕೋವಿಡ್ ನಿಯಂತ್ರಣಕ್ಕೆ ಬೇಕಾದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಒತ್ತಿ ಹೇಳಿದ್ದರು.
ಇನ್ನು ಮೂರನೇ ಕೋವಿಡ್ ಅಲೆಯ ಭೀತಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ತುರ್ತು ಸಭೆ ಕರೆದಿದ್ದಾರೆ. ಕರ್ನಾಟಕ ರಾಜ್ಯದ ಬೆಂಗಳೂರು ನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು, ಮೈಸೂರು, ಶಿವಮೊಗ್ಗ, ಉಡುಪಿ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚಾಗುತ್ತಿದೆ ಎಂದು ವರದಿ ತಿಳಿಸಿದೆ.
(ಒನ್ಇಂಡಿಯಾ ಸುದ್ದಿ)
Recommended Video