ಉತ್ತರ ಕನ್ನಡಕ್ಕೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೇಕು ಹೋರಾಟಕ್ಕೆ ಸಿದ್ದು, ಎಚ್ಡಿಕೆ ಬೆಂಬಲ
ಬೆಂಗಳೂರು ಜುಲೈ 25: ಭೌಗೋಳಿಕವಾಗಿ ವಿಸ್ತಾರವಾಗಿರುವ ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂಬ ಜನರ ಹೋರಾಟ, ಆಂದೋಲನವನ್ನು ಬೆಂಬಲಿಸಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಆಸ್ಪತ್ರೆ ಸ್ಥಾಪನೆಗೆ ಒತ್ತಾಯಿಸಿದ್ದಾರೆ.
ಈ ಸಂಬಂಧ ನಾಯಕರು ಟ್ವಿಟ್ ಮೂಲಕ ಬೆಂಬಲ ತಿಳಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಸೂಪರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಉತ್ತರ ಕನ್ನಡ ಜಿಲ್ಲೆಯ ಜನರು ನಡೆಸುತ್ತಿರುವ ಹೋರಾಟಕ್ಕೆ ನನ್ನ ಪರಿಪೂರ್ಣ ಬೆಂಬಲವಿದೆ. ಈ ಹೊರಾಟದಲ್ಲಿ ಜೆಡಿಎಸ್ ಪಕ್ಷದ ಸಂಪೂರ್ಣ ಬೆಂಬಲ ನೀಡಲಿದೆ. ಜಿಲ್ಲೆಯ ಜನರು ವರ್ಷಗಳಿಂದಲೂ ನ್ಯಾಯಯುತವಾದ ಈ ಬೇಡಿಕೆ ಇಟ್ಟಿದ್ದಾರೆ. ರಾಜ್ಯ ಸರ್ಕಾರ ಆದ್ಯತೆಯ ಮೇರೆಗೆ ಈಡೇರಿಸುವ ಮೂಲಕ ಜನರಿಗೆ ಆರೋಗ್ಯದ ಆಸರೆ ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ
ರಾಜ್ಯದ ಕೆಲವು ಕಡೆಗಳಲ್ಲಿ ಮಾತ್ರ ಸುಸಜ್ಜಿತ ಆಸ್ಪತ್ರೆಗಳಿವೆ. ಬಹುತೇಕ ಜಿಲ್ಲೆಗಳಲ್ಲಿ ಅಂತಹ ವ್ಯವಸ್ಥಿತ ಆಸ್ಪತ್ರೆಗಳ ಕೊರತೆ ಇದೆ. ಉತ್ತರ ಕನ್ನಡ ಜಿಲ್ಲೆಯ ಜನರು ತುರ್ತು ಚಿಕಿತ್ಸೆ ಬೇಕೆಂದರೆ, ಬೆಂಗಳೂರು, ಹುಬ್ಬಳ್ಳಿ, ಮಂಗಳೂರು, ಮೈಸೂರು, ಬೆಳಗಾವಿಯಂಥ ನಗರಗಳಿಗೆ ತೆರಳಬೇಕು. ಇದು ಅನಿವಾರ್ಯವು ಆಗಿದೆ. ಆದರೆ ಬಡವರು, ಜನಸಾಮಾನ್ಯರು ಚಿಕಿತ್ಸೆ ಹುಡುಕಿಕೊಂಡು ಹೋಗುವುದು ಹೇಗೆ?. ಆರೋಗ್ಯ ಸೌಲಭ್ಯ ಒದಗಿಸುವ ವಿಚಾರದಲ್ಲಿ ಅಸಮಾನತೆ ರಾಜ್ಯಕ್ಕೆ ಭೂಷಣವಲ್ಲ ಎಂದರು.
|
ಆಸ್ಪತ್ರೆಗಳು ಮೇಲ್ದರ್ಜೆಗೆ ಏರಿಸಲಾಗಿಲ್ಲ
ಇದೇ ಬಿಜೆಪಿ ಸರ್ಕಾರ ಕೋವಿಡ್ ಆರ್ಭಟಿಸುತ್ತಿದ್ದ ಕಾಲದಲ್ಲಿ ಎಲ್ಲ ಸಮುದಾಯ ಕೇಂದ್ರ, ತಾಲೂಕು, ಜಿಲ್ಲಾ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸುತ್ತೇವೆ ಎಂದು ಭರವಸೆ ನೀಡಿದ್ದರು. ಸರ್ಕಾರ ಆರೋಗ್ಯಕ್ಕೆ ಆದ್ಯತೆ ನೀಡುವುದಾಗಿ ತಿಳಿಸಿದ್ದರು. ಆದರೆ ಕೋವಿಡ್ ತಣ್ಣಗಾದ ಬಳಿಕ ಸರ್ಕಾರವು ತಣ್ಣಗಾಗಿದೆ ಎಂದು ಕುಮಾರಸ್ವಾಮಿ ದೂರಿದರು. ಸ್ಥಾಪಿಸಲಾದ ಆಕ್ಸಿಜನ್ ಘಟಕಗಳು, ವೆಂಟೆಲೇಟರ್ ಸೇರಿ ಖರೀದಿ ಮಾಡಿದ ವೈದ್ಯ ಪರಿಕರಗಳೆಲ್ಲ ಅನೇಕ ಕಡೆಗಳಲ್ಲಿ ಧೂಳು ತಿನ್ನುತ್ತಿವೆ. ಅವುಗಳ ಸಮರ್ಪಕ ಬಳಕೆ ಆಗಬೇಕು. ಪರಿಕರಗಳು ಇಲ್ಲದ ಕಡೆ ಪರಿಕರ ಒದಗಿಸುವ ಕೆಲಸವಾಗಬೇಕು ಎಂದು ಹೇಳಿದರು.
ಆರೋಗ್ಯ ಸೌಲಭ್ಯಗಳ ಸಮರ್ಪಕ ನಿರ್ವಹಣೆಯೂ ಮುಖ್ಯ
ಈಗಾಗಲೇ ತುರ್ತು ಸಂದರ್ಭದಲ್ಲಿ ತೆರಳುತ್ತಿದ್ದ ಆಂಬುಲೆನ್ಸ್ ವಾಹನಗಳು ಉಡುಪಿ ಜಿಲ್ಲೆಯ ಶಿರೂರು ಬಳಿ ಅಪಘಾತಕ್ಕೀಡಾಗಿದೆ. ಜನ ಮೃತಪಟ್ಟಿದ್ದಾರೆ. ಇಂಥ ಇನ್ನೆಷ್ಟು ಅವಘಡಗಳು ಸಂಭವಿಸಬೇಕು. ಇನ್ನೆಷ್ಟು ಜನರು ರಸ್ತೆಗಳ ಮೇಲೆಯೇ ಜೀವ ಕಳೆದುಕೊಳ್ಳಬೇಕು?. ಜುಲೈ 20ರಂದು ನಡೆದ ಈ ಭೀಕರ ಅಪಘಾತದಿಂದ ರಾಜ್ಯ ಸರಕಾರ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಕಣ್ತೆರೆಯಲೇಬೇಕು ಎಂದು ತಿಳಿಸಿದರು.
ಕೇವಲ ಆರೋಗ್ಯ ಸೌಲಭ್ಯ ಕಲ್ಪಿಸಿ ಸುಮ್ಮನಾದರೆ ಸಾಲದು. ಆರೋಗ್ಯ ಸೌಲಭ್ಯ ಕಲ್ಪಿಸುವುದರ ಜತೆಗೆ ಇರುವ ವೈದ್ಯಕೀಯ ವ್ಯವಸ್ಥೆಯ ಸಮರ್ಪಕ ನಿರ್ವಹಣೆ ಮಾಡುವುದು ಸರ್ಕಾರದ ಜವಾಬ್ದಾರಿಯ ಆಗಿರುತ್ತದೆ. ಅದನ್ನು ಸೂಕ್ತ ನಿರ್ವಹಿಸಬೇಕು. ಆರೋಗ್ಯ ವ್ಯವಸ್ಥೆ ಕೊರತೆ ಇರುವ ಕಡೆ ಸಮಸ್ಯೆಗಳ ಪರಿಹಾರದತ್ತ ಗಮನ ಹರಿಸಬೇಕು.
ಆರೋಗ್ಯ ಎಲ್ಲರ ಹಕ್ಕು. ನಾನು ರೂಪಿಸಿರುವ ಪಂಚರತ್ನ ಕಾರ್ಯಕ್ರಮದಲ್ಲಿ ಆರೋಗ್ಯವೂ ಪ್ರಮುಖ ಕಾರ್ಯಕ್ರಮ. ಜನತೆಗೆ ಅತ್ಯುತ್ತಮ ಆರೋಗ್ಯ ಸೌಲಭ್ಯ ಕೊಡುವುದು ನನ್ನ ಗುರಿ ಎಂದು ಕುಮಾರಸ್ವಾಮಿ ವಿವರಿಸಿದರು.
ಮುಕ್ತ ಮನಸ್ಸಿನಿಂದ ಸಮಸ್ಯೆ ಆಲಿಸಬೇಕು
ಇನ್ನು ಹೋರಾಟಕ್ಕೆ ಬೆಂಬಲಿಸಿರುವ ಮತ್ತೊಬ್ಬರಾದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಸುಸಜ್ಜಿತ ತುರ್ತು ಚಿಕಿತ್ಸಾ ವ್ಯವಸ್ಥೆಗೆ ಆಗ್ರಹಿಸಿ ಉತ್ತರ ಕನ್ನಡದ ಜನರು ನಡೆಸುತ್ತಿರುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ಅಹವಾಲನ್ನು ಮುಕ್ತ ಮನಸ್ಸಿನಿಂದ ಆಲಿಸಿ, ಸಮಸ್ಯೆ ಬಗೆಹರಿಸುವತ್ತ ಕಾರ್ಯಪ್ರವೃತ್ತವಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ರಕ್ತದಲ್ಲಿ ಪ್ರಧಾನಿಗೆ ಪತ್ರ
ಭೌಗೋಳಿಕವಾಗಿ ದೊಡ್ಡದಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದಾದರೂ ಸುಸಜ್ಜಿತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂಬ ಕೂಗು ದಿನೇ ದಿನೆ ಹೆಚ್ಚಾಗುತ್ತಿದೆ. ಕೆಲವು ಕಡೆಗಳಲ್ಲಿ ಕೇಳಿ ಬರುತ್ತಿದ್ದ ಬೇಡಿಕೆ ಇಂದು ಜಿಲ್ಲೆಯಾದ್ಯಂತ ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಆಂದೋಲನ ರೂಪ ಪಡೆಯುತ್ತಿದೆ. ಬೇಡಿಕೆಯ ಕೂಗು ಹೋರಾಟ ರೂಪ ಪಡೆದುಕೊಳ್ಳಲಿದ್ದು, ಆಗಸ್ಟ್ 1ರಿಂದ ಜಿಲ್ಲೆಯ ಜನರು ರಕ್ತದಲ್ಲಿ ಪತ್ರ ಬರೆಯುವ ಅಭಿಯಾನವನ್ನು ಆರಂಭಿಸಲಿದ್ದಾರೆ. ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆದು ಅಭಿಯಾನ ಶುರುಮಾಡಲು ಕಾರವಾರ ನಿವಾಸಿಗಳೂ ಸೇರಿದಂತೆ ಜಿಲ್ಲೆಯ ಜನರು ಮುಂದಾಗಿದ್ದಾರೆ.
Recommended Video