RR ನಗರ ಫಲಿತಾಂಶ: ಮುಖಭಂಗವಾಗಿದ್ದು ಯಾರಿಗೆ, ಬಿಜೆಪಿಗೋ, ದೇವೇಗೌಡರಿಗೋ?
ರಾಜರಾಜೇಶ್ವರಿ ನಗರದ ಫಲಿತಾಂಶ ಹೊರಬಿದ್ದಿದೆ, ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನಂ ನಾಯ್ಡು ನಿರಾಯಾಸವಾಗಿ ಗೆಲುವು ಸಾಧಿಸಿದ್ದಾರೆ. ಸುಮಾರು 25ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ತಮ್ಮ ಸಮೀಪದ ಬಿಜೆಪಿ ಪ್ರತಿಸ್ಪರ್ಧಿಯನ್ನು ಸೋಲಿಸಿ, ಮುನಿರತ್ನ ಅಸೆಂಬ್ಲಿಗೆ ಆಯ್ಕೆಯಾಗಿದ್ದಾರೆ.
ಎಚ್ ಡಿ ರೇವಣ್ಣ ಅವರ ಪುತ್ರ ಮತ್ತು ಯುವ ಮುಖಂಡ ಪ್ರಜ್ವಲ್ ರೇವಣ್ಣ, ಹಾಸನ ಜಿಲ್ಲೆ ಬೇಲೂರು ಕ್ಷೇತ್ರದ ನಂತರ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಬಯಸಿದ್ದ ಕ್ಷೇತ್ರ ರಾಜರಾಜೇಶ್ವರಿ ನಗರ. ಯಾಕೆಂದರೆ, ಇಲ್ಲಿರುವ ಒಕ್ಕಲಿಗರ ಪ್ರಾಭಲ್ಯ.
ವಿಜಯಕ್ಕೆ ಐದು ಮೆಟ್ಟಿಲು : ಮುನಿರತ್ನ ಗೆಲುವು ಅಂದೇ ನಿರ್ಧಾರವಾಗಿತ್ತು
ರೇವಣ್ಣ ಮತ್ತು ಅವರ ಪತ್ನಿ ಭವಾನಿ ಮಗನಿಗೆ ಟಿಕೆಟ್ ನೀಡಬೇಕೆಂದು ಮಾಡಿದ ಎಲ್ಲಾ ಪ್ರಯತ್ನಗಳು ಕುಮಾರಸ್ವಾಮಿಯವರ ನಿರ್ಧಾರದಿಂದ ವಿಫಲಗೊಂಡಿತ್ತು. ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಸ್ಪರ್ಧೆಯಿರಲಿದೆ ಎನ್ನುವ ಲೆಕ್ಕಾಚಾರ ತಲೆಕೆಳಗಾಗಿ, ಬಿಜೆಪಿ ಇಲ್ಲಿ ಎರಡನೇ ಸ್ಥಾನ ಮತ್ತು ಜೆಡಿಎಸ್ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.
ಕಾಂಗ್ರೆಸ್ (1,08,064), ಬಿಜೆಪಿ (82,572) ಮತ್ತು ಜೆಡಿಎಸ್ (60,360) ಮತಗಳನ್ನು ಇಲ್ಲಿ ಪಡೆದುಕೊಂಡಿದೆ. ಅಸೆಂಬ್ಲಿ ಚುನಾವಣೆಗೆ ಮುನ್ನ ಮತ್ತು ನಂತರವೂ ಗೌಡರ ಕುಟುಂಬದಿಂದ ಇಲ್ಲಿ ಸರಿಯಾದ ಪ್ರಚಾರ ನಡೆಯಲೇ ಇಲ್ಲ ಎನ್ನುವುದು ವಾಸ್ತವತೆ. ಚುನಾವಣೆಗೆ ಒಂದೆರಡು ದಿನದ ಮುನ್ನ ದೇವೇಗೌಡ್ರು ಒಂದು ಸುತ್ತು ಪ್ರಚಾರ ಮಾಡಿ ಹೋಗಿದ್ದನ್ನು ಬಿಟ್ಟರೆ, ಕ್ಷೇತ್ರದಲ್ಲಿ ಜೆಡಿಎಸ್ ಮತಬ್ಯಾಂಕಿನ ಮೇಲೆ ಹಿಡಿತ ಸಾಧಿಸುತ್ತಾ ಬಂದಿದ್ದು ಪ್ರಜ್ವಲ್ ರೇವಣ್ಣ.
ಆರ್.ಆರ್.ನಗರ ಚುನಾವಣೆ : ಬಿಜೆಪಿ ಸೋಲಿಗೆ ಕಾರಣಗಳು!
ಇಲ್ಲಿನ ಚುನಾವಣೆ ಮುಂದೂಡಲ್ಪಟ್ಟ ನಂತರ, ಅಸೆಂಬ್ಲಿ ಚುನಾವಣಾ ಫಲಿತಾಂಶ, ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದಿದ್ದು, ಇದರ ಯಾವುದೇ ಲಾಭವನ್ನು ಪಡೆದುಕೊಳ್ಳಲು ಬಿಜೆಪಿ ವಿಫಲವಾಯಿತು. ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿಯಿರುವಾಗ ಬಿಜೆಪಿ ಸ್ವಲ್ಪ ಮಟ್ಟಿನ ಪ್ರಚಾರದಲ್ಲಿ ತೊಡಗಿಸಿಕೊಂಡರೂ, ಅದು ಪ್ರಯೋಜನಕ್ಕೆ ಬರಲಿಲ್ಲ. ಜನರ ಮುಂದೆ ಮತಯಾಚಿಸಲು ಬಿಜೆಪಿಗೆ ಹಲವು ವಿಷಯಗಳಿದ್ದವು, ಮುಂದೆ ಓದಿ
ಜೆಡಿಎಸ್ - ಕಾಂಗ್ರೆಸ್, RR ನಗರದಲ್ಲಿ ಪ್ರತ್ಯೇಕವಾಗಿ ಕಣಕ್ಕಿಳಿಯಿತು
ಅಸಲಿಗೆ, ಜನರ ಮುಂದೆ ಮತಯಾಚಿಸಲು ಬಿಜೆಪಿಗೆ ಹಲವು ವಿಷಯಗಳಿದ್ದವು. ಅಸೆಂಬ್ಲಿಯಲ್ಲಿ ಮೈತ್ರಿಮಾಡಿಕೊಳ್ಳುವ ಜೆಡಿಎಸ್ - ಕಾಂಗ್ರೆಸ್, RR ನಗರದಲ್ಲಿ ಮಾತ್ರ ಪ್ರತ್ಯೇಕವಾಗಿ ಕಣಕ್ಕಿಳಿಯಿತು. ಬಿಬಿಎಂಪಿಯಲ್ಲೂ ಇದನ್ನೇ ಮಾಡಿದ ಈ ಎರಡು ಪಕ್ಷಗಳಿಗೆ, ಇಲ್ಲಿ ಒಮ್ಮತದ ಅಭ್ಯರ್ಥಿ ಬೇಕಾಗಿರಲಿಲ್ಲವೇ. ಇದು ಅನುಕೂಲಕರ ರಾಜಕಾರಣ, ಅಪವಿತ್ರ ಮೈತ್ರಿ ಎಂದು ಬಿಜೆಪಿ ಇಲ್ಲಿ ತೀವ್ರವಾಗಿ ಪ್ರಚಾರ ಮಾಡಬಹುದಾಗಿತ್ತು ಎನ್ನುವುದು ಕಾರ್ಯಕರ್ತರ ವಲಯದಲ್ಲಿ ಕೇಳಿಬರುತ್ತಿರುವ ಮಾತು. ಆರ್ ಆರ್ ನಗರ ಮತ್ತು ಜಯನಗರದಲ್ಲಿ ಗೆದ್ದರೆ, ತಕ್ಷಣಕ್ಕಲ್ಲದಿದ್ದರೂ, ಮುಂದಿನ ದಿನಗಳಲ್ಲಿ ಬಿಜೆಪಿಗೆ ಅನುಕೂಲವಾಗುತ್ತಿತ್ತು.
ಚುನಾವಣೆಗೆ ಮುನ್ನ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು
ಚುನಾವಣೆಗೆ ಮುನ್ನ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಯಾವ ರೀತಿ ಒಬ್ಬರೊನ್ನೊಬ್ಬರು ಟೀಕಿಸುತ್ತಿದ್ದರು. ವೈಯಕ್ತಿಕ ಮಟ್ಟದಲ್ಲಿ ಕೆಸೆರೆರೆಚಾಟ ನಡೆಸುತ್ತಿದ್ದ ಈ ಪಕ್ಷಗಳು ಕೇವಲ ಅಧಿಕಾರಕ್ಕಾಗಿ ಒಂದಾದವು. ಸರಕಾರ ರಚಿಸಲು ಒಂದಾದ ಈ ಎರಡು ಪಕ್ಷಗಳು, ರಾಜರಾಜೇಶ್ವರಿ ನಗರದಲ್ಲಿ ಪ್ರತ್ಯೇಕವಾಗಿ ಕಣಕ್ಕಿಳಿಯಿತು. ಡಿ ಕೆ ಶಿವಕುಮಾರ್ ಮನವಿ ಮಾಡಿಕೊಂಡರೂ, ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣದಿಂದ ಹಿಂದಕ್ಕೆ ಸರಿಸಲಿಲ್ಲ. ಈ ಅಂಶವನ್ನೂ ಬಿಜೆಪಿ ಪ್ರಚಾರಕ್ಕೆ ಬಳಸಿಕೊಳ್ಲಬಹುದಾಗಿತ್ತು.
ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷವನ್ನು ಜನರು ತಿರಸ್ಕರಿಸಿದ್ದಾರೆ
ಬಿಜೆಪಿ 104 ಸ್ಥಾನ ಗೆದ್ದರೂ, ಕೆಲವೇ ಶಾಸಕರ ಕೊರತೆಯಿಂದ ಅಧಿಕಾರ ವಂಚಿತವಾಯಿತು. ನಮ್ಮದು ಏಕೈಕ ದೊಡ್ಡ ಪಕ್ಷ, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷವನ್ನು ಜನರು ತಿರಸ್ಕರಿಸಿದ್ದಾರೆ. ಆದರೂ, ಜನಾದೇಶದ ಪ್ರಕಾರ ಏಕೈಕ ದೊಡ್ಡ ಪಕ್ಷವಾಗಿರುವ ನಮ್ಮನ್ನು ಅಧಿಕಾರದಿಂದ ದೂರವಿಡಲು ಈ ಎರಡು ಪಕ್ಷಗಳು ಷಡ್ಯಂತ್ರ ನಡೆಸಿದವು ಎನ್ನುವ ಅಂಶವನ್ನು ಜನರ ಬಳಿ ತಲುಪಿಸಲು ನಾವು ವಿಫಲರಾದೆವು ಎನ್ನುವುದು ಪಕ್ಷದ ಕಾರ್ಯಕರ್ತರ ಬೇಸರದ ಮಾತು.
ಅಪಾರ್ಟ್ಮೆಂಟ್ ಒಂದರಲ್ಲಿ ಸಿಕ್ಕಿದ ಸಾವಿರಾರು ಅಸಲಿ ವೋಟರ್ ಐಡಿ
ಇನ್ನೇನು ಚುನಾವಣೆ ನಡೆಯಬೇಕು ಎನ್ನುವಷ್ಟರಲ್ಲಿ ಮತದಾನದ ಹಿಂದಿನ ದಿನ ರಾಜರಾಜೇಶ್ವರಿ ನಗರದ ಚುನಾವಣೆ, ವೋಟರ್ ಐಡಿ ವಿಚಾರದಲ್ಲಿ ಮುಂದಕ್ಕೆ ಹೋಯಿತು. ಅಪಾರ್ಟ್ಮೆಂಟ್ ಒಂದರಲ್ಲಿ ಸಿಕ್ಕಿದ ಸಾವಿರಾರು ಅಸಲಿ ವೋಟರ್ ಐಡಿ ಪ್ರಕರಣಕ್ಕೆ ಕಾರಣ ಯಾರು ಎಂದು ನೋಡಿದಾಗ, ಎಲ್ಲರ ಕಣ್ಣು ನೆಟ್ಟಿದ್ದು ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನಂ ಅವರ ಕಡೆ. ಈ ವಿಚಾರವನ್ನೂ ಜನರ ಬಳಿ ಪರಿಣಾಮಕಾರಿಯಾಗಿ ತೆಗೆದುಕೊಂಡು ಹೋಗಲು ಬಿಜೆಪಿ ವಿಫಲವಾಯಿತು.
ಜಯನಗರ ಕ್ಷೇತ್ರವನ್ನು ಕಾಂಗ್ರೆಸ್ಸಿಗೆ ತಾಂಬೂಲ ತಟ್ಟೆಯಲ್ಲಿ ಹಾಕಿ ಒಪ್ಪಿಸಲಿದೆಯಾ?
ಒಟ್ಟಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ ಈ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ತಮ್ಮ ಪಕ್ಷದ ಅಭ್ಯರ್ಥಿ ಸೋತ ನಂತರ ಸಿಎಂ ಕುಮಾರಸ್ವಾಮಿಯವರೇ ಇದನ್ನು ಒಪ್ಪಿಕೊಂಡಿದ್ದಾರೆ. ಬಿಜೆಪಿ ಗೆಲ್ಲಬಹುದಾದ ಅವಕಾಶವನ್ನು ಕೈಚೆಲ್ಲಿದೆ. ಇನ್ನು ಜಯನಗರ ಕ್ಷೇತ್ರದ ಚುನಾವಣೆ. ಬಿ ಎನ್ ವಿಜಯಕುಮಾರ್ ನಿಧನದವರೆಗೂ ಬಿಜೆಪಿಯ ಭದ್ರಕೋಟೆಯಾಗಿದ್ದ ಈ ಕ್ಷೇತ್ರವನ್ನು ಈ ಬಾರಿಯ ಚುನಾವಣೆಯಲ್ಲಿ, ಬಿಜೆಪಿ, ಕಾಂಗ್ರೆಸ್ಸಿಗೆ ತಾಂಬೂಲ ತಟ್ಟೆಯಲ್ಲಿ ಹಾಕಿ ಒಪ್ಪಿಸಲಿದೆಯಾ?