ಪೊಲೀಸರ ವೇಷದಲ್ಲಿ ಬಂದ ಕಳ್ಳರಿಂದ ಲಕ್ಷಾಂತರ ಹಣ ಲೂಟಿ
ಮಂಗಳೂರು, ಡಿಸೆಂಬರ್.15: ಪೊಲೀಸ ವೇಷದಲ್ಲಿ ಬಂದ ನಾಲ್ವರು ಕಳ್ಳರು ಲಕ್ಷಾಂತರ ಹಣವನ್ನು ಲೂಟಿ ಮಾಡಿಕೊಂಡು ಹೋದ ಪ್ರಕರಣ ಮಂಗಳೂರಿನ ಕಂಕನಾಡಿ ರೈಲ್ವೆ ಜಂಕ್ಷನ್ ಬಳಿ ಶುಕ್ರವಾರ ನಡೆದಿದೆ.
ಬಿಳಿ ಬಣ್ಣದ ಬೊಲೆರೊ ವಾಹನದಲ್ಲಿ ಬಂದ ನಾಲ್ವರು ಝುಬೈರ್ ಎಂಬುವರನ್ನು ಹೆದರಿಸಿ ಅವರ ಬಳಿ ಇದ್ದ 24.95ಲಕ್ಷ ರೂ ಹಣ ವಶಪಡಿಸಿಕೊಂಡು ಪರಾರಿಯಾಗಿದ್ದಾರೆ. ಹಣ ಕಳೆದುಕೊಂಡ ಇವರು ಕಂಗಲಾಗಿದ್ದಾರೆ.[ಮುತ್ತೂಟ್ ಫೈನಾನ್ಸ್ ನಲ್ಲಿ ದರೋಡೆಗೆ ಯತ್ನ]
ಮುಂಬೈಯಿಂದ ಮಂಗಳೂರು ಕಡೆಗೆ ಆಗಮಿಸಿದ ಝುಬೈರ್ ಸಿಟಿ ಬಸ್ ಹತ್ತಲು ಕಂಕನಾಡಿ ರೈಲ್ವೆ ಜಂಕ್ಷನ್ ಬಳಿ ನಡೆದುಕೊಂಡು ಹೋಗುತ್ತಿದ್ದರು. ಆಗ ಬಿಳಿ ಬಣ್ಣದ ಬೊಲೆರೊ ವಾಹನದಲ್ಲಿ ಬಂದ ನಾಲ್ವರು ಅಪರಿಚಿತರು ತಾವು ಪೊಲೀಸರೆಂದು ಹೇಳಿಕೊಂಡಿದ್ದಾರೆ. ಐಡೆಂಟಿಟಿ ಕಾರ್ಡ್ ತೋರಿಸಿ, ಬ್ಯಾಗಿನಲ್ಲಿ ಏನಿದೆ? ಎಂದು ಪ್ರಶ್ನಿಸಿದ್ದಾರೆ.
ಪೊಲೀಸರ ವೇಷ ಧರಿಸಿದ್ದ ನಾಲ್ವರು ಝುಬೈರ್ ಅವರನ್ನು ಕಾರಿನಲ್ಲಿ ಕುಳಿತುಕೊಳ್ಳುವಂತೆ ಸೂಚಿಸಿದ್ದಾರೆ. ಇದರಿಂದ ಹೆದರಿದ ಝುಬೈರ್ ಹಿಂದೆ ಸರಿದಾಗ ಬಲವಂತವಾಗಿ ಅವರನ್ನು ಎಳೆದುಕೊಂಡು ಕಾರಿನೊಳಗೆ ತಳ್ಳಿದರು.[ಮಂಗಳೂರಲ್ಲಿ ಬ್ಯಾಂಕ್ ದರೋಡೆ, 5 ಕೋಟಿ ಲೂಟಿ]
ಬಳಿಕ ಅವರ ಕೈಯಲ್ಲಿದ್ದ ಮೊಬೈಲ್ ಹಾಗೂ ಬ್ಯಾಗ್ ನ್ನು ಕಸಿದುಕೊಂಡ ದುಷ್ಕರ್ಮಿಗಳು ಮಾರಿಪಳ್ಳ ಎಂಬಲ್ಲಿ ವಾಹನದಿಂದ ದೂಡಿ ಪರಾರಿಯಾಗಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಉಡುಪಿ: ಸಿಂಡಿಕೇಟ್ ಬ್ಯಾಂಕ್ ನಲ್ಲಿ ದರೋಡೆ, ಕಳ್ಳರ ಪಾಲಾದ ಹಣ
ಉಡುಪಿ, ಡಿಸೆಂಬರ್, 15: ಸಿಂಡಿಕೇಟ್ ಬ್ಯಾಂಕ್ ಶಾಖೆಗೆ ಭಾನುವಾರ ತಡರಾತ್ರಿ ನುಗ್ಗಿದ ಕಳ್ಳರು ಎರಡು ಲಕ್ಷಕ್ಕೂ ಅಧಿಕ ಹಣ ದೋಚಿ ಪರಾರಿಯಾದ ಘಟನೆ ಪಡುಬಿದ್ರೆಯ ನಂದಿಕೂರು ಎಂಬಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ನಂದಿಕೂರಿನ ಸಿಂಡಿಕೇಟ್ ಬ್ಯಾಂಕ್ ಶಾಖೆಯಲ್ಲಿ ಯಾವುದೇ ಸೆಕ್ಯೂರಿಟಿ ಗಾರ್ಡ್ ಇಲ್ಲದಿರುವುದು ಹಾಗೂ ಸಿ.ಸಿ. ಕ್ಯಾಮರಾ ಅಳವಡಿಸದಿರುವುದೇ ದರೋಡೆಗೆ ಪ್ರಮುಖ ಕಾರಣ ಎಂದು ಸಾರ್ವಜನಿಕರು ದೂರಿದ್ದಾರೆ. ಪಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.[ಭಾರೀ ಹಣದೊಂದಿಗೆ ಪರಾರಿಯಾಗಿದ್ದ ಠಕ್ಕ ಶುಕ್ಲಾ ಸಿಕ್ಕ]
ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ರೈಲ್ವೇ ಹಳಿಯ ಆಸುಪಾಸಿನಲಿ ಗ್ಯಾಸ್ ಸಿಲಿಂಡರ್ ಪತ್ತೆಯಾಗಿದೆ. ಪೊಲೀಸರ ಜೊತೆ ಸೇರಿ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ತನಿಖೆ ಮುಂದುವರಿಸಿದ್ದಾರೆ.