ರೋಹಿತ್ ಚಕ್ರತೀರ್ಥರಿಗೆ ಕಾಮತ ಪ್ರತಿಷ್ಠಾನದ ಪ್ರಶಸ್ತಿ
ಬೆಂಗಳೂರು, ಪೆಬ್ರವರಿ 27 : ಡಬಲ್ ಬ್ಯಾರಲ್ ಬಂದೂಕಿನ ನಳಿಕೆಯಿಂದ ಸಿಡಿದ ಗುಂಡಿನಂತೆ ತಮ್ಮ ಅಭಿಪ್ರಾಯಗಳನ್ನು ಲೇಖನಗಳ ಮೂಲಕ ಅಭಿವ್ಯಕ್ತಪಡಿಸುವ ಖ್ಯಾತ ಲೇಖಕ, ಅಂಕಣಕಾರ, ಸೋಷಿಯಲ್ ಮೀಡಿಯಾ ಸೆಲೆಬ್ರಿಟಿ ರೋಹಿತ್ ಚಕ್ರತೀರ್ಥ ಅವರು ಡಾ. ಕೃಷ್ಣಾನಂದ ಕಾಮತ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇದೇ ಸಂದರ್ಭದಲ್ಲಿ, ಕನ್ನಡ ನಾಡಿನ ಅನನ್ಯ ಪ್ರತಿಭೆ, ಅಪರೂಪದ ಸಂಶೋಧಕ, ಛಾಯಾಚಿತ್ರಕಾರ, ಪ್ರಾಣಿಪಕ್ಷಿಗಳ ತಜ್ಞ, ವಿಜ್ಞಾನ ಬರಹಗಾರ ಡಾ.ಕೃಷ್ಣಾನಂದ ಕಾಮತ (1934-2002) ಅವರ ಮಡದಿ ಡಾ. ಜ್ಯೋತ್ಸ್ನಾ ಕಾಮತ, ಡಾ. ಸುಷಮಾ ಆರೂರ್ ಅವರು ಸಂಪಾದಿಸಿರುವ, ಪ್ರಕಾಶ್ ಬುರ್ಡೆ ಅವರ ಸಂಗೀತಯಾನ 'ಸಂಗೀತ ಸರಸಿ' ಕೃತಿ ಬಿಡುಗಡೆಯಾಗುತ್ತಿದೆ.
ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣದಲ್ಲಿರುವ ಡಾ. ಕೃಷ್ಣಾನಂದ ಕಾಮತ ಪ್ರತಿಷ್ಠಾನ, ಕೃಷ್ಣಾಪುರದೊಡ್ಡಿಯ ಕೆಎಸ್ ಮುದ್ದಪ್ಪ ಟ್ರಸ್ಟ್, ಬೆಂಗಳೂರಿನ ಸಾರ್ವಜನಿಕ ಗ್ರಂಥಾಲಯ ಇಲಾಖೆ ಜಂಟಿಯಾಗಿ ಈ ಪ್ರಸಸ್ತಿ ಪ್ರದಾನ ಮತ್ತು ಪುಸ್ತಕ ಬಿಡುಗಡೆಯ ಕಾರ್ಯಕ್ರಮ ಹಮ್ಮಿಕೊಂಡಿವೆ.
ರೋಹಿತ್ ಚಕ್ರತೀರ್ಥ ಅವರಿಗೆ ನೀಡಲಾಗುತ್ತಿರುವ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ಜ್ಯೋತ್ಸ್ನಾ ಕಾಮತ ಅವರು ವಹಿಸುತ್ತಿದ್ದಾರೆ. ಪ್ರಶಸ್ತಿ ಪುರಸ್ಕೃತರ ಕುರಿತು ಶಿವಪ್ರಸಾದ್ ಭಟ್ ಅವರು ಮಾತನಾಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ವಿ. ಕೃಷ್ಣ ಅವರು ಆಗಮಿಸುತ್ತಿದ್ದಾರೆ.
ಡಾ. ಜ್ಯೋತ್ಸ್ನಾ ಕಾಮತ ಮತ್ತು ಡಾ. ಸುಷಮಾ ಆರೂರ್ ಅವರು ಸಂಪಾದಿಸಿರುವ ಕೃತಿಯನ್ನು ಖ್ಯಾತ ಕಾದಂಬರಿಕಾರ ಡಾ. ಎಸ್ಎಲ್ ಭೈರಪ್ಪ ಅವರು ಬಿಡುಗಡೆ ಮಾಡಲಿದ್ದಾರೆ. ಕೃತಿ ಬಿಡುಗಡೆ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳನ್ನು ಡಾ. ಜ್ಯೋತ್ಸ್ನಾ ಕಾಮತ ಅವರು ಆಡಲಿದ್ದಾರೆ.
ಪ್ರಶಸ್ತಿ ಪ್ರದಾನ ಮತ್ತು ಕೃತಿ ಬಿಡುಗಡೆ ಕಾರ್ಯಕ್ರಮ 11ನೇ ಮಾರ್ಚ್ 2017, ಶನಿವಾರ ಸಂಜೆ 5.30ಕ್ಕೆ, ಬೆಂಗಳೂರಿನಲ್ಲಿರುವ ಹಂಪಿನಗರದ ನಗರ ಕೇಂದ್ರ ಗ್ರಂಥಾಲಯದ ಗ್ರಂಥಾಯಣದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಓದಿನರಮನೆಯಲ್ಲಿ ತಿಂಗಳ ಒನಪು 130ನೇ ಸಂಚಿಕೆ ಬಿಡುಗಡೆಯಾಗಲಿದೆ.
ಲೋಕೇಶ್ ಮತ್ತು ಕು.ನಿನಾದ ಅವರಿಂದ ಜಾನಪದ ಗೀತಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜೊತೆಗೆ, ಇಡೀ ಜಗತ್ತು ಸುತ್ತಾಡಿ ಹಲವಾರು ಪುಸ್ತಕಗಳ ಮೂಲಕ ತಮ್ಮ ಅನುಭವ ಹಂಚಿಕೊಂಡ ಕೃಷ್ಣಾನಂದ ಕಾಮತ ಅವರು ತೆಗೆದಿರುವ ಅಪರೂಪದ ಚಿತ್ರಗಳು, ಪುಸ್ತಕಗಳ ಪ್ರದರ್ಶನವೂ ಇರಲಿದೆ.
ರೋಹಿತ್ ಚಕ್ರತೀರ್ಥ ಕುರಿತು : ವಿಜ್ಞಾನ, ಗಣಿತ, ಪರಿಸರ, ಪ್ರವಾಸ ಸಾಹಿತ್ಯ, ಧರ್ಮ, ರಾಜಕೀಯ... ಯಾವುದೇ ವಿಷಯವಾಗಲಿ ನಿರರ್ಗಳವಾಗಿ, ನಿರ್ಭೀತಿಯಿಂದ ಬರೆಯುವ, ಉಡುಪಿಯ ರೋಹಿತ್ ಚಕ್ರತೀರ್ಥ ಅವರು 16 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಬೇರೆ ಭಾಷೆಗಳ ವಿವಿಧಾರ್ಥ ಸೂಚಿಸುವ ವಿಶೇಷ ಶಬ್ಧಗಳಿಂದ ಆಕರ್ಷಿತರಾಗಿ 'ವಾಗರ್ಥ ಚೂಡಾಮಣಿ' ಎಂಬ ಭಾಷೆಗೆ ಸಂಬಂಧಿಸಿದ ಪುಸ್ತಕವನ್ನೂ ಬರೆದಿದ್ದಾರೆ. ಬಹುಮುಖ ಪ್ರತಿಭೆಯ ರೋಹಿತ್ ಚಕ್ರತೀರ್ಥ ಅವರಿಗೆ ಅಭಿನಂದನೆಗಳು.