'ಕೈ' ತಪ್ಪಿದ ಮಂತ್ರಿ ಪದವಿ; ರಾಜ್ಯ ಸರ್ಕಾರದ ಭವಿಷ್ಯ ಹೇಳಿದ ಆರ್.ಆರ್. ನಗರ ಶಾಸಕ ಮುನಿರತ್ನ!
ಬೆಂಗಳೂರು, ಜ. 14: ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದ ಬಳಿಕ ಒಂದಿಲ್ಲೊಂದು ಸಮಸ್ಯೆಗಳನ್ನು ಆರ್ಆರ್ ನಗರ ಶಾಸಕ ಮುನಿರತ್ನ ಅವರು ಎದುರಿಸುತ್ತಿದ್ದಾರೆ. ಇನ್ನೇನು ಮಂತ್ರಿ ಆಗಿ ಬಿಟ್ಟರು ಎನ್ನಲಾಗಿದ್ದ ಮುನಿರತ್ನ ಅವರಿಗೆ ಬಿಜೆಪಿ ಹೈಕಮಾಂಡ್ ಕೊನೆ ಕ್ಷಣದಲ್ಲಿ ಶಾಕ್ ಕೊಟ್ಟಿದೆ. ಅದರಿಂದಾಗಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದಾಗಿನಿಂದ ಒಂದಿಲ್ಲೊಂದು ಸಂಕಷ್ಟ ಎದುರಿಸುತ್ತಿರುವ ಮುನಿರತ್ನ ಅವರು ಮತ್ತೊಮ್ಮೆ ಅತಂತ್ರರಾಗಿದ್ದಾರೆ. ತಮ್ಮೊಂದಿಗೆ ಕಾಂಗ್ರೆಸ್ ತೊರೆದು ಬಂದವರು ಮಂತ್ರಿ ಪದವಿಗೇರಿ ಆಡಳಿತ ನಡೆಸುತ್ತಿರುವುದನ್ನು ನೋಡುತ್ತ ಕೂಡಬೇಕಾದ ಅನಿವಾರ್ಯತೆ ಅವರಿಗೆ ಎದುರಾಗಿದೆ.
ಮಂತ್ರಿಪದವಿ ಇಲ್ಲ ಎಂಬುದು ಖಚಿತವಾಗುತ್ತಿದ್ದಂತೆಯೆ ಮುನಿರತ್ನ ಅವರು ನಿನ್ನೆ (ಜ.13) ಸಿಎಂ ನಿವಾಸದಿಂದ ತೆರಳಿದ್ದರು. ಬಳಿಕ ಯಾರಿಗೂ ಸಿಕ್ಕಿರಲಿಲ್ಲ. ಆದರೆ ಇಂದು (ಜ.14) ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಮಂತ್ರಿ ಪದವಿ, ಸಿಎಂ ಯಡಿಯೂರಪ್ಪ ಹಾಗೂ ಹೈಕಮಾಂಡ್ ಕುರಿತು ಖಡಕ್ ಮಾತುಗಳನ್ನು ಆಡಿದ್ದಾರೆ. ಜೊತೆಗೆ ತಮ್ಮೊಂದಿಗೆ ಕಾಂಗ್ರೆಸ್-ಜೆಡಿಎಸ್ ತೊರೆದು ಬಿಜೆಪಿ ಸೇರಿರುವ ಮಿತ್ರಮಂಡಳಿ ಕುರಿತೂ ಮುನಿರತ್ನ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ರಾಜ್ಯ ಬಿಜೆಪಿ ಸರ್ಕಾರದ ಭವಿಷ್ಯದ ಬಗ್ಗೆಯೂ ಮಹತ್ವದ ಹೇಳಿಕೆ ನೀಡಿದ್ದಾರೆ. ಹಾಗಾದರೆ ರಾಜ್ಯ ಬಿಜೆಪಿ ಸರ್ಕಾರಕ್ಕೆ ಗಂಡಾಂತರ ಕಾದಿದೆಯಾ? ಅವರು ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
ಮುನಿರತ್ನ ಪರೋಕ್ಷ ತಿರುಗೇಟು
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ಬಳಿ ನನಗೆ ಸಚಿವ ಸ್ಥಾನ ಬೇಕು ಎಂದು ಕೇಳಿಕೊಂಡಿಲ್ಲ. ಹೀಗಾಗಿ ಸಚಿವ ಸ್ಥಾನ ಇಲ್ಲ ಅಂತ ನನಗೆ ಚಿಂತೆ ಇಲ್ಲ ಎಂದು ಬೆಂಗಳೂರಿನಲ್ಲಿ ಆರ್ಆರ್ ನಗರ ಶಾಸಕ ಮುನಿರತ್ನ ಅವರು ಹೇಳಿಕೆ ನೀಡಿದ್ದಾರೆ. ಮಾತು ಕೊಟ್ಟಿದ್ದೇವೆ ಎಂದು ದುರುಪಯೋಗ ಮಾಡಿಕೊಳ್ಳಬಾರದು. ಬೇರೆಯವರಿಗೂ ನಮಗೂ ಹೋಲಿಕೆ ಮಾಡಬಾರದು ಎಂದು ಬಿಜೆಪಿ ನಾಯಕರ ಮೇಲೆ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಕೆಲವು ಸಂದರ್ಭಗಳಲ್ಲಿ ಕೆಟ್ಟ ಸಮಯ ಬರುತ್ತೆ ಎನೂ ಮಾಡುವುದಕ್ಕೆ ಆಗುವುದಿಲ್ಲ. ಮಳೆ, ಗಾಳಿ ಇರುತ್ತದೆ. ಹೀಗಾಗಿ ಎಲ್ಲದಕ್ಕೂ ಹೊಂದಿಕೊಂಡು ಹೋಗುತ್ತೇವೆ. ನನ್ನ ಜನ ನಾನು ಸಚಿವ ಆಗುತ್ತೇನೆ ಎಂದು ಮತ ಹಾಕಿಲ್ಲ ಎಂದು ಮುನಿರತ್ನ ಹೇಳಿದ್ದಾರೆ. ಆ ಮೂಲಕ ಆರ್ಆರ್ ನಗರ ಉಪ ಚುನಾವಣೆ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಅವರು ಮುನಿರತ್ನ ಅವರನ್ನು ಗೆಲ್ಲಿಸಿ ಕಳಿಸಿ, ಅವರನ್ನು ಮಂತ್ರಿ ಮಾಡುತ್ತೇನೆ ಎಂದು ಹೇಳಿದ್ದಕ್ಕೆ ತಿರುಗೇಟು ಕೊಟ್ಟಿದ್ದಾರೆ.
ಬಂದವರೆಲ್ಲ ಎಲ್ಲರೂ ಬ್ಯೂಸಿ ಇದ್ದಾರೆ
ನನ್ನ ಜೊತೆಗೆ ಬಿಜೆಪಿಗೆ ಬಂದವರೆಲ್ಲರೂ ಬ್ಯುಸಿಯಾಗಿದ್ದಾರೆ ಎಂದು ಮಿತ್ರಮಂಡಳಿ ಸದಸ್ಯರ ವಿರುದ್ಧ ಪರೋಕ್ಷ ವಾಗ್ದಾಳಿಯನ್ನು ಮುನಿರತ್ನ ನಡೆಸಿದ್ದಾರೆ. ನನ್ನೊಂದಿಗೆ ಬಿಜೆಪಿ ಸೇರಿರುವವರು ಮಂತ್ರಿಗಳಾಗಿದ್ದಾರೆ. ಅವರು ಹುಬ್ಬಳ್ಳಿ, ಧಾರವಾಡ ಎಲ್ಲಾ ಕಡೆ ಬ್ಯುಸಿಯಾಗಿದ್ದಾರೆ. ನನ್ನ ಜೊತೆಗೆ ಮಾತನಾಡುವಷ್ಟೂ ಕೂಡ ಯಾರಿಗೂ ಸಮಯವಿಲ್ಲ. ಎಲ್ಲರೂ ಅಷ್ಟು ಬ್ಯುಸಿಯಾಗಿದ್ದಾರೆ. ಬಿಜೆಪಿಗೆ ಬಂದು ಸಚಿವರಾದವರು ಬಿಜೆಪಿ ಪಕ್ಷಕ್ಕೆ ತುಂಬಾ ಪ್ರಾಮಾಣಿಕವಾಗಿ ದುಡಿಯುತ್ತಿದ್ದಾರೆ ಎಂದು ಸಚಿವರಾದ ಬಿ.ಸಿ. ಪಾಟೀಲ್, ಬೈರತಿ ಬಸವರಾಜ್, ಎಸ್.ಟಿ. ಸೋಮಶೇಖರ್ ಸೇರಿದಂತೆ ಇತರರ ಕುರಿತು ವ್ಯಂಗ್ಯವಾಡಿದ್ದಾರೆ.
ಎಸ್ಬಿಎಂ ಈಗ ಎಸ್ಬಿಐ
ಸಿದ್ದರಾಮಯ್ಯ ಅವರ ಸರ್ಕಾರವಿದ್ದಾಗ ಎಸ್.ಟಿ. ಸೋಮಶೇಖರ್, ಬೈರತಿ ಬಸವರಾಜು ಹಾಗೂ ಮುನಿರತ್ನ ಅವರನ್ನು ಎಸ್ಬಿಎಂ ಎಂದು ಕರೆಯಲಾಗುತ್ತಿತ್ತು. ಅದನ್ನು ಪ್ರಸ್ತಾಪಿಸಿರುವ ಮುನಿರತ್ನ ಅವರು, ಈಗ ವಿಶ್ವೇಶ್ವರಯ್ಯ ಅವರು ಸ್ಥಾಪಿಸಿದ್ದ ಎಸ್ಬಿಎಂ ಇದೆಯಾ? ಅದು ಇವಾಗ ಎಸ್ಬಿಐ ಆಗಿದೆ. ಅಂದರೆ ನಾವೆಲ್ಲಾ ಇಂಡಿಯಾ ಅಂತ ಅರ್ಥ ಎಂದು ಸ್ನೇಹಿತರು ತಮ್ಮ ಕೈಬಿಟ್ಟಿರುವುದನ್ನು ಮಾರ್ಮಿಕವಾಗಿ ಹೇಳಿದ್ದಾರೆ.
ಯಡಿಯೂರಪ್ಪ ಕುರಿತು
ತಮಗೆ ಮಂತ್ರಿ ಸ್ಥಾನ ಕೊಡದಿದ್ದರೂ ಸಿಎಂ ಯಡಿಯೂರಪ್ಪ ವಚನ ಭ್ರಷ್ಟ ಅಲ್ಲ, ಮಾತು ತಪ್ಪಲಿಲ್ಲ ಎಂದು ಶಾಸಕ ಮುನಿರತ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕೆಲವು ಸಂದರ್ಭಗಳಲ್ಲಿ ಹೀಗಾಗುತ್ತದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಮಾತನಾಡಿದರೆ ಪಕ್ಷಕ್ಕೆ ಕೆಟ್ಟದ್ದನ್ನು ಮಾಡಿದ ಹಾಗೆ ಆಗುತ್ತದೆ. ನಂಗೆ ಸಚಿವ ಸ್ಥಾನ ಸಿಗಲಿಲ್ಲ ಅಂತ ಕೆಟ್ಟದಾಗಿ ಮಾತನಾಡಬಾರದು. ನಮ್ಮದು ರಾಷ್ಟ್ರೀಯ ಪಕ್ಷ, ಅಲ್ಲಿಂದ ಬರುವುದು ವಿಳಂಬ ಆಗಬಹುದು. ನಾನು ನನ್ನ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಜನರ ಹೃದಯದಲ್ಲಿ ಸ್ಥಾನ ಪಡೆದಿದ್ದೇನೆ ಎಂದಿದ್ದಾರೆ ಮುನಿರತ್ನ ಅವರು.
ಸರ್ಕಾರದ ಭವಿಷ್ಯ ನುಡಿದ ಮುನಿರತ್ನ
ರಾಜ್ಯ ಬಿಜೆಪಿ ಸರ್ಕಾರದ ಭವಿಷ್ಯದ ಬಗ್ಗೆಯೂ ಇದೇ ಸಂದರ್ಭದಲ್ಲಿ ಮುನಿರತ್ನ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ಈ ಸರ್ಕಾರ ಸುಭದ್ರವಾಗಿದೆ, ಇನ್ನೂ ಎರಡು ವರ್ಷಗಳ ಕಾಲ ಇದೇ ಸರ್ಕಾರ ಇರುತ್ತದೆ ಎಂದಿದ್ದಾರೆ. ಸರ್ಕಾರಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಶಾಸಕ ಮುನಿರತ್ನ ಅವರು ಭವಿಷ್ಯ ಹೇಳಿದ್ದಾರೆ.
ತಮ್ಮೊಂದಿಗೆ ಬಿಜೆಪಿ ಸೇರಿರುವ ನಾಗೇಶ್ ಅವರ ರಾಜೀನಾಮೆ ಕುರಿತು ಅವರನ್ನೇ ಕೇಳಬೇಕು ಎಂದು ಮುನಿರತ್ನ ಹೇಳಿದ್ದಾರೆ. ಜೊತೆಗೆ ಮುನಿರತ್ನ ಒಬ್ಬ ಕಾರ್ಯಕರ್ತನಾಗಿ ಮುಂದುವರೆಯುತ್ತಾನೆ. ಕ್ಷೇತ್ರದ ಜನರ ಋಣ ತೀರಿಸಬೇಕು ಎಂದು ಹೇಳಿ ತಮ್ಮ ಮಾತು ಮುಗಿಸಿದ್ದಾರೆ. ಒಂದೆಡೆ ಪಕ್ಷದ ಹಿರಿಯ ನಾಯಕರ ಅಸಮಾಧಾನ ಮತ್ತೊಂದೆಡೆ ಕೊಟ್ಟ ಮಾತು ಉಳಿಸಿಕೊಳ್ಳಲಾಗದ ಅಸಹಾಯಕತೆ ಸಿಎಂ ಯಡಿಯೂರಪ್ಪ ಅವರನ್ನು ಕಾಡುತ್ತಿದೆ. ಬಿಜೆಪಿ ಭಿನ್ನಮತ ಎಲ್ಲಿಗೆ ಬಂದು ನಿಲ್ಲುತ್ತದೆ ಎಂಬುದಕ್ಕೆ ಕಾಲವೇ ಉತ್ತರಿಸಬೇಕು.