ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಹಣ ಬಿಡುಗಡೆ: ಸಭಾಪತಿ ಬಸವರಾಜ ಹೊರಟ್ಟಿ
ಬೆಂಗಳೂರು, ಆ. 13: ವಿಧಾನ ಪರಿಷತ್ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿಗೆ ಪ್ರಸಕ್ತ ಸಾಲಿನಲ್ಲಿ ಹೆಚ್ಚುವರಿಯಾಗಿ 300 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದು, ಅದನ್ನು 2019-20ನೇ ಸಾಲಿನ ಬಿಡುಗಡೆಗೆ ಬಾಕಿಯಿರುವ ರೂ. 300 ಕೋಟಿಗಳಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗುವುದು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ ಬಿಡುಗಡೆ ಕುರಿತು ವಿಧಾನ ಪರಿಷತ್ ಸದಸ್ಯರ ಸಭೆಯಲ್ಲಿ ಭಾಗವಹಿಸಿದ ಬಳಿಕ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿದ್ದಾರೆ. ವಿಧಾನ ಪರಿಷತ್ ಶಾಸಕರಿಗೆ ಅನುದಾನ ಬಿಡಗಡೆ ಬಗ್ಗೆ ಅಸಮಧಾನ ಇತ್ತು. ಅಧಿಕಾರಿಗಳನ್ನು ಕರೆದು ಈ ಮೊದಲು ಸಲಹೆ ನೀಡಲಾಗಿತ್ತು. ಅಧಿಕಾರಿಗಳು ಕೆಲಸ ಮಾಡದಿದ್ದರೆ ಕ್ರಮದ ಎಚ್ಚರಿಕೆಯನ್ನೂ ನೀಡಿದ್ದೇವು. ಜೊತೆಗೆ ಐದು ಜನರ ಸಮಿತಿ ರಚಿಸಲಾಗಿತ್ತು. ಇದೇ ಮೊದಲ ಬಾರಿಗೆ ಯಶಸ್ವಿಯಾಗಿ ನಿರ್ಣಯ ಕೈಗೊಳ್ಳಲಾಗಿದ್ದು, 21-22ನೇ ಸಾಲಿಗೆ ಎರಡು ಕೋಟಿ ಅನುದಾನಕ್ಕೆ ಕ್ರಿಯಾ ಯೋಜನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಮಾರ್ಗಸೂಚಿ PARA 3.2 ಅನುಸಾರ ಕ್ರಿಯಾ ಯೋಜನೆ ಮಾಡಲು ಸೂಚನೆ ಕೊಡಲಾಗಿದೆ. 2020-21ನೇ ಸಾಲಿನಲ್ಲಿ 300 ಕೋಟಿ ರೂ. ಹೆಚ್ಚುವರಿ ಅನುದಾನ ಬಿಡುಗಡೆಗೆ ಸೂಚನೆ ಕೊಟ್ಟಿದ್ದೇವೆ. 2018-19ನೇ ಸಾಲಿಗೆ ಕೂಡಲೇ 127.69ಕೋಟಿ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಈ ಮೊದಲು ಕ್ಷೇತ್ರವಾರು ಬಿಡುಗಡೆ ಮಾಡಲಾಗುತ್ತಿತ್ತು. ಆದರೆ ಈಗ ಜಿಲ್ಲಾವಾರು ಬಿಡುಗಡೆಗೆ ಸೂಚನೆ ನೀಡಲಾಗಿದೆ ಎಂದು ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.
ಶಾಸನ ಸಭೆಯಿಂದ ಯಾವುದೇ ಸಮಸ್ಯೆ ಆಗದಂತೆ ಆಜ್ಞೆ ಹೊರಡಿಸಲಾಗುವುದು. ಯಾವುದೇ ಶಾಸಕರಿಗೂ ಸಮಸ್ಯೆ ಆಗದಂತೆ ಕ್ರಮಕೈಗೊಳ್ಳಲಾಗುತ್ತದೆ. ಮುಂದಿನ ಒಂದು ವಾರದಲ್ಲಿ ಹೊಸ ಆದೇಶ ಹೊರಡಿಸಲಾಗುವುದು. ಕೋವಿಡ್, ಫ್ಲಡ್ ಯಾವುದೇ ಇದ್ದರೂ ಅನುದಾನ ಬಳಕೆ ಮಾಡಲು ಹಣ ಮೀಸಲಿಟ್ಟು, ಶಾಸಕರು ಸೂಚಿಸಿದ ಕಾಮಗಾರಿ ಮಾಡುವಂತೆ ಸೂಚಿಸಲಾಗುವುದು ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.
ಪ್ರಸಕ್ತ ಲಭ್ಯವಿರುವ ಅನುದಾನ ಪೂರ್ಣವಾಗಿ ವೆಚ್ಚವಾದ ನಂತರ ಪ್ರಸ್ತಾವನೆ ಸಲ್ಲಿಸಲಾಗುವುದು. ಯೋಜನಾ ಇಲಾಖೆಯು ಅನುದಾನವನ್ನು ಕ್ಷೇತ್ರವಾರು ಬಿಡುಗಡೆ ಮಾಡುವ ಬದಲಾಗಿ ಜಿಲ್ಲಾವಾರು ಬಿಡುಗಡೆ ಮಾಡಲು ನಿರ್ಣಯಿಸಲಾಗಿದೆ ಎಂದು ಹೊರಟ್ಟಿ ತಿಳಿಸಿದ್ದಾರೆ.
ಎರಡು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಉಳಿಕೆಯಾದ ಅನುದಾನವನ್ನು ರಾಜ್ಯ ಮಟ್ಟದ ಕೇಂದ್ರೀಕೃತ ಬ್ಯಾಂಕ್ ಖಾತೆಗೆ ಜಮೆಗೊಳಿಸಲಾಗುವುದು. ಶಾಸಕರು ಕಾಮಗಾರಿಗಳನ್ನು ನೀಡಿದ ನಂತರ ಅದು ವಿಳಂಬವಾದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕೈಗೊಳ್ಳಲಾಗುವುದು. ಶಾಸಕರ ಅನುದಾನ ಬಿಡುಗಡೆಯಲ್ಲಿ ಅಡೆತಡೆಯಾಗದಂತೆ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ. ಅನುದಾನ ತಾರತಮ್ಯಕ್ಕೆ ಸಂಬಂಧಿಸಿದಂತೆ ಕಳೆದ ವಾರ ಸರ್ವ ಪಕ್ಷಗಳ ವಿಧಾನ ಪರಿಷತ್ ಸದಸ್ಯರು ಸಭೆ ನಡೆಸಿದ್ದರು.