ನಾನೇ ರಾಜಾಹುಲಿ ಎಂದು ಮತ್ತೊಮ್ಮೆ ಸಾಬೀತು ಪಡಿಸಿದ ಯಡಿಯೂರಪ್ಪ
Recommended Video
ಉತ್ತರ ಕರ್ನಾಟಕದಲ್ಲಿ ಕ್ಲೀನ್ ಸ್ವೀಪ್ ಮಾಡುವ ಮೂಲಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತೊಮ್ಮೆ ತಮ್ಮ ಖದರು ತೋರಿಸಿದ್ದಾರೆ. ಉಪ ಸಮರದಲ್ಲಿ ಕೇವಲ 6 ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿ ಜಯಗಳಿಸಲಿ ಎಂದು ಬಯಸಿದ್ದ ಸ್ವಪಕ್ಷದಲ್ಲಿನ ವಿರೋಧಿ ಪಾಳೆಯಕ್ಕೆ ಮುಂದಿನ ಮೂರುವರೆ ವರ್ಷಗಳ ಕಾಲ ಕೆಲಸವಿಲ್ಲದಂತೆ ಮಾಡಿದ್ದಾರೆ.
15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆ ಆಗುತ್ತಿದ್ದಂತೆಯೆ ಬಿಜೆಪಿಯಲ್ಲಿನ ಯಡಿಯೂರಪ್ಪ ವಿರೋಧಿ ಬಣ ಆ್ಯಕ್ಟಿವ್ ಆಗಿತ್ತು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರಬೇಕು, ಆದರೆ ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿಯಬೇಕು ಎನ್ನುವ ಗುರಿಯೊಂದಿಗೆ ರಾಜಕೀಯ ರಣತಂತ್ರಗಾರಿಕೆಯನ್ನ ಯಡಿಯೂರಪ್ಪ ವಿರೋಧಿ ಬಣದ ನಾಯಕರೇ ಶುರು ಮಾಡಿದ್ದರು. ಅದಕ್ಕೆ ಉಪ ಸಮರದ ಫಲಿತಾಂಶದ ಮೂಲಕ ಸ್ವಪಕ್ಷದಲ್ಲಿನ ವಿರೋಧಿ ನಾಯಕರಿಗೆ ಯಡಿಯೂರಪ್ಪ, ಬಿಜೆಪಿಗೆ ನಾನೇ ರಾಜಾಹುಲಿ ಎಂಬ ಖಡಕ್ ಸಂದೇಶವನ್ನು ರವಾನಿಸಿದ್ದಾರೆ.
ಅಷ್ಟಕ್ಕೂ ಸ್ವಪಕ್ಷದಲ್ಲಿ ಯಡಿಯೂರಪ್ಪ ವಿರುದ್ಧ ನಡೆದ ಷಡ್ಯಂತ್ರಗಳೇನೂ?:
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ ಸರಳ ಬಹುಮತ ಪಡೆಯುವಲ್ಲಿ ವಿಫಲವಾಗಿತ್ತು. ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿ ಮೂರು ದಿನಗಳ ಕಾಲ ಸಿಎಂ ಆಗಿದ್ದರೂ ಬಹುಮತ ಸಾಬೀತು ಪಡಿಸುವಲ್ಲಿ ವಿಫಲರಾಗಿದ್ದರು. ಪಕ್ಷದ ನಾಯಕರು ಸಾಥ್ ಕೊಡದೇ ಇದ್ದುದರಿಂದ ಇಬ್ಬರು ಪಕ್ಷೇತರ ಶಾಸಕರನ್ನ ಬಿಜೆಪಿಗೆ ಕರೆತರುವುದು ಯಡಿಯೂರಪ್ಪರಿಗೆ ಅಸಾಧ್ಯವಾಗಿತ್ತು. ಹಾಗಾಗಿ ಮೂರೇ ದಿನಗಳಲ್ಲಿ ಸಿಎಂ ಸ್ಥಾನಕ್ಕೆ BSY ರಾಜೀನಾಮೆಯನ್ನು ಕೊಡಬೇಕಾಯ್ತು.
ಫಲಿತಾಂಶಕ್ಕೆ ಕ್ಷಣಗಣನೆ: ಬಿಎಸ್ವೈಗೆ 'ಒಳ್ಳೆದಾಗಲಿ' ಎಂದ ಡಿ.ಕೆ.ಶಿವಕುಮಾರ್
ರಾಜೀನಾಮೆ ಬಳಿಕ ತಾವೇ ಫಿಲ್ಡಿಗಿಳಿದ ಬಿ.ಎಸ್. ಯಡಿಯೂರಪ್ಪ:
ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಳಿಕ ಬೇರೆ ಪಕ್ಷಗಳಲ್ಲಿನ ಶಾಸಕರನ್ನ ಸೆಳೆಯಲು ಪ್ರಯತ್ನಿಸಿದ್ದರು. ಅದೇ ಸಂದರ್ಭದಲ್ಲಿ ಗುರುಮಿಠಕಲ್ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ ಪುತ್ರ ಶರಣಗೌಡ ಜೊತೆಗಿನ ಆಪರೇಶನ್ ಕಮಲದ ಅಡಿಯೊ ಬಹಿರಂಗವಾಯಿತು. ಇದಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಆಪರೇಶನ್ ಕಮಲದ ಅಡಿಯೊ ಕುರಿತು ಚರ್ಚೆ ನಡೆಯಿತು. ಪ್ರಕರಣದ ತನಿಖೆಯನ್ನ ಸದನ ಸಮಿತಿಗೆ ಒಪ್ಪಿಸುವಾಗಲೂ ಸದನದಲ್ಲಿ ಉಳಿದ ಬಿಜೆಪಿ ನಾಯಕರ ಬೆಂಬಲ ಸಿಗದೆ ಯಡಿಯೂರಪ್ಪ ಮುಜುಗರ ಅನುಭವಿಸಿದ್ದರು.
ತಾವೇ ನೇರವಾಗಿ ಬೇರೆ ಪಕ್ಷದ ಶಾಸಕನ ಮಗನೊಂದಿಗೆ ಮಾತನಾಡುವ ಅಗತ್ಯವೇನಿತ್ತು? ಈಗ ಮಾಡಿದ್ದನ್ನ ಅವರೇ ಸಮರ್ಥಿಸಿಕೊಳ್ಳಲಿ. ನಮಗೇಕೆ ಉಸಾಬರಿ ಅಂತಾ ಬಿಜೆಪಿಯ ಪ್ರಮುಖರೆ ವಿಧಾನಸಭೆಯ ವಿರೋಧ ಪಕ್ಷದ ಲಾಂಜ್ ನಲ್ಲಿ ತಮ್ಮಲ್ಲಿ ಚರ್ಚ ಮಾಡಿಕೊಂಡಿದ್ದರು. ಯಡಿಯೂರಪ್ಪ ಮಾಡುತ್ತಿರುವುದು ತಪ್ಪು ಎಂಬ ಅರ್ಥದಲ್ಲಿ ಆಫ್ ದಿ ರೆಕಾರ್ಡ್ ಸುದ್ದಿಯನ್ನ ಮಾಧ್ಯಮಗಳಿಗೆ ಸ್ವತಃ ಬಿಜೆಪಿ ನಾಯಕರೇ ತೇಲಿ ಬಿಡುವ ಮೂಲಕ ಯಡಿಯೂರಪ್ಪ ಅಧಿಕಾರ ಹಿಡಿಯಲು ಮಾಡುತ್ತಿರುವುದು ತಪ್ಪು, ತಾವು ಸರಿ ಎಂಬಂತೆ ಬಿಂಬಿಸಿಕೊಂಡಿದ್ದರು.
ಅದಾದ ಬಳಿಕ ರಮೇಶ್ ಜಾರಕಿಹೊಳಿ ಸೇರಿದಂತೆ ಕಾಂಗ್ರೆಸ್-ಜೆಡಿಎಸ್ ಶಾಸಕರನ್ನ BSY, ಬಿಜೆಪಿಗೆ ಸೆಳೆಯುವಾಗಲೂ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಸೇರಿದಂತೆ ಪಕ್ಷದ ವೇದಿಕೆಯಲ್ಲಿಯೆ ವಿರೋಧವ್ಯಕ್ತವಾಗಿತ್ತು. ಅದ್ಯಾವುದನ್ನೂ ಯಡಿಯೂರಪ್ಪ ಕೇರ್ ಮಾಡದೇ ತಾವೇ ಫಿಲ್ಡಿಗಿಳಿದು ಮೈತ್ರಿ ಸರ್ಕಾರ ಹೋಗಿ ಅಲ್ಪಮತದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವಂತೆ ಮಾಡಿದ್ದರು.
ಯಡಿಯೂರಪ್ಪ ಕಾಡಿದ ಬಿಜೆಪಿ ಕಚೇರಿಯ 4ನೇ ಮಹಡಿ:
ಗೋಕಾಕ್ ಶಾಸಕರಾಗಿದ್ದ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷವನ್ನ ಬಿಡುವುದು ಖಚಿತವಾಗುತ್ತಿದ್ದಂತೆಯೆ ಅವರದೇ ಸಮುದಾಯದ ಶ್ರೀರಾಮುಲು ಮೂಲಕ ಜಾರಕಿಹೊಳಿ ಬಿಜೆಪಿಗೆ ಬರುವಂತೆ ಮಾಡುವಲ್ಲಿ BSY ಸಫಲವಾದರು. ಆ ನಂತರ ಒಟ್ಟು 16 ಜೆಡಿಎಸ್-ಕಾಂಗ್ರೆಸ್ ಶಾಸಕರು ಸರಣಿ ರಾಜೀನಾಮೆ ಕೊಟ್ಟಾಗಲೂ ಯಡಿಯೂರಪ್ಪ ಬೆಂಬಲಕ್ಕೆ ನಿಂತಿದ್ದು ಆಪ್ತ ಶಾಸಕರಾಗಿದ್ದ ಬಸವರಾಜ ಬೊಮ್ಮಾಯಿ, ಶ್ರೀರಾಮುಲು, ರೇಣುಕಾಚಾರ್ಯ ಸೇರಿದಂತೆ ಬೆರಳೆಣಿಕೆಯ ನಾಯಕರು ಮಾತ್ರ. ಮೈತ್ರಿ ಸರ್ಕಾರ ಕೆಡವಿದ ಆರೋಪ ಬಿಜೆಪಿ ಮೇಲೆ ಬರದಂತೆ ಎಚ್ಚರ ವಹಿಸಿ ಅಂತಾ ಚಾಮರಾಜಪೇಟೆಯಿಂದ ಕ್ಷಣಕ್ಷಣಕ್ಕೂ ಆದೇಶಗಳು ಬಂದಿದ್ದವು. ಇದಲ್ಲದೆ ಇದು ಪಕ್ಷದ ಸಿದ್ದಾಂತಕ್ಕೆ ವಿರುದ್ಧ ಅಂತಾ 'ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯ 4ನೇ ಮಹಡಿಯಲ್ಲಿ ಗಂಭೀರ ಚರ್ಚೆಗಳು' ನಡೆಯುತ್ತಿದ್ದವು. ಒಟ್ಟಾರೆ ಯಡಿಯೂರಪ್ಪ ಮತ್ತೊಮ್ಮೆ ಸಿಎಂ ಆಗಲೇ ಬಾರದು ಎಂಬ ತೀರ್ಮಾನಕ್ಕೆ ಅದಾಗಲೇ ಸ್ವಪಕ್ಷ, ಸ್ವಸಂಘಟನೆಗಳು ತೀರ್ಮಾನಿಸಿ ಆಗಿತ್ತು. ಆದರೆ ಶಾಸಕರ ಬೆಂಬಲ ಹೊಂದಿದ್ದ ಯಡಿಯೂರಪ್ಪ ಸಿಎಂ ಆಗೋದನ್ನ ತಡೆಯಲು ಆಗಲಿಲ್ಲ.
ಫಲಿತಾಂಶಕ್ಕೂ ಮುನ್ನವೇ ಸಂಪುಟ ವಿಸ್ತರಣೆ ಪ್ರಕ್ರಿಯೆಯತ್ತ ಯಡಿಯೂರಪ್ಪ
ಇನ್ನೂ ಬಂದಿಲ್ಲ ವಿಡಿಯೊ ಬಹಿರಂಗ ಕುರಿತ ಬಿಜೆಪಿ ಆಂತರಿಕ ತನಿಖಾ ವರದಿ:
ಕೊನೆಗೆ ಉಪ ಚುನಾವಣೆ ತಯಾರಿ ನಡೆದಾಗಲೂ ಯಡಿಯೂರಪ್ಪ ಹುಬ್ಬಳ್ಳಿಯಲ್ಲಿ ಪಕ್ಷದ ಮುಖಂಡರೊಂದಿಗಿನ ಗೌಪ್ಯ ಸಭೆಯಲ್ಲಿ ಮಾತನಾಡಿದ ವಿಡಿಯೊ ಬಹಿರಂಗವಾಗಿತ್ತು. ಆ ಮೂಲಕ ಉಪ ಚುನಾವಣೆ ಮೇಲೆ ಅದರ ಪರಿಣಾಮವಾಗಲಿ ಅಂತಾ ಸ್ವತಃ ಬಿಜೆಪಿ ನಾಯಕರೇ ಪ್ರಯತ್ನಿಸಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು. ಇದಲ್ಲದೆ ಕಾನೂನಾತ್ಮಕವಾಗಿಯೂ ಯಡಿಯೂರಪ್ಪರಿಗೆ ತೊಂದರೆ ಆಗಿ, ಎಲ್ಲ ಅನರ್ಹ ಶಾಸಕರು ಗೆಲ್ಲುವುದನ್ನ ತಡೆಯುವ ಉದ್ದೇಶ BSY ವಿರೋಧಿ ಬಣದ್ದಾಗಿತ್ತು. ಈ ಕುರಿತಂತೆ ಆಂತರಿಕ ತನಿಖೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆದೇಶವನ್ನೂ ಕೊಟ್ಟಿದ್ದರು. ಆದರೇ ಉಪ ಚುನಾವಣೆ ಫಲಿತಾಂಶ ಬಂದರೂ ಆಂತರಿಕ ತನಿಖೆಯ ವರದಿ ಮಾತ್ರ ಇನ್ನೂ ಬಹಿರಂಗವಾಗಿಲ್ಲ. ಉಪ ಚುನಾವಣೆಯಲ್ಲಿ ಕಡಿಮೆ ಸಂಖ್ಯೆ ಬಂದಷ್ಟೂ ಪಕ್ಷದಲ್ಲಿ ಯಡಿಯೂರಪ್ಪ ಹಿಡಿತ ಕಡಿಮೆ ಆಗುತ್ತದೆ. ಆ ಮೂಲಕ ಮುಂದಿನ ಒಂದು ವರ್ಷದಲ್ಲಿ ಯಡಿಯೂರಪ್ಪ ರಾಜೀನಾಮೆ ಕೊಡುವಂತೆ ಮಾಡಬಹುದು ಎಂಬ ಲೆಕ್ಕಾಚಾರವಿತ್ತಂತೆ.
ಆದರೆ ಏಕಾಂಗಿಯಾಗಿ ಉಪ ಚುನಾವಣೆ ಎದುರಿಸಿದ ಯಡಿಯೂರಪ್ಪ ಸ್ವಪಕ್ಷದಲ್ಲಿನ ಹಾಗೂ ವಿರೋಧ ಪಕ್ಷಗಳಲ್ಲಿನ ವಿರೋಧಿಗಳಿಗೆ ಶಾಕ್ ಕೊಟ್ಟಿದ್ದಾರೆ. ಉಪ ಚುನಾವಣೆ ಫಲಿತಾಂಶದ ಭರ್ಜರಿ ಜಯದ ಮೂಲಕ ರಾಜ್ಯದಲ್ಲಿ ಸಿಎಂ ಹುದ್ದೆ ಸಧ್ಯಕ್ಕೆ ಖಾಲಿ ಇಲ್ಲ ಎಂದ ಸಂದೇಶವನ್ನ ವಿರೋಧಿ ಬಣಕ್ಕೆ ಯಡಿಯೂರಪ್ಪ ಕೊಟ್ಟಿದ್ದಾರೆ.