ಮಡಿಕೇರಿಯಲ್ಲಿ ಭೀಕರ ರಸ್ತೆ ಅಪಘಾತ : ಇಬ್ಬರ ಸಾವು
ಮಡಿಕೇರಿ, ಮೇ 10 : ಚಾಲಕನ ನಿಯಂತ್ರಣ ತಪ್ಪಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಇಲ್ಲಿಗೆ ಸಮೀಪದ ಕೆದಕಲ್ ಬಳಿ ರಾಜ್ಯ ಹೆದ್ದಾರಿಯಲ್ಲಿ ಮಂಗಳವಾರ ನಡೆದಿದೆ.
ಮೈಸೂರಿನಿಂದ ಕೊಡಗಿನ ತಲಕಾವೇರಿಗೆ ಪ್ರವಾಸ ಹೊರಟಿದ್ದ 8 ಜನರಿದ್ದ ಜಿಪ್ಸಿ ವಾಹನ ಚಾಲಕನ ನಿಯಂತ್ರಣ ತಪ್ಪಿ, ಸುಂಟಿಕೊಪ್ಪ ಸಮೀಪದ ಕೆದಕಲ್ ಭದ್ರಕಾಳಿ ದೇವಾಲಯದ ತಿರುವಿನಲ್ಲಿ ಮಗುಚಿಕೊಂಡು ಬಿದ್ದಿದೆ.
ಕೆಎಸ್ಆರ್ಟಿಸಿ ಬಸ್ಸಿನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಹಿಂಭಾಗದಲ್ಲಿ ಕುಳಿತಿದ್ದ ಮೈಸೂರಿನ ರಾಜೇಂದ್ರ ನಗರದ ನಿವಾಸಿ ಚೈತ್ರಪೂರ್ಣಿಮಾ(24) ಎಂಬಾಕೆಯ ತಲೆಯು ರಸ್ತೆಗೆ ಬಡಿದು ತಲೆ ಹೋಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. [ಸಮೃದ್ಧ ಮಳೆಗಾಗಿ ತಲಕಾವೇರಿಯಲ್ಲಿ ವಿಶೇಷ ಪೂಜೆ]
ಗಂಭೀರವಾಗಿ ಗಾಯಗೊಂಡ ಸದನ್(25) ಎಂಬಾತನಿಗೆ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಮೈಸೂರಿಗೆ ಕರೆದೊಯ್ಯುತ್ತಿದ್ದ ಸಂದರ್ಭ ಮೃತಪಟ್ಟಿದ್ದಾನೆ. ಉಳಿದಂತೆ ವಾಹನದಲ್ಲಿದ್ದ ಮೈಸೂರಿನವರೇ ಆದ ಮಿಥುನ್, ನಂದಿನಿ, ರೇಣುಕಾ, ವಿನಯ್, ದಿವಿತಾ ಜೀಪಿನ ಚಾಲಕ ರಮೇಶ್ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತಕ್ಕೆ ಚಾಲಕನ ಅತೀ ವೇಗ ಮತ್ತು ಅಜಾಗರೂಕತೆಯೇ ಕಾರಣ ಎಂದೂ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಪಿ.ಜಗದೀಶ್ ಮತ್ತು ಸಿಬ್ಬಂದಿ ಅಪಘಾತ ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿ ಯುವತಿಯ ಶವವನ್ನು ಮಡಿಕೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಅಲ್ಲಿ ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ವಾರಿಸುದಾರರಿಗೆ ಒಪ್ಪಿಸಲಾಗಿದೆ. ಸುಂಟಿಕೊಪ್ಪ ಪೊಲೀಸರು ಮೊಕದ್ದಮೆ ದಾಖಲಿಸಿಕೊಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮಾನವೀಯತೆ ಮೆರೆದರು : ರಸ್ತೆ ಅಪಘಾತದ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಕುಶಾಲನಗರ ಜಿಲ್ಲಾ ಪಂಚಾಯತ್ ಸದಸ್ಯ ಪಿ.ಎಂ.ಲತೀಫ್ ಅವರು ಮೃತಪಟ್ಟ ಚೈತ್ರಪೂರ್ಣಿಮ ಅವರ ಶವವನ್ನು ತಮ್ಮ ಸ್ವಂತ ವಾಹನದಲ್ಲಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದರು.