ಟಿಪ್ಪು ಹೊಗಳಿಕೆಯಿಂದ ವಿಶ್ವನಾಥ್ ಕೈ ತಪ್ಪಿತಾ ಮಂತ್ರಿ ಪದವಿ?
ಬೆಂಗಳೂರು, ಆ. 27: ಟಿಪ್ಪು ಸುಲ್ತಾನ್ ಕುರಿತು ವ್ಯಕ್ತಪಡಿಸಿರುವಅಭಿಪ್ರಾಯದಿಂದ ಮಾಜಿ ಸಚಿವ ಎಚ್. ವಿಶ್ವನಾಥ್ ಅವರಿಗೆ ಸಂಕಷ್ಟ ಶುರುವಾಗಿದೆ. ಟಿಪ್ಪು ಸುಲ್ತಾನ್ ಹೊಗಳಿದ್ದರಿಂದ ಸಂಭಾವ್ಯ ಮಂತ್ರಿ ಪದವಿಯನ್ನು ಮಾಜಿ ಸಚಿವ ಎಚ್. ವಿಶ್ವನಾಥ್ ಕಳೆದುಕೊಂಡರಾ ಎಂಬ ಚರ್ಚೆ ಶುರುವಾಗಿದೆ. ಯಾಕೆಂದರೆ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಮಂತ್ರಿ ಪದವಿಯ ಪ್ರಬಲ ಆಕಾಂಕ್ಷಿಯಾಗಿರುವ ವಿಶ್ವನಾಥ್ ಅವರಿಂದ, ಪಕ್ಷ ಅಂತರ ಕಾಯ್ದುಕೊಂಡಿದೆ. ರಾಜ್ಯ ಬಿಜೆಪಿ ನಾಯಕರು ವಿಶ್ವನಾಥ್ ಮೇಲೆ ಮುಗಿಬಿದ್ದಿದ್ದಾರೆ. ಅವರ ಹೇಳಿಕೆಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ಸ್ಪಷ್ಟವಾಗಿ ತಿಳಿಸಿದೆ.
ವಿಶ್ವನಾಥ್ ಅವರಿಂದ ವಿವರಣೆ ಕೇಳುವುದಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ವಿಶ್ವನಾಥ್ ಅವರ ಹೇಳಿಕೆಯಿಂದ ರಾಜ್ಯ ಬಿಜೆಪಿಯ ನಿಲುವಿನಲ್ಲಿ ಬದಲಾವಣೆ ಆಗಿಲ್ಲ. ವಿಶ್ವನಾಥ್ ಅವರು ಟಿಪ್ಪುವನ್ನು ಹೊಗಳಿರುವುದು ಅವರ ವೈಯಕ್ತಿಕ ವಿಚಾರ ಎಂದು ರಾಜ್ಯ ಬಜೆಪಿ ಘಟಕ ಸ್ಪಷ್ಟಪಡಿಸಿದೆ. ಚುನಾವಣೆಯಲ್ಲಿ ಸೋಲಿನ ಬಳಿಕ ಅತ್ಯಂತ ಪ್ರಯತ್ನ ಪಟ್ಟು ಪರಿಷತ್ ಸದಸ್ಯತ್ವ ಪಡೆದಿರುವ ವಿಶ್ವನಾಥ್ ಅವರು ಮಂತ್ರಿಯಾಗುವ ಆಸೆ ಇಟ್ಟುಕೊಂಡಿದ್ದರು. ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಮಂತ್ರಿ ಪದವಿ ವಿಶ್ವನಾಥ್ ಅವರ ಕೈತಪ್ಪಲಿದೆ ಎಂಬ ವಿಚಾರ ಬಿಜೆಪಿ ವಲಯದಿಂದಲೇ ಬಂದಿದೆ. ಜೊತೆಗೆ ಪಕ್ಷದ ನಿಲುವನ್ನೇ ವಿಶ್ವನಾಥ್ ಅವರು ಪ್ರಶ್ನೆ ಮಾಡಿದ್ದಾರೆಂದು ಆರ್ಎಸ್ಎಸ್ ಪ್ರಮುಖರು ಗರಂ ಆಗಿದ್ದಾರೆ ಎಂಬ ಮಾಹಿತಿಯಿದೆ.
ರಾಜ್ಯ ಬಿಜೆಪಿಯಲ್ಲಿ ಮತ್ತೆ ಸಂಚಲನ ಸೃಷ್ಟಿಸಿದ ಟಿಪ್ಪು ಸುಲ್ತಾನ್!
ಪಕ್ಷದ ನಿಲುವಿನಲ್ಲಿ ಬದಲಾವಣೆ ಇಲ್ಲ
ಮಾಜಿ ಸಚಿವ ಎಚ್. ವಿಶ್ವನಾಥ್ ಅವರ ಹೇಳಿಕೆ ರಾಜಕೀಯ ತಿರುವು ಪಡೆದುಕೊಳ್ಳುತ್ತಿದ್ದಂತೆಯೆ ರಾಜ್ಯ ಬಿಜೆಪಿ ಎಚ್ಚೆತ್ತುಕೊಂಡಿದೆ. ಕೂಡಲೇ ಈ ಬಗ್ಗೆ ಪತ್ರಿಕಾ ಪ್ರಕಟಣೆ ಮೂಲಕ ಹೆಚ್ ವಿಶ್ವನಾಥ್ ಟಿಪ್ಪು ಹೊಗಳಿಕೆ ವಯಕ್ತಿಕ ಎಂದು ಸ್ಪಷ್ಟಪಡಿಸಿದೆ. ಟಿಪ್ಪು ಸುಲ್ತಾನ್ ಕುರಿತಾಗಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯವಾಗಿದ್ದು, ಈ ಹೇಳಿಕೆಯಿಂದ ಭಾರತೀಯ ಜನತಾ ಪಾರ್ಟಿ ದೂರ ಉಳಿಯಲು ಬಯಸುತ್ತದೆ.
ಟಿಪ್ಪು ಸುಲ್ತಾನ್ ಒಬ್ಬ ಮತಾಂಧನಾಗಿದ್ದ ಎಂಬುದಕ್ಕೆ ಪಕ್ಷ ಬದ್ಧವಾಗಿದೆ. ಮತ್ತು ಈ ವಾದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಟಿಪ್ಪು ಸುಲ್ತಾನ್ ಇಸ್ಲಾಮಿಕ್ ಸಾಮ್ರಾಜ್ಯ ಸ್ಥಾಪಿಸುವ ಯತ್ನದ ವೇಳೆ ಕೊಡಗಿನಲ್ಲಿ ಸಹಸ್ರಾರು ಹಿಂದೂಗಳ ಹಾಗೂ ಕ್ರಿಶ್ಚಿಯನ್ನರ ಮಾರಣಹೋಮ ಮಾಡಿದ್ದನ್ನು ಮರೆಯಲಾಗದು. ಹೀಗಾಗಿ ಟಿಪ್ಪು ಸುಲ್ತಾನ್ ಒಬ್ಬ ಒಳ್ಳೆಯ ಆಡಳಿತಗಾರ ಎಂದು ಒಪ್ಪಿಕೊಳ್ಳುವುದು ಅಸಾಧ್ಯ ಎಂದು ಬಿಜೆಪಿ ಅಂತರ ಕಾಯ್ದುಕೊಂಡಿದೆ.
ವಿಶ್ವನಾಥ್ ಹೇಳಿಕೆ ಅತ್ಯಂತ ಅಸಹಜ
ಇನ್ನು ಎಚ್. ವಿಶ್ವನಾಥ್ ಅವರ ಹೇಳಿಕೆ ಅತ್ಯಂತ ಅಸಹಜ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಅವರು ತಿರುಗೇಟು ಕೊಟ್ಟಿದ್ದಾರೆ. ಟಿಪ್ಪು ಕುರಿತ ಬಿಜೆಪಿ ಚಿಂತನೆ ಬದಲಾಗಿಲ್ಲ. ಹಿಂದಿನ ಬದ್ಧತೆಯನ್ನು ಈಗಲೂ ಬಿಜೆಪಿ ಹೊಂದಿದೆ. ಟಿಪ್ಪು ನೆಲದ ಮಣ್ಣಿನ ಮಗ ಅನ್ನೋದನ್ನು ರಾಜ್ಯದ ಜನ ಬಹಳ ದುಃಖದಿಂದ ಹೇಳುತ್ತಾರೆ.
ಹಿಂದೂಗಳನ್ನು ಮುಸ್ಲಿಂ ಧರ್ಮಕ್ಕೆ ಟಿಪ್ಪು ಮತಾಂತರ ಮಾಡಿದ್ದಕ್ಕೆ ಮುಸ್ಲಿಮರೂ ವ್ಯಥೆ ಪಡುತ್ತಾರೆ. ಟಿಪ್ಪು ಸುಲ್ತಾನ್ ಹಿಂದೂ ಧರ್ಮ ದ್ರೋಹಿ, ಮತಾಂಧ. ಕಾಂಗ್ರೆಸ್ ಮತ ಬ್ಯಾಂಕ್ಗಾಗಿ ಟಿಪ್ಪು ಸುಲ್ತಾನ್ ಇಟ್ಟುಕೊಂಡು ಪೂಜೆ ಮಾಡುತ್ತಿದೆ. ವಿಶ್ವನಾಥ್ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ. ವಿಶ್ವನಾಥ್ ಹೇಳಿಕೆ ಪಕ್ಷದ ಅಭಿಪ್ರಾಯ ಅಲ್ಲ ಎಂದು ರವಿಕುಮಾರ್ ಸ್ಪಷ್ಟಪಡಿಸಿದ್ದಾರೆ.
ಹೆಚ್. ವಿಶ್ವನಾಥ್ ಸಚಿವರಾಗಬೇಕು
ಎಚ್. ವಿಶ್ವನಾಥ್ ಅವರು ಸತ್ಯ ಹೇಳಿದ್ದಾರೆ. ಅವರು ಮೈಸೂರಿನವರು. ಇತಿಹಾಸ ಬಲ್ಲವರು. ಹಲವು ಪುಸ್ತಕಗಳನ್ನ ಬರೆದಿದ್ದಾರೆ. ಹೀಗಾಗಿ ಸತ್ಯವನ್ನು ಹೇಳಿದ್ದಾರೆ ಎಂದು ಬಿಜೆಪಿ ನಾಯಕರಿಗೆ ಟಾಂಟ್ ಕೊಟ್ಟಿದ್ದಾರೆ. ಹೆಚ್.ವಿಶ್ವನಾಥ್ ಸಚಿವರಾಗಬೇಕು. ಇದು ನನ್ನ ಆಸೆಯೂ ಹೌದು ಎಂದು ಬಿಜೆಪಿ ನಾಯಕರ ಕಾಲೆಳೆದಿದ್ದಾರೆ. ಜೊತೆಗೆ ಟಿಪ್ಪು ವಿಷಯವನ್ನು ಪಠ್ಯದಿಂದ ಕೈಬಿಡಲು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರ ಮೇಲೆ ಒತ್ತಡವಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಹೀಗೆ ವಿಶ್ವನಾಥ್ ಅವರ ಹೇಳಿಕೆ ವಿರೋಧ ಪಕ್ಷಗಳ ನಾಯಕರ ಎದುರು ಬಿಜೆಪಿಗೆ ಮುಜುಗುರವನ್ನುಂಟು ಮಾಡಿರುವುದರಿಂದ ವಿಶ್ವನಾಥ್ ಅವರಿಗೆ ಮಂತ್ರಿ ಪದವಿ ಕೈತಪ್ಪಲಿದೆ ಎನ್ನಲಾಗಿದೆ.
ಕೈತಪ್ಪಲಿದೆಯಾ ಮಂತ್ರಿ ಪದವಿ?
ಈ ಹಿಂದೆಯೂ ಕೂಡ ವಿವಾದಕ್ಕೆಡೆ ಮಾಡುವಂತಹ ಹೇಳಿಕೆಗಳನ್ನು ವಿಶ್ವನಾಥ್ ಅವರು ಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಹೇಳಿಕೆ ಕೊಟ್ಟಿದ್ದರು. ಕಾಂಗ್ರೆಸ್ ಹೈಕಮಾಂಡ್ ನಾಯಕತ್ವ ಬದಲಾವಣೆಗೂ ಆಗ್ರಹಿಸಿದ್ದರು. ಸೋನಿಯಾ ಗಾಂಧಿ ಅವರು ನಾಯಕತ್ವ ತ್ಯಜಿಸಿ ಬೇರೆಯವರಿಗೆ ನಾಯಕತ್ವ ವಹಿಸಬೇಕು ಎಂದಿದ್ದರು.
ಇದೀಗ ಬಿಜೆಪಿಯ ಸಿದ್ದಾಂತಕ್ಕೆ ವಿರುದ್ಧವಾಗಿ ವಿಶ್ವನಾಥ್ ಅವರು ಮಾತನಾಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೆ.ಎಸ್. ಈಶ್ವರಪ್ಪ, ಎನ್. ರವಿ ಕುಮಾರ್, ಕ್ಯಾ. ಹಣೇಶ್ ಕಾರ್ಣಿಕ್ ಸೇರಿದಂತೆ ಬಹುತೇಕ ನಾಯಕರು ವಿಶ್ವನಾಥ್ ಅವರ ಹೇಳಿಕೆ ಖಂಡಿಸಿದ್ದಾರೆ. ಶೀಘ್ರದಲ್ಲಿಯೇ ರಾಜ್ಯ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂಬ ಮಾಹಿತಿಯಿದೆ. ಇದೇ ವಿಚಾರಕ್ಕೆ ಸಿಎಂ ಯಡಿಯೂರಪ್ಪ ಅವರ ಮೇಲೆ ಒತ್ತಡವನ್ನು ವಿಶ್ವನಾಥ್ ಹೇರುತ್ತಿದ್ದಾರೆ. ಇಂತಹ ಸಮಯದಲ್ಲಿ ಪಕ್ಷದ ನಿಲುವನ್ನೇ ಪ್ರಶ್ನೆ ಮಾಡುವಂತಹ ಹೇಳಿಕೆಯನ್ನು ವಿಶ್ವನಾಥ್ ಕೊಟ್ಟಿದ್ದಾರೆ. ಹೀಗಾಗಿ ಆರ್ಎಸ್ಎಸ್ ಅವರು ಮಂತ್ರಿಯಾಗಲು ಗ್ರೀನ್ ಸಿಗ್ನಲ್ ಕೊಡುವುದಿಲ್ಲ ಎಂದೇ ಹೇಳಲಾಗುತ್ತಿದೆ.