ಹೊಸ 'ಕುರುಕ್ಷೇತ್ರ'ದತ್ತ ಹೊರಟ ಶಾಸಕ ಮುನಿರತ್ನ: ದೊಡ್ಡ ಜವಾಬ್ದಾರಿ ನೀಡಿದ ಬಿಜೆಪಿ
ಬೆಂಗಳೂರು, ಮಾರ್ಚ್ 10: ಕಳೆದ ವರ್ಷ ಐಪಿಎಸ್ ಹುದ್ದೆ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ಮಾಜಿ ಅಧಿಕಾರಿ 'ಸಿಂಗಂ' ಕೆ. ಅಣ್ಣಾಮಲೈ ಅವರಿಗೆ ಈ ಬಾರಿಯ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿದೆ. ಬಿಜೆಪಿಯ ತಮಿಳುನಾಡು ಘಟಕದ ಉಪಾಧ್ಯಕ್ಷರಾಗಿರುವ ಕೆ. ಅಣ್ಣಾಮಲೈ ಅವರು ಅರವಕುರುಚಿ ವಿಧಾನಸಭೆ ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದಾರೆ. ಈ ಮೂಲಕ ತಮ್ಮ ರಾಜಕೀಯ ಭವಿಷ್ಯದ ಮೊದಲ ಅಗ್ನಿಪರೀಕ್ಷೆಗೆ ಒಳಗಾಗುತ್ತಿದ್ದಾರೆ.
ಇದುವರೆಗೂ ಚುನಾವಣೆ ಸಂದರ್ಭಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹೊಣೆಗಾರಿಕೆ ವಹಿಸಿಕೊಳ್ಳುತ್ತಿದ್ದ ಅಣ್ಣಾಮಲೈ, ಈ ಬಾರಿ ಸ್ವತಃ ಅಖಾಡಕ್ಕೆ ಇಳಿಯುತ್ತಿದ್ದಾರೆ. ಚುನಾವಣಾ ರಾಜಕಾರಣದಲ್ಲಿ ಅನನುಭವಿಯಾಗಿರುವ ಅವರಿಗೆ, ಚುನಾವಣೆಯ ತಂತ್ರಗಳನ್ನು ಕಲಿಸಿಕೊಡಲು ಕರ್ನಾಟಕದ ರಾಜಕಾರಣಿ ತೆರಳಿದ್ದಾರೆ.
ಅಧಿಕಾರಿಯಾಗಿದ್ದಾಗ ಭದ್ರತೆ ಒದಗಿಸುತ್ತಿದ್ದ ಅಣ್ಣಾಮಲೈ ಅವರಿಗೇ ಈಗ ವೈ ಪ್ಲಸ್ ಭದ್ರತೆ!
ಅಣ್ಣಾಮಲೈ ಅವರನ್ನು ಅರವಕುರುಚಿ ಕ್ಷೇತ್ರದಲ್ಲಿ ಗೆಲ್ಲಿಸುವ ಜವಾಬ್ದಾರಿಯನ್ನು ರಾಜರಾಜೇಶ್ವರಿ ನಗರದ ಶಾಸಕ ಆರ್. ಮುನಿರತ್ನ ನಾಯ್ಡು ಅವರಿಗೆ ವಹಿಸಲಾಗಿದೆ. ತಮಿಳುನಾಡು ಬಿಜೆಪಿ ಉಸ್ತುವಾರಿ ಸಿಟಿ ರವಿ ಅವರ ಆದೇಶದಂತೆ ಮುನಿರತ್ನ ಅವರಿಗೆ ಈ ಕರ್ತವ್ಯ ವಹಿಸಲಾಗಿದೆ.
ಅರವಕುರುಚಿಯಲ್ಲಿ ಮುನಿರತ್ನ ಕುರುಕ್ಷೇತ್ರ!
ಮುನಿರತ್ನ ಅವರು ಮಾರ್ಚ್ 12ರಿಂದ ಚುನಾವಣೆಯವರೆಗೂ ಅರವಕುರುಚಿಯಲ್ಲಿಯೇ ಮೊಕ್ಕಾ ಹೂಡಲಿದ್ದು, ಅಣ್ಣಾಮಲೈ ಅವರನ್ನು ಗೆಲ್ಲಿಸುವ ತಂತ್ರಗಳನ್ನು ರೂಪಿಸಲಿದ್ದಾರೆ. ಪಕ್ಷ ಸಂಘಟನೆ, ಪ್ರಚಾರ ಮುಂತಾದ ಕಾರ್ಯಗಳಲ್ಲಿ ಇತರೆ ಮುಖಂಡರೊಂದಿಗೆ ಸೇರಿ ಕಾರ್ಯನಿರ್ವಹಿಸಲಿದ್ದಾರೆ.
ಸಿಟಿ ರವಿ ಮುಂದೆ ಕೈಕಟ್ಟಿ ನಿಂತ 'ಸಿಂಗಂ' ಅಣ್ಣಾಮಲೈ: ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್
ಅಣ್ಣಾಮಲೈ ಗೆಲ್ಲುವ ಹೊಣೆ
'ದಕ್ಷಿಣ ಭಾರತದ ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗಿದೆ. ಅಲ್ಲಿನ ಒಂದು ಕ್ಷೇತ್ರದಲ್ಲಿ ನಮ್ಮ ರಾಜ್ಯದಲ್ಲಿ ಐಪಿಎಸ್ ಅಧಿಕಾರಿಯಾಗಿದ್ದ ಕೆ. ಅಣ್ಣಾಮಲೈ ಅವರು ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಆ ವಿಧಾನಸಭೆ ಕ್ಷೇತ್ರಕ್ಕೆ ನಾನು ಕೂಡ ಚುನಾವಣೆ ಕೆಲಸ ಮಾಡಲು ಹೋಗುತ್ತಿದ್ದೇನೆ. ಪಕ್ಷದ ರಾಷ್ಟ್ರೀಯ ಮುಖಂಡರು ನನಗೆ ಈ ಜವಾಬ್ದಾರಿ ನೀಡಿದ್ದಾರೆ' ಎಂದು ಮುನಿರತ್ನ ತಿಳಿಸಿದ್ದಾರೆ.
25 ದಿನ ಅಲ್ಲೇ ಇರುತ್ತೇನೆ
'ಕರ್ನಾಟಕದಲ್ಲಿ ದಕ್ಷ ಪೊಲೀಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಅವರ ಗೆಲುವಿಗಾಗಿ ಶ್ರಮಿಸುತ್ತೇನೆ. ಚುನಾವಣೆಯಲ್ಲಿ ಅವರ ಗೆಲ್ಲಲು ಎಲ್ಲರೀತಿಯಲ್ಲೂ ಕಷ್ಟಪಟ್ಟು ಪ್ರಯತ್ನಗಳನ್ನು ಮಾಡುತ್ತೇನೆ. ಮಾರ್ಚ್ 12ರಿಂದ 25 ದಿನಗಳ ಕಾಲ ಅರವಕುರುಚಿಯಲ್ಲಿಯೇ ಇದ್ದು, ಅವರನ್ನು ಗೆಲ್ಲಿಸುವ ಗುರಿಯೊಂದಿಗೆ ದುಡಿಯುತ್ತೇನೆ' ಎಂದು ತಿಳಿಸಿದ್ದಾರೆ.
ರಾಜೀನಾಮೆಯ ಹಿಂದಿನ ಸತ್ಯವನ್ನು ಬಾಯ್ಬಿಟ್ಟ ಸಿಂಗಂ ಅಣ್ಣಾಮಲೈ
Recommended Video
ಹುಟ್ಟೂರಲ್ಲಿ ಗೆಲ್ಲುತ್ತಾರೆ
'ಅಣ್ಣಾಮಲೈ ಅವರು ಇನ್ನೂ ಯುವಕರು. ಅವರು ಸ್ಪರ್ಧಿಸುತ್ತಿರುವ ತಮಿಳುನಾಡಿನ ಅರವಕುರುಚಿ ಕ್ಷೇತ್ರ ಅವರ ಹುಟ್ಟೂರು ಕೂಡ. ಅವರು ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂಬ ಭರವಸೆ ನನಗಿದೆ' ಎಂದು ಹೇಳಿದ್ದಾರೆ. ಅಣ್ನಾಮಲೈ ಅವರು 2020ರ ಆಗಸ್ಟ್ 25ರಂದು ದೆಹಲಿಯಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು.