ತೀವ್ರಗೊಂಡ ಸೋಂಕು: ಕ್ವಾರಂಟೈನ್ ನಿಯಮಾವಳಿ ಬದಲಿಸಿದ ರಾಜ್ಯ ಸರ್ಕಾರ
ಬೆಂಗಳೂರು, ಜೂ. 15: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕೊರೊನಾ ವೈರಸ್ ಸೋಂಕು ತೀವ್ರವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕ್ವಾರಂಟೈನ್ಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರ ಮತ್ತೆ ಬದಲಾಯಿಸಿದೆ. ಕೊರೊನಾ ವೈರಸ್ ತೀವ್ರವಾಗಿ ಹರಡಿರುವ ರಾಜ್ಯಗಳಿಂದ ಬರುವವರಿಗೆ ಕ್ವಾರಂಟೈನ್ ನಿಯಮಾವಳಿಯಲ್ಲಿ ಬದಲಾವಣೆ ಮಾಡಲಾಗಿದೆ. ಹೊಸ ಮಾರ್ಗಸೂಚಿಯಂತೆ ಕಡ್ಡಾಯವಾಗಿ ಕ್ವಾರಂಟೈನ್ ಅವಧಿಯನ್ನು ಮುಗಿಸಬೇಕೆಂದು ಎಂದು ಸರ್ಕಾರ ಸೂಚಿಸಿದೆ.
ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗೆ ಸೋಂಕು ಹೆಚ್ಚಾಗುವುದಕ್ಕೆ ಹೊರ ರಾಜ್ಯಗಳಿಂದ ಬಂದವರು ಕಾರಣರಾಗಿದ್ದಾರೆ. ಕ್ವಾರಂಟೈನ್ಗೆ ಒಳಗಾಗದವರಿಂದ ಸೋಂಕು ಹರಡುವುದು ಹೆಚ್ಚಾಗಿದೆ. ಹೀಗಾಗಿ ರಾಜ್ಯದಲ್ಲಿ ಕೊರೊನಾ ವೈರಸ್ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯುರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕ್ವಾರಂಟೈನ್ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಲಾಗಿದೆ. ಸೋಂಕು ತೀವ್ರವಾಗಿ ಹರಡಿರುವ ಹಾಗೂ ಸಮುದಾಯಕ್ಕೆ ಕೋವಿಡ್ ತಗುಲಿರುವ ಆತಂಕವಿರುವ ರಾಜ್ಯಗಳಿಂದ ಬರುವವರಿಗೆ ಇನ್ನುಮುಂದೆ ನೂತನ ಮಾರ್ಗಸೂಚಿ ಅನ್ವಯಯಾಗಲಿವೆ.
ರಾಜ್ಯಕ್ಕೆ ಬರುವವರಿಗೆ ಹೊಸ ಮಾರ್ಗಸೂಚಿ ಪ್ರಕಟಿಸಿದ ಕೇರಳ
ಮಹಾರಾಷ್ಟ್ರ ರಾಜ್ಯ
ಮಹಾರಾಷ್ಟ್ರದಿಂದ ಬಂದವರಲ್ಲಿ ಹೆಚ್ಚು ಕೋವಿಡ್ ಸೋಂಕು ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಆ ರಾಜ್ಯದಿಂದ ಬಂದವರನ್ನು ಮತ್ತೆ ಸಾಂಸ್ಥಿಕ ಕ್ವಾರಂಟೈನ್ಗೆ ಒಳಪಡಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಮಹಾರಾಷ್ಟ್ರ ರಾಜ್ಯದ ಯಾವುದೇ ಜಿಲ್ಲೆ ಅಥವಾ ಪ್ರದೇಶದಿಂದ ಬರುವವರಿಗೆ ಇನ್ನುಮುಂದೆ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಖಡ್ಡಾಯ. ಅದಾದ ಬಳಿಕೆ ಮತ್ತೆ 7 ದಿನಗಳ ಕಾಲ ಹೋಂ ಕ್ವಾರಂಟೈನ್ಗೆ ಒಳಪಡಲೇಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚಿಸಿದ್ದಾರೆ.
ಹೀಗಾಗಿ ಮಹಾರಾಷ್ಟ್ರದಿಂದ ಬರುವವರು ಇನ್ನುಮುಂದೆ 7+7 ರಂತೆ ಒಟ್ಟು 14 ದಿನಗಳ ಕ್ವಾರಂಟೈನ್ ಅವಧಿ ಪೂರೈಸಬೇಕು. ಅದೇ ರೀತಿ ಇನ್ನು ಎರಡು ರಾಜ್ಯಗಳ ಜನರು ಕೂಡ ಕ್ವಾರಂಟೈನ್ಗೆ ಒಳಗಾಗಬೇಕಿದೆ.
ದೆಹಲಿ, ತಮಿಳುನಾಡು
ಇನ್ನು ಚೆನ್ನೈ ಹಾಗೂ ದೆಹಲಿಗಳಿಂದ ರಾಜ್ಯಕ್ಕೆ ಬರುವವರು ಕೂಡ ಕ್ವಾರಂಟೈನ್ಗೆ ಒಳಗಾಗಬೇಕು . ತಮಿಳುನಾಡು, ದೆಹಲಿಯಿಂದ ಬರುವವರಿಗೆ ಮೊದಲ 3 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್ ಖಡ್ಡಾಯ. ನಂತರ ಮನೆಯಲಿದ್ದುಕೊಂಡು 11 ದಿನಗಳ ಕಾಲ ಕ್ವಾರಂಟೈನ್ಗೆ ಒಳಗಾಗಬೇಕು ಎಂಬ ಹೊಸ ಮಾರ್ಗಸೂಚಿಯನ್ನು ಸರ್ಕಾರ ಜಾರಿಗೆ ತಂದಿದೆ.
ಹೀಗಾಗಿ ಇನ್ನುಮುಂದೆ ಮಾಹಾರಾಷ್ಟ್ರ ಹಾಗೂ ತಮಿಳುನಾಡುಗಳಿಂದ ಬರುವವರು ಖಡ್ಡಾಯವಾಗಿ 3+11 ದಿನಗಳ ಕ್ವಾರಂಟೈನ್ಗೆ ಒಳಗಾಗಬೇಕು ಎಂದು ಸೂಚಿಸಲಾಗಿದೆ.
ಕೋರ್ಟ್ ಕಲಾಪಕ್ಕೆ ಹೊಸ ಮಾರ್ಗಸೂಚಿ ಪ್ರಕಟಿಸಿದ ಹೈಕೋರ್ಟ್
ಮಹಾರಾಷ್ಟ್ರದ ಸಂಪರ್ಕ
ರಾಜ್ಯದಲ್ಲಿ 7000 ಸಾವಿರಕ್ಕೂ ಅಧಿಕ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಅವುಗಳಲ್ಲಿ ಮಹಾರಾಷ್ಟ್ರ ರಾಜ್ಯದ ಸಂಪರ್ಕ ಇರುವವರೆ ಹೆಚ್ಚಾಗಿದ್ದಾರೆ. ಮಹಾರಾಷ್ಟ್ರದಿಂದ ಬಂದಿರುವ 4,386 ಜನರಲ್ಲಿ ಸೋಂಕು ದೃಢಪಟ್ಟಿದೆ. ಜೊತೆಗೆ ಅವರೊಂದಿಗೆ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ 1340 ಜನರಿಗೆ ಸೋಂಕು ತಗುಲಿದೆ.
ಹೀಗೆ ಒಟ್ಟಾರೆಯಾಗಿ 5,726 ಜನರಿಗೆ ಮಹಾರಾಷ್ಟ್ರ ರಾಜ್ಯದಿಂದ ಕೊರೊನಾ ವೈರಸ್ ಸೋಂಕು ತಗುಲಿದೆ.
ವಿದೇಶದಿಂದ ಬಂದವರು
ಜೊತೆಗೆ ವಂದೇ ಭಾರತ್ ಮಿಷನ್ ಯೋಜನೆಯಡಿ ವಿದೇಶಗಳಿಂದ ರಾಜ್ಯಕ್ಕೆ ಹಿಂದಿರುಗಿ ಬಂದಿರುವ 62 ಜನರಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ. ದೆಹಲಿಯಿಂದ ಬಂದಿದ್ದ 82, ತಮಿಳುನಾಡಿನಿಂದ ಬಂದಿರುವ 67, ಗುಜರಾತ್ ರಾಜ್ಯದಿಂದ ಬಂದಿರುವ 62 ಜನರಲ್ಲಿ ಸೋಂಕು ದೃಢ ಪಟ್ಟಿದೆ.
ಹೀಗಾಗಿ ಕೊರೊನಾ ವೈರಸ್ ಹಾಟ್ಸ್ಪಾಟ್ ಆಗಿರುವ ರಾಜ್ಯಗಳಿಂದ ಬರುವವರಿಗೆ ಖಡ್ಡಾಯ ಕ್ವಾರಂಟೈನ್ಗೆ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಮಹಾರಾಷ್ಟ್ರದಿಂದ ಬಂದವರಲ್ಲಿ ಜಾಸ್ತಿ ಲಕ್ಷಣಗಳಿರುವ ಕಾರಣ ಅವರಿಗೆ ಹೆಚ್ಚು ದಿನ ಕ್ವಾರಂಟೈನ್ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.