ಕಾಂಗ್ರೆಸ್ನಿಂದ ರೋಷನ್ ಬೇಗ್ ಅಮಾನತು, ಯಾರು ಏನು ಹೇಳಿದರು?
Recommended Video
ಬೆಂಗಳೂರು, ಜೂನ್ 19 : ಶಿವಾಜಿನಗರ ಕ್ಷೇತ್ರದ ಶಾಸಕ, ಮಾಜಿ ಸಚಿವ ರೋಷನ್ ಬೇಗ್ ಅಮಾನತು ಮಾಡಿರುವ ವಿಚಾರ ಕರ್ನಾಟಕ ಕಾಂಗ್ರೆಸ್ನಲ್ಲಿ ಚರ್ಚೆಗೆ ಕಾರಣವಾಗಿದೆ. ಬೆಂಗಳೂರಿನಿಂದ ದೆಹಲಿ ತನಕ ಈ ವಿಚಾರದ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಪಕ್ಷ ವಿರೋಧಿ ಚಟುವಟಿಕೆ ಹಿನ್ನಲೆಯಲ್ಲಿ ರೋಷನ್ ಬೇಗ್ ಅವರನ್ನು ಅಮಾನತು ಮಾಡಿ ಕೆಪಿಸಿಸಿ ಅದೇಶ ಹೊರಡಿಸಿದೆ. ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ರೋಷನ್ ಬೇಗ್ 'ಸತ್ಯ ಹೇಳುವುದು ಅಪರಾಧವೇ?' ಎಂದು ಕರ್ನಾಟಕ ಕಾಂಗ್ರೆಸ್ ನಾಯಕರ ಮುಂದೆ ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಕರ್ನಾಟಕದ ಕಾಂಗ್ರೆಸ್ ನಾಯಕರಿಗೆ ರೋಷನ್ ಬೇಗ್ ಪ್ರಶ್ನೆಗಳು
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ವಿರುದ್ಧ ವಾಗ್ದಾಳಿಗಳನ್ನು ನಡೆಸಿದ್ದ ರೋಷನ್ ಬೇಗ್ ಅವರಿಗೆ ಪಕ್ಷ ಅಮಾನತು ಶಿಕ್ಷೆಯನ್ನು ನೀಡಿದೆ.
ಪಕ್ಷ ವಿರೋಧಿ ಚಟುವಟಿಕೆ: ಕಾಂಗ್ರೆಸ್ನಿಂದ ರೋಷನ್ ಬೇಗ್ ಅಮಾನತು
'ನಾನು ಕಾಂಗ್ರೆಸ್ ಪಕ್ಷದ ಶಿಸ್ತಿನಿ ಸಿಪಾಯಿ. ಹಿರಿಯ ನಾಯಕರ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ' ಎಂದು ರೋಷನ್ ಬೇಗ್ ಹೇಳಿದ್ದಾರೆ. ರೋಷನ್ ಬೇಗ್ ಅಮಾನತು ಬಗ್ಗೆ ಯಾವ ನಾಯಕರು ಏನು ಹೇಳಿದರು?....
ರೋಷನ್ ಬೇಗ್ ಅಮಾನತು, ತಕ್ಕ ಶಾಸ್ತಿ ಎಂದ ಹ್ಯಾರಿಸ್
ನೋಟಿಸ್ಗೆ ಉತ್ತರ ಕೊಡಲಿಲ್ಲ
'ಮಾಜಿ ಸಚಿವ ರೋಷನ್ ಬೇಗ್ ಅವರಿಗೆ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಲು ನೋಟಿಸ್ ನೀಡಲಾಗಿತ್ತು. ಆದರೆ, ಅವರು ನೋಟಿಸ್ಗೆ ಉತ್ತರ ಕೊಟ್ಟಿರಲಿಲ್ಲ. ಆದ್ದರಿಂದ ಕೆಪಿಸಿಸಿ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿತ್ತು. ಈಗ ಅಮಾನತುಗೊಳಿಸಲಾಗಿದೆ' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮಾತುಕತೆ ನಡೆಸಿ ಪ್ರತಿಕ್ರಿಯೆ ನೀಡುವೆ
'ರೋಷನ್ ಬೇಗ್ ಅವರ ವಿರುದ್ಧ ಕ್ರಮ ಕೈಗೊಂಡಿರುವುದನ್ನು ಮಾಧ್ಯಮಗಳಲ್ಲಿ ನೋಡಿದೆ. ಈ ಬಗ್ಗೆ ನಾಯಕರೊಂದಿಗೆ ಮಾತುಕತೆ ನಡೆಸಿ ನಂತರ ಪ್ರತಿಕ್ರಿಯೆ ನೀಡುವೆ. ಹೈಕಮಾಂಡ್ ಯಾಕೆ ಈ ತೀರ್ಮಾನ ಕೈಗೊಂಡಿದೆ ಎಂದು ತಿಳಿಯಬೇಕಿದೆ. ಕೆಪಿಸಿಸಿ ಅಧ್ಯಕ್ಷರೊಂದಿಗೂ ಮಾತುಕತೆ ನಡೆಸುತ್ತೇನೆ' ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಬೆಂಗಳೂರಿನಲ್ಲಿ ಹೇಳಿದರು.
ಶಿಸ್ತು ಕಾಪಾಡುವುದು ಅನಿವಾರ್ಯ
'ರೋಷನ್ ಬೇಗ್ ಅವರನ್ನು ಅಮಾನತು ಮಾಡಿದ ವಿಚಾರ ನನಗೆ ತಿಳಿದಿಲ್ಲ. ಈಗ ಯಾರೋ ಇಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ನಾನು ಮಾಹಿತಿ ಪಡೆದುಕೊಂಡು ಪ್ರತಿಕ್ರಿಯೆ ನೀಡುತ್ತೇನೆ. ಪಕ್ಷದಲ್ಲಿ ಶಿಸ್ತು ಕಾಪಾಡುವುದು ಅನಿವಾರ್ಯ. ಸಿದ್ದರಾಮಯ್ಯ ನಮ್ಮ ಸಿಎಲ್ಪಿ ನಾಯಕರು ಪಕ್ಷದ ನಾಯಕರಿಗೆ ಶಾಸಕರು ಗೌರವ ಕೊಡಬೇಕು. ನಾನು ಮೊದಲಿಂದನೂ ವ್ಯಕ್ತಿ ಪೂಜೆ ಮಾಡಬಾರದು, ಪಕ್ಷ ಪೂಜೆ ಮಾಡಬೇಕು ಎಂದು ಹೇಳುತ್ತಿದ್ದೇನೆ. ನಾವೆಲ್ಲ ಗಾಂಧಿ ಕುಟುಂಬಕ್ಕೆ, ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಿಂದ ಇದ್ದವೆ' ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದರು.
ಅವರೊಬ್ಬ ಅವಕಾಶವಾದಿ ರಾಜಕಾರಣಿ
ಶಿವಮೊಗ್ಗದಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು, 'ಅವರೊಬ್ಬ ಅವಕಾಶವಾದಿ ರಾಜಕಾರಣಿ. ಅವರನ್ನು ಮಂತ್ರಿ ಮಾಡಿದ್ದರೆ ಎಲ್ಲವೂ ಸರಿ ಇರುತ್ತಿತ್ತು. ಮಂತ್ರಿ ಮಾಡದೇ ಇರುವುದರಿಂದ ರೋಷನ್ ಬೇಗ್ ಈ ರೀತಿ ಹೇಳಿಕೆ ನೀಡಿದ್ದಾರೆ. ಪಕ್ಷದೊಳಗಿನ ಭಿನ್ನಾಭಿಪ್ರಾಯಗಳನ್ನು ಪಕ್ಷದೊಳಗೆ ಸರಿಪಡಿಸಿಕೊಳ್ಳಬೇಕು. ಬೀದಿಯಲ್ಲಿ ನಿಂತು ಮಾತನಾಡುವುದಲ್ಲ. ಅವರ ವಿರುದ್ಧ ಶಿಸ್ತು ಕ್ರಮ ಸರಿಯಾಗಿದೆ' ಎಂದು ಹೇಳಿದರು.