ಬಿಎಸ್ವೈ ರಾಜೀನಾಮೆ ನಂತರ ದಿನದಿಂದ ದಿನಕ್ಕೆ ಬೊಮ್ಮಾಯಿ ಸರಕಾರದ ಮೇಲೆ RSS ಹಿಡಿತ?
ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪನವರು ಕೂಡಾ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಟ್ಟಾ ಪ್ರತಿಪಾದಕರಾಗಿದ್ದರೂ, ಆಡಳಿತದ ವಿಚಾರದಲ್ಲಿ ಎಷ್ಟು ಬೇಕೋ ಅಷ್ಟು ಮಾತ್ರ ಸಂಘದ ಮಾತಿಗೆ ಮಣೆ ಹಾಕುತ್ತಿದ್ದರು. ಆದರೆ, ಈಗ ಪರಿಸ್ಥಿತಿ ವಿಭಿನ್ನವಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ.
ಯಡಿಯೂರಪ್ಪನವರ ಜಾಗಕ್ಕೆ ಬಿಜೆಪಿ ಹೈಕಮಾಂಡ್ ಅಂತಿಮಗೊಳಿಸಿದ್ದ ಹೆಸರು ಕೂಡಾ ಸಂಘಕ್ಕೆ ನಿಷ್ಠರಾಗಿದ್ದವರಾಗಿದ್ದರು. ಆದರೆ, ಸಿಎಂ ಆಯ್ಕೆಯ ವಿಚಾರದಲ್ಲಿ ಯಡಿಯೂರಪ್ಪನವರ ಮಾತೇ ಫೈನಲ್ ಆದ ನಂತರ ಬೊಮ್ಮಾಯಿ ಸಿಎಂ ಹುದ್ದೆಗೇರಿದ್ದರು.
ಬಿಜೆಪಿಯ ಅಸಲಿ ಸಿನಿಮಾ ಸೆನ್ಸಾರಿಗೆ: ಇನ್ನೇನು 3-4 ತಿಂಗಳಲ್ಲೇ ಬೊಮ್ಮಾಯಿ ಸರಕಾರಕ್ಕೆ ಗ್ರಹಣ?
ಬೊಮ್ಮಾಯಿಯವರು ಜನತಾ ಪರಿವಾರದಿಂದ ಬಂದವರು ಎನ್ನುವ ಸಣ್ಣ ಅಪಸ್ವರ ಈಗಲೂ ಮೂಲ ಬಿಜೆಪಿಗರಲ್ಲಿದೆ. ಕಟ್ಟಾ ಬಿಜೆಪಿ/ಸಂಘದ ಬೆಂಬಲಿಗರು ಅರವಿಂದ್ ಬೆಲ್ಲದ್, ಮುರುಗೇಶ್ ನಿರಾಣಿ ಅಥವಾ ಬಿ.ಎಲ್.ಸಂತೋಷ್ ಸಿಎಂ ಆಗಬೇಕೆಂದು ಬಯಸಿದ್ದವರು. ಆದರೆ, ಬೊಮ್ಮಾಯಿ ಮುಖ್ಯಮಂತ್ರಿಯಾದ ನಂತರ, ಹಲವರು ಸಾಮಾಜಿಕ ತಾಣದಲ್ಲಿ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತ ಪಡಿಸಿದ್ದುಂಟು.
ಈ ಮೂವರೂ, ಕಟ್ಟಾ ಆರ್ ಎಸ್ ಎಸ್ ಹಿಂಬಾಲಕರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿ ಆದ ನಂತರ, ಸಂಘದ ಹಿಡಿತ ಹೆಚ್ಚಾಗುತ್ತಿದೆ ಎನ್ನುವ ಮಾತು ಚಾಲ್ತಿಯಲ್ಲಿದೆ. ಇದಕ್ಕೆ ದೆಹಲಿಯ ವರಿಷ್ಠರು ಕೂಡಾ ಒಪ್ಪಿಗೆಯನ್ನು ಸೂಚಿಸಿದ್ದಾರೆ ಎನ್ನುವ ಮಾತು ಹರಿದಾಡುತ್ತಿದೆ.
ಮೂಲ ಬಿಜೆಪಿ ಮುಖಂಡರಿಗಿಂತ ಜಾಸ್ತಿ ಬಾಂಬೆ ಫ್ರೆಂಡ್ಸ್ ಸಚಿವರೇ ಹೆಚ್ಚಾಗಿ ಅವರ ಜೊತೆಗೆ
ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ವೇಳೆ, ಮೂಲ ಬಿಜೆಪಿ ಮುಖಂಡರಿಗಿಂತ ಜಾಸ್ತಿ ಬಾಂಬೆ ಫ್ರೆಂಡ್ಸ್ ಸಚಿವರೇ ಹೆಚ್ಚಾಗಿ ಅವರ ಜೊತೆಗಿರುತ್ತಿದ್ದರು. ಇನ್ನು ಕೋವಿಡ್ ಮೊದಲನೇ ಅಲೆಯ ವೇಳೆ, ಇವರಲ್ಲಿ ಕೆಲವರು ಸಮರ್ಥವಾಗಿ ಖಾತೆಯನ್ನೂ ನಿಭಾಯಿಸಿದ್ದರು. ಆದರೆ, ಇದರಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ರಾಜ್ಯ ಸರಕಾರದ ಮೇಲೆ ಹಿಡಿತ ಸಾಧಿಸಲು ಆಗುತ್ತಿರಲಿಲ್ಲ. ಈಗ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆ ಕೆಲಸಕ್ಕೆ ಮುಂದಾಗುವ ಸಾಧ್ಯತೆಯಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಯಡಿಯೂರಪ್ಪನವರು ಕೂಡಾ ಸಂಘದ ಮಾತನ್ನು ತೆಗೆದುಹಾಕುತ್ತಿರಲಿಲ್ಲ
ಯಡಿಯೂರಪ್ಪನವರು ಕೂಡಾ ಸಂಘದ ಮಾತನ್ನು ತೆಗೆದುಹಾಕುತ್ತಿರಲಿಲ್ಲ ಎನ್ನುವುದು ಸತ್ಯವಾದರೂ, ಎಷ್ಟು ಬೇಕೋ ಅಷ್ಟು ಮಾತ್ರ ಕೇಳುತ್ತಿದ್ದರು. ಅವರ ಅವಧಿಯಲ್ಲಿ ಸಂಘ ನಿಷ್ಠರಿಗೆ ಆಯಕಟ್ಟಿನ ಸ್ಥಾನ ಸಿಗಲಿಲ್ಲ, ನಿಗಮ ಮಂಡಳಿ ಹುದ್ದೆ ಸಿಗುತ್ತಿಲ್ಲ ಎನ್ನುವ ಕೂಗೂ ಕೇಳಿ ಬರುತ್ತಿತ್ತು. ಜೊತೆಗೆ, ಯಡಿಯೂರಪ್ಪನವರ ಸರಕಾರ ಬಂದಾಗಿನಿಂದ ಒಂದಲ್ಲಾ ಒಂದು ಸಮಸ್ಯೆಗಳನ್ನು ಬಿಜೆಪಿ ಎದುರಿಸಬೇಕಾಗಿ ಬಂದ ನಂತರ ಸಂಘ, ಆಪ್ತರನ್ನು ನೇಮಿಸುವ ವಿಚಾರದಲ್ಲಿ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ.
ಯಡಿಯೂರಪ್ಪನವರು ರಾಜೀನಾಮೆ ನೀಡಿರುವ ಹಿನ್ನಲೆಯಲ್ಲಿ ಆರ್ ಎಸ್ ಎಸ್ ಹಿಡಿತ
ಈಗ, ಯಡಿಯೂರಪ್ಪನವರು ರಾಜೀನಾಮೆ ನೀಡಿರುವ ಹಿನ್ನಲೆಯಲ್ಲಿ ಆರ್ಎಸ್ಎಸ್ ಹಿಡಿತ ಸಾಧಿಸಲು ಮುಂದಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಮುಖ್ಯಮಂತ್ರಿ ಬೊಮ್ಮಾಯಿಯವರ ಆಪ್ತ ವಲಯದಲ್ಲಿ ತಮ್ಮಾಪ್ತರನ್ನು ನೇಮಿಸಲು ಸಂಘ ಕಾರ್ಯೋನ್ಮುಖವಾಗಿದೆ. ಈ ಸಂಬಂಧ ದೆಹಲಿ ಮಟ್ಟದಲ್ಲೂ ಮಾತುಕತೆ ನಡೆದಿದೆ ಎಂದು ಹೇಳಲಾಗುತ್ತಿದೆ.
Recommended Video
ಮುಖ್ಯಮಂತ್ರಿ ಬೊಮ್ಮಾಯಿಯವರ ಆಪ್ತ ವಲಯದಲ್ಲಿ ಸಂಘ ಪರಿವಾರ ಸೂಚಿಸಿದವರು
ಮುಖ್ಯಮಂತ್ರಿ ಬೊಮ್ಮಾಯಿಯವರ ಆಪ್ತ ವಲಯದಲ್ಲಿ ಸಂಘ ಪರಿವಾರ ಸೂಚಿಸಿದ ಸಚಿವರು/ ಮುಖಂಡರು ಇರಬೇಕು. ಆರ್ಎಸ್ಎಸ್ ಸೂಚಿಸಿದವರನ್ನೇ ಮುಖ್ಯಮಂತ್ರಿಗಳ ಕಚೇರಿಯಲ್ಲಿ ನಿಯೋಜಿಸುವಂತೆ ಬೊಮ್ಮಾಯಿಗೆ ಹೈಕಮಾಂಡ್ ಸೂಚನೆ ನೀಡಿದೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೇ, ಸಚಿವರ ಕಚೇರಿಯಲ್ಲೂ ಸಂಘ ಸೂಚಿತರಿಗೆ ಮಾತ್ರ ಜಾಗ ಮೀಸಲಿಡುವ ಮೂಲಕ ಸರಕಾರದ ಮೇಲೆ ನಿಗಾ ಇಡಲು ಆರ್ಎಸ್ಎಸ್ ತಂತ್ರ ರಚಿಸಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.