ಕೆಪಿಎಸ್ಸಿಗೆ ಒಂದು ಲಕ್ಷ ದಂಡ ವಿಧಿಸಿ ಮಾಹಿತಿ ಹಕ್ಕು ಆಯೋಗ ಆದೇಶ!
ಬೆಂಗಳೂರು, ಅ. 06: ಹಲವು ಅಕ್ರಮಗಳ ಆರೋಪಗಳಿಗೆ ಗುರಿಯಾಗಿರುವ ಕೆಪಿಎಸ್ಸಿ ಈಗ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದು, ಮಾಹಿತಿ ಹಕ್ಕು ಕಾಯ್ದೆ ಅನ್ವಯ ಮಾಹಿತಿ ಒದಗಿಸದ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಮಾಹಿತಿ ಹಕ್ಕು ಆಯೋಗ ಒಂದು ಲಕ್ಷ ರೂ. ದಂಡ ವಿಧಿಸಿ ಆದೇಶ ಮಾಡಿದೆ. ದಂಡದ ಹಣವನ್ನು ಮಾಹಿತಿ ಕೇಳಿರುವ ಅರ್ಜಿದಾರರಿಗೆ ನೀಡುವಂತೆ ಸೂಚಿಸಿದೆ.
ಸುಧನ್ವ ಭಂದೋಲ್ಕರ್ ಎನ್ನುವವರು 2015ರ ಕೆಪಿಎಸ್ಸಿ ಪ್ರೊಬೇಷನರಿ ಹುದ್ದೆಯ ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ನೀಡುವಂತೆ ಕೆಪಿಎಸ್ಸಿಗೆ ಮಾಹಿತಿ ಹಕ್ಕು ಕಾಯ್ದೆ ಅನ್ವಯ ಮನವಿ ಮಾಡಿಕೊಂಡಿದ್ದರೂ, ಕೆಪಿಎಸ್ಸಿ ಸೆಕ್ಸನ್ ಅಧಿಕಾರಿ ಶಶಿಕಲಾ ಅವರನ್ನು ಅಲೆದಾಡಿಸಿದ್ದಾರೆ. ಈ ಬಗ್ಗೆ ಸುಧನ್ವ ಭಂದೋಲ್ಕರ್ ಅವರು ಮಾಹಿತಿ ಹಕ್ಕು ಆಯೋಗಕ್ಕೆ ದೂರು ನೀಡಿದ್ದು, ಮಾಹಿತಿ ಹಕ್ಕು ಆಯೋಗ ಮಾಹಿತಿ ನಿರಾಕರಿಸುವುದಕ್ಕೆ ಶಶಿಕಲಾ ಅವರಿಗೆ 25 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿತ್ತು.
ಆದರೂ ಶಶಿಕಲಾ ಅವರು ಮಾಹಿತಿ ಹಕ್ಕು ಆಯೋಗದ ದಂಡವನ್ನು ಪರಿಗಣಿಸದೇ ಮಾಹಿತಿ ಹಕ್ಕು ಆಯೋಗಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೇ ನಿರ್ಲಕ್ಷ್ಯ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ನಿರ್ಲಕ್ಷ್ಯಕ್ಕೆ ಮಾಹಿತಿ ಹಕ್ಕು ಆಯುಕ್ತ ಕೆ.ಪಿ. ಮಂಜುನಾಥ್, ಕೆಪಿಎಸ್ಸಿಗೆ 1 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಈ ದಂಡದ ಮೊತ್ತವನ್ನು ಶಶಿಕಲಾ ಅವರ ಸಂಬಳದಿಂದ ಪ್ರತಿ ತಿಂಗಳು ಕಡಿತಗೊಳಿಸುವಂತೆ ನಿರ್ದೇಶನ ನೀಡಿದ್ದಾರೆ.
Recommended Video
ಅಲ್ಲದೇ ಮಾಹಿತಿ ಕೇಳಿದ್ದ ಸುಧನ್ವ ಅವರಿಗೆ ಅಗತ್ಯ ಮಾಹಿತಿಯನ್ನು ಒಂದು ತಿಂಗಳಲ್ಲಿ ಒದಗಿಸುವಂತೆ ಸೂಚನೆ ನೀಡಿದ್ದು, ಈ ಆದೇಶ ಪಾಲಿಸಲು ಕ್ರಮ ವಹಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರಿಗೆ ಮಾಹಿತಿ ಹಕ್ಕು ಆಯೋಗ ಸೂಚಿಸಿ, ಮುಂದಿನ ವಿಚಾರಣೆಯನ್ನು ಅಕ್ಟೋಬರ್ 19 ಕ್ಕೆ ಮುಂದೂಡಿದೆ.