ಶಿವಮೊಗ್ಗ ರಾಜಕೀಯ : ಆರ್.ಎಂ.ಮಂಜುನಾಥ ಗೌಡ ಜೆಡಿಎಸ್ ಅಭ್ಯರ್ಥಿ
ಶಿವಮೊಗ್ಗ, ಜನವರಿ 10 : ತೀರ್ಥಹಳ್ಳಿ ತಾಲೂಕಿನ ರಾಜಕೀಯ ಚಿತ್ರಣ ಬದಲಾಗಿದೆ. ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಜೆಡಿಎಸ್ ಸೇರುವುದಾಗಿ ಘೋಷಿಸಿದ್ದಾರೆ. ಇದರಿಂದಾಗಿ ಕ್ಷೇತ್ರದ ರಾಜಕೀಯದಲ್ಲಿ ಹೊಸ ಲೆಕ್ಕಾಚಾರ ಆರಂಭವಾಗಿದೆ.
ಕಳೆದ ವಾರ ತೀರ್ಥಹಳ್ಳಿ ಹಲವು ರಾಜಕೀಯ ಚಟುವಟಿಕೆಗಳಿಗೆ ಸಾಕ್ಷಿಯಾಗಿತ್ತು. ಬಿಜೆಪಿಯ ಪರಿವರ್ತನಾ ಯಾತ್ರೆ ನಡೆದಿತ್ತು. ಬಿ.ಎಸ್.ಯಡಿಯೂರಪ್ಪ ಆಗಮಿಸಿದ್ದರು. ಸಾಧನಾ ಸಮಾವೇಶ ಉದ್ದೇಶಿಸಿ ಮಾತನಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದಿದ್ದರು.
ಆರ್.ಎಂ.ಮಂಜುನಾಥ ಗೌಡ ಜೆಡಿಎಸ್ಗೆ?
ಮಂಗಳವಾರ ಆರ್.ಎಂ.ಮಂಜುನಾಥ ಗೌಡರು ಬೆಂಬಲಿಗರ ಸಭೆ ನಡೆಸಿ ಜೆಡಿಎಸ್ ಪಕ್ಷ ಸೇರುವುದಾಗಿ ಘೋಷಣೆ ಮಾಡಿದ್ದಾರೆ. 2013ರ ಚುನಾವಣೆ ಬಳಿಕ ಕಾಂಗ್ರೆಸ್ ಸೇರಿದ್ದ ಮಂಜುನಾಥ ಗೌಡರು, ಕೆಲವು ದಿನಗಳಿಂದ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಈಗ ಜೆಡಿಎಸ್ ಸೇರುವುದಾಗಿ ಘೋಷಿಸಿದ್ದಾರೆ. ಇದರಿಂದಾಗಿ ಕ್ಷೇತ್ರದ ರಾಜಕೀಯದಲ್ಲಿ ಹೊಸ ಸಂಚಲನ ಉಂಟಾಗಿದೆ.
ಕಿಮ್ಮನೆ ರತ್ನಾಕರ್ ಅವರಿಗೆ ಪಕ್ಷದಲ್ಲಿ ಉಜ್ವಲ ಭವಿಷ್ಯವಿದೆ: ಸಿಎಂ
ತೀರ್ಥಹಳ್ಳಿ ಕ್ಷೇತ್ರದ ಹಾಲಿ ಶಾಸಕರು ಕಾಂಗ್ರೆಸ್ನ ಕಿಮ್ಮನೆ ರತ್ನಾಕರ. 'ಮುಂದಿನ ಚುನಾವಣೆಯಲ್ಲಿಯೂ ಅವರನ್ನು ಬಹುಮತದಿಂದ ಗೆಲ್ಲಿಸಿ' ಎಂದು ಕಳೆದ ವಾರ ಕ್ಷೇತ್ರಕ್ಕೆ ಬಂದಿದ್ದ ಸಿದ್ದರಾಮಯ್ಯ ಕರೆ ನೀಡಿದ್ದಾರೆ. ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆರಗ ಜ್ಞಾನೇಂದ್ರ...
'ಈಗ ಆಟ ಶುರು, ಅಂತ್ಯವಲ್ಲ'
ಮಂಗಳವಾರ ಬೆಂಬಲಿಗರ ಸಭೆ ನಡೆಸಿದ ಆರ್.ಎಂ.ಮಂಜುನಾಥ ಗೌಡರು, ‘ರಾಷ್ಟ್ರೀಯ ಪಕ್ಷಗಳಿಂದ ಜನರಿಗೆ ಉಳಿಗಾಲವಿಲ್ಲ. ಆದ್ದರಿಂದ, ರಾಜ್ಯದಲ್ಲಿ ಜನಪರವಾಗಿರುವ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಸೇರುತ್ತೇನೆ. ಈಗ ಆಟ ಶುರು..ಅಂತ್ಯವಲ್ಲ' ಎಂದು ಹೇಳಿದ್ದಾರೆ.
'ನನಗೆ ಆಹ್ವಾನ ಕೊಟ್ಟಿದ್ದಾರೆ'
‘ಕ್ಷೇತ್ರದ ಜನರು ಎರಡೂ ಪಕ್ಷಗಳ ಅಧಿಕಾರ ನೋಡಿದ್ದೀರಿ. ದೇವೇಗೌಡರ ಮಾರ್ಗದರ್ಶನದಲ್ಲಿ ಕುಮಾರಸ್ವಾಮಿ ನನಗೆ ಆಹ್ವಾನ ಕೊಟ್ಟಿದ್ದಾರೆ. ನನಗೆ ಎಲ್ಲಾ ಪಕ್ಷದಲ್ಲೂ ಸ್ನೇಹಿತರಿದ್ದಾರೆ. ಅನೇಕರು ಜೆಡಿಎಸ್ ಸೇರಲು ಸಿದ್ಧವಾಗಿದ್ದಾರೆ' ಎಂದು ಹೇಳುವ ಮೂಲಕ ಹೊಸ ಲೆಕ್ಕಾಚಾರ ಹುಟ್ಟುಹಾಕಿದ್ದಾರೆ.
ಕಳೆದ ಬಾರಿ ಕೆಜೆಪಿಯಿಂದ ಸ್ಪರ್ಧಿಸಿದ್ದರು
2013ರ ಚುನಾವಣೆಯಲ್ಲಿ ಯಡಿಯೂರಪ್ಪ ನೇತೃತ್ವದ ಕೆಜೆಪಿಯಿಂದ ಆರ್.ಎಂ.ಮಂಜುನಾಥ ಗೌಡ ಚುನಾವಣೆಗೆ ಸ್ಪರ್ಧಿಸಿದ್ದರು. 1343 ಮತಗಳ ಅಂತರದಿಂದ ಕಿಮ್ಮನೆ ರತ್ನಾಕರ ವಿರುದ್ಧ ಸೋಲು ಕಂಡಿದ್ದರು.
ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ
ಆರ್.ಎಂ.ಮಂಜುನಾಥ ಗೌಡರ ನಿರ್ಧಾರದಿಂದ ಕ್ಷೇತ್ರದಲ್ಲಿ ತ್ರಿಕ್ರೋನ ಸ್ಪರ್ಧೆ ಏರ್ಪಡಲಿದೆ. ಬಿಜೆಪಿಯಿಂದ ಆರಗ ಜ್ಞಾನೇಂದ್ರ, ಕಾಂಗ್ರೆಸ್ನಿಂದ ಕಿಮ್ಮನೆ ರತ್ನಾಕರ ಮತ್ತು ಜೆಡಿಎಸ್ನಿಂದ ಮಂಜುನಾಥ ಗೌಡರು ಅಭ್ಯರ್ಥಿಯಾಗಲಿದ್ದು ಕ್ಷೇತ್ರದ ಚುನಾವಣಾ ಕಣ ಕುತೂಹಲಕ್ಕೆ ಕಾರಣವಾಗಲಿದೆ.
2013ರ ಫಲಿತಾಂಶ
2013ರ ಚುನಾವಣೆಯಲ್ಲಿ ಕಿಮ್ಮನೆ ರತ್ನಾಕರ ಅವರು 37,160, ಆರ್.ಎಂ.ಮಂಜುನಾಥ ಗೌಡ (ಕೆಜೆಪಿ) 35,817, ಆರಗ ಜ್ಞಾನೇಂದ್ರ 34,446 ಮತಗಳನ್ನು ಪಡೆದಿದ್ದರು. ಜೆಡಿಎಸ್ ಅಭ್ಯರ್ಥಿಯಾಗಿ ಆರ್.ಮದನ್ ಸ್ಪರ್ಧಿಸಿ 21,295 ಮತ ಪಡೆದಿದ್ದರು.