ವಾಲ್ಮೀಕಿ, ಕನಕದಾಸರ ಪ್ರತಿಮೆ ಮಾಡಿದ್ದು ನಾವು, ಆದರೆ ಲಾಭ ಪಡೆಯುತ್ತಿರುವುದು ಬೇರೆಯವರು: ಸಿದ್ದರಾಮಯ್ಯ
ಮೈಸೂರು, ಡಿಸೆಂಬರ್ 1: ಆರ್,ಎಸ್,ಎಸ್ ಸಂಘ ಪರಿವಾರ ಜಾತಿ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ಬಯಸದವರು. ಮುಸ್ಲಿಂಮರನ್ನು ಬೆದರು ಗೊಂಬೆಗಳಂತೆ ಮುಂದಿಟ್ಟುಕೊಂಡು ಧರ್ಮದ ಹೆಸರಿನಲ್ಲಿ ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಇಂಥವರ ಬಗ್ಗೆ ಜಾಗರೂಕರಾಗಿರಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿವಿ ಮಾತು ಹೇಳಿದರು.
ಮೈಸೂರಿನಲ್ಲಿ ಆಯೋಜಿಸಿದ್ದ ಕನಕ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನರನ್ನು ಶೋಷಣೆ ಮಾಡಬೇಕು ಎಂದರೆ ಸಮಾಜದಲ್ಲಿ ಅಸಮಾನತೆ ಇರಬೇಕು. ಅಸಮಾನತೆಯನ್ನು ಜಾತಿ ವ್ಯವಸ್ಥೆ ಮೂಲಕ ಕಾಪಾಡಿಕೊಂಡು ಹೋಗಬಹುದು ಎಂಬುದು ಅವರ ಚಿಂತನೆಯಾಗಿದೆ.
ನಮ್ಮ ದೇಶದ ಜಾತಿ ವ್ಯವಸ್ಥೆ ನಿಂತ ನೀರಾಗಿದೆ. ಯಾವ ವ್ಯವಸ್ಥೆಗೆ ಚಲನೆ ಇರುವುದಿಲ್ಲ ಅಲ್ಲಿ ಬದಲಾವಣೆ ಅಸಾಧ್ಯ. ಚಲನೆ ಸಿಗಬೇಕಾದರೆ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಶಕ್ತಿ ಬರಬೇಕು. ನಾನು ಊರಿಗೆ ಹೋದಾಗ ನಮ್ಮಪ್ಪ ನನಗೆ ದನ ಕರುಗಳಿಗೆ ನೀರು ಕುಡಿಸುವ ಕೆಲಸ ನೀಡುತ್ತಿದ್ದರು. ಹಕ್ಕಿ ಗೂಡು, ಗಾಳಿ ಮಳೆಗೆ ಬಾವಿ ತುಂಬಾ ಕಸ ತುಂಬಿರುತ್ತಿತ್ತು, ಬಿಂದಿಗೆಯನ್ನು ನೀರಿಗೆ ಬಿಟ್ಟು ಸ್ವಲ್ಪ ಮೇಲೆ ಕೆಳಗೆ ಮಾಡಿದಾಗ ಕಸ ಪಕ್ಕ ಸರಿದು ಶುದ್ಧ ನೀರು ಸಿಗುತ್ತಿತ್ತು, ಸ್ವಲ್ಪ ಹೊತ್ತಿನ ನಂತರ ಮತ್ತೆ ಕಸ ಒಂದಾಗಿ ಬಾವಿ ಮಧ್ಯದಲ್ಲಿ ಬಂದು ನಿಲ್ಲುತ್ತಿತ್ತು. ನಮ್ಮ ಜಾತಿ ವ್ಯವಸ್ಥೆಯ ಕತೆಯೂ ಹೀಗೆ, ಅನೇಕ ಜನ ಸಮಾಜ ಸುಧಾರಕರು ಹೋರಾಟ ಮಾಡಿದಾಗ ಸ್ವಲ್ಪ ಬದಲಾದಂತೆ ಕಂಡು ಕೆಲವು ಸಮಯದ ನಂತರ ಮತ್ತೆ ಹಿಂದಿನಂತಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ವಾಲ್ಮೀಕಿ, ಕನಕದಾಸರ ಪ್ರತಿಮೆ ಮಾಡಿದ್ದು ನಾವು, ಆದರೆ ಲಾಭ ಪಡೆಯುತ್ತಿರುವುದು ಬೇರೆಯವರು
ವಿಧಾನಸೌಧದ ಮುಂಭಾಗ ವಾಲ್ಮೀಕಿ ಪ್ರತಿಮೆ ನಿರ್ಮಾಣ ಮಾಡಿದವರು ನಾವು. ಕನಕದಾಸರ ಪ್ರತಿಮೆಯನ್ನು ನಾವೇ ನಿರ್ಮಾಣ ಮಾಡಿದ್ದು. ಆದರೆ ಇದರ ಲಾಭ ಪಡೆಯುತ್ತಿರುವುದು ಬೇರೆಯವರು. ಅಸಮಾನತೆ, ಜಾತಿ ವ್ಯವಸ್ಥೆ ನಿರ್ಮಾಣ ಮಾಡಿದವರ ಜೊತೆ ನಾವು ಹೋಗಬೇಕೇ? ಬೇಡವೇ? ಎಂದು ಜನ ಯೋಚನೆ ಮಾಡಬೇಕು. ಬುದ್ಧ, ಬಸವ, ಅಂಬೇಡ್ಕರರ ಕೊಡುಗೆಗಳನ್ನು ಜನ ಅರ್ಥ ಮಾಡಿಕೊಳ್ಳಬೇಕು.
ನಾವು ದೇಶಭಕ್ತರು ಎಂದು ಆರ್,ಎಸ್,ಎಸ್ ನವರು ಬಹಳ ನಾಜೂಕಾಗಿ ಮಾತನಾಡುತ್ತಾರೆ, 1925ರಲ್ಲಿ ಆರ್,ಎಸ್,ಎಸ್ ಹುಟ್ಟಿದರೂ ದೇಶದ ಸ್ವಾತಂತ್ರ್ಯಕ್ಕಾಗಿ ಅವರಲ್ಲಿ ಎಷ್ಟು ಜನ ಪ್ರಾಣಾರ್ಪಣೆ ಮಾಡಿದ್ದಾರೆ? ಯಾರೊಬ್ಬರೂ ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿಲ್ಲ. ಗಾಂಧಿಜಿ, ನೆಹರು, ಅಂಬೇಡ್ಕರ್, ಮೌಲಾನಾ ಆಜಾದ್ ಮುಂತಾದವರು ನಿಜವಾದ ದೇಶಭಕ್ತರು. ಸಂಗೊಳ್ಳಿ ರಾಯಣ್ಣ ದೇಶಭಕ್ತ, ಈ ಆರ್,ಎಸ್,ಎಸ್ ನವರು ದೇಶಭಕ್ತರಲ್ಲ.
ಕನಕದಾಸರು ಕುಲ ಕುಲ ಕುಲವೆಂದು ಹೊಡೆದಾಡದಿರಿ, ಕುಲದ ನೆಲೆಯನೇನಾದರೂ ಬಲ್ಲಿರಾ? ಬಲ್ಲಿರಾ? ಎಂದು ಹೇಳಿದ್ದರು. ಒಬ್ಬ ಕನಕದಾಸರು ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಟ ಮಾಡಿದಂತೆ ನಿಮ್ಮಲ್ಲಿ ಪ್ರತಿಯೊಬ್ಬರು ಧ್ವನಿ ಎತ್ತುವ ಕೆಲಸ ಮಾಡಬೇಕು, ಈ ಕಾರಣಕ್ಕಾಗಿಯೇ ನಾವಿಂದು ಕನಕದಾಸ ಜಯಂತಿ ಆಚರಣೆ ಮಾಡುತ್ತಿರುವುದು. ಕನಕದಾಸರ ಆಶಯಗಳಂತೆ ಬದುಕುವುದು ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂಬುದನ್ನು ಮರೆಯಬಾರದು ಎಂದರು.
ಕನಕದಾಸರ ವ್ಯಾಸಕೂಟದಲ್ಲಿ ಸೇರಿಕೊಂಡಿರುವಾಗ ಅಲ್ಲಿ ಎಲ್ಲ ಮೇಲ್ಜಾತಿಯ ಜನರಿದ್ದರು. ಕನಕ ದಾಸರು ಮಾತ್ರ ಶೂದ್ರ ಸಮುದಾಯಕ್ಕೆ ಸೇರಿದವರು. ಅಂತಹ ಪರಿಸ್ಥಿತಿಯನ್ನು ಕನಕದಾಸರು ನಿಭಾಯಿಸಿದ ರೀತಿಯನ್ನು ನಾವು ಮೆಚ್ಚಬೇಕಾಗುತ್ತದೆ. ಅವರನ್ನು ಪ್ರತೀ ಹೆಜ್ಜೆಗೆ ಅವಮಾನ ಮಾಡಲಾಗುತ್ತದೆ. ಕನಕದಾಸರು ವ್ಯಾಸ ರಾಯರ ಬಳಿ ತಾವು ಮಂತ್ರ ಕಲಿಯಬೇಕು ಎಂದಾಗ "ನೀನು ಕುರುಬ, ನಿನಗೆಂತ ಮಂತ್ರವಯ್ಯ?" ಎಂದು ಕೇಳಿದ್ದರು. ಈ ಹಿಂದೆ ಶೂದ್ರ ವರ್ಗದ ಜನರಿಗೆ ಮಂತ್ರ ಕಲಿಯುವುದು ಇರಲಿ, ವಿಧ್ಯೆ ಕಲಿಯಲು ಕೂಡ ಅವಕಾಶ ಇರಲಿಲ್ಲ. ಇಂದು ನಾವು ನೀವೆಲ್ಲ ಶಿಕ್ಷಿತರಾಗಬೇಕಾದರೆ, ನಾನು ಮುಖ್ಯಮಂತ್ರಿಯಾಗಬೇಕಾದರೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನ ಕಾರಣ ಎಂದು ಹೇಳಿದರು.