ಭೈರ, ಕೆಂಚಿ ಹುಡುಕಲು ಒಂದು ಲಕ್ಷ ಖರ್ಚು!
ಮಂಡ್ಯ, ನ. 21 : ಬೀದಿನಾಯಿಗಳಿಂದ ಜನರಿಗೆ ಅನುಕೂಲವಾಗುವುದಕ್ಕಿಂತ ಕೆಟ್ಟದ್ದಾಗುವುದೇ ಹೆಚ್ಚು. ಬೀದಿ ಬದಿಯಲ್ಲಿ ತಿಂದು ಮಲಗುವ ಈ ನಾಯಿಗಳು ಆಗಾಗ ಜನರಿಗೆ ಕಚ್ಚಿ ಅವರಿಗೆ ಆಸ್ಪತ್ರೆಯ ಹಾದಿ ತೋರಿಸುತ್ತವೆ. ಆದ್ದರಿಂದ ಜನರು ಅವುಗಳನ್ನು ದ್ವೇಷಿಸುವುದೇ ಹೆಚ್ಚು. ಆದರೆ, ಮಂಡ್ಯ ಜಲ್ಲೆಯ ಮದ್ದೂರು ಪಟ್ಟಣದಲ್ಲಿ ಒಂದು ಲಕ್ಷ ರೂ. ಖರ್ಚು ಮಾಡಿ ಕಳೆದು ಹೋಗಿದ್ದ ಎರಡು ಬೀದಿನಾಯಿಗಳನ್ನು ಜನರು ಹುಡುಕಿ ತಂದಿದ್ದಾರೆ.
ಮದ್ದೂರು ಪಟ್ಟಣದ ಕೋಟೆ ಬೀದಿಯಲ್ಲಿನ ಭೈರ ಮತ್ತು ಕೆಂಚಿ ಎನ್ನುವ ಎರಡು ಬೀದಿನಾಯಿಗಳನ್ನು ಪಟ್ಟಣ ಪಂಚಾಯಿತಿಯವರು ಹಿಡುದು ಕಾಡಿಗೆ ಬಿಟ್ಟು ಬಂದಿದ್ದರು. ಬೀದಿಯ ವ್ಯಾಪಾರಿಗಳು ತಂಡ ರಚಿಸಿಕೊಂಡು, ಕಾಡಿಗೆ ಹೋಗಿ ಭೈರ ಮತ್ತು ಕೆಂಚಿಯನ್ನು ಹಿಡಿದು ತಂದಿದ್ದಾರೆ. ನಾಯಿಗಳು ಮರಳಿ ಬೀದಿಗೆ ಬಂದಾಗ ವ್ಯಾಪಾರಿಗಳು ಪಟಾಕಿ ಹೊಡೆದು, ಸಿಹಿ ಹಂಚಿ ಸಂಭ್ರಮ ಪಟ್ಟಿದ್ದಾರೆ.
ಹಲವು ವರ್ಷಗಳಿಂದ ಭೈರ ಮತ್ತು ಕೆಂಚಿ ನಾಯಿಗಳು ಕೋಟೆ ಬೀದಿಯಲ್ಲಿ ಇವೆ. ಈ ಬೀದಿಯಲ್ಲಿ ವ್ಯಾಪಾರ ಮಾಡುವ ಜನರಿಗೆ ಇವನ್ನು ಕಂಡರೆ ವಿಶೇಷ ಪ್ರೀತಿ. ಆದರೆ, ಪಟ್ಟಣದಲ್ಲಿ ಬೀದಿ ನಾಯಿ ಹಾವಳಿ ನಿಯಂತ್ರಣಕ್ಕೆ ಮುಂದಾದ ಪಟ್ಟಣ ಪಂಚಾಯಿತಿ ಉಳಿದ ನಾಯಿಗಳೊಂದಿಗೆ ಭೈರ ಮತ್ತು ಕೆಂಚಿಯನ್ನು ಹಿಡಿದು 20 ದಿನಗಳ ಹಿಂದೆ ಕಾಡಿಗೆ ಬಿಟ್ಟು ಬಂದಿದ್ದರು. ನಾಯಿಗಳು ಬೀದಿಯಲ್ಲಿ ಇಲ್ಲದ್ದು ಕಂಡು ವ್ಯಾಪಾರಿಗಳು ಆತಂಕಗೊಂಡಿದ್ದಾರೆ.
ಎರಡು ದಿನಗಳು ಕಾದರೂ ಅವುಗಳ ಸುಳಿವು ಸಿಗಲಿಲ್ಲ. ಆದ್ದರಿಂದ ವ್ಯಾಪಾರಿಗಳು ಎಲ್ಲಾ ಅಂಗಡಿಗಳಿಂದ ನಾಯಿಗಳನ್ನು ಹಿಡಿಯಲು ಹಣ ಸಂಗ್ರಹಿಸಿದ್ದಾರೆ. ಒಟ್ಟು 1 ಲಕ್ಷ ರೂ. ಸಂಗ್ರಹಿಸಿದ ಜನರು, ಭೈರ ಮತ್ತು ಕೆಂಚಿಯನ್ನು ಹಿಡುದು ತಂದವರಿಗೆ 25,000 ಬಹುಮಾನವನ್ನು ಘೋಷಿಸಿದ್ದರು.
ಬೀದಿಯ ವ್ಯಾಪಾರಿಗಳಾದ ನಜೀರ್, ರಾಮಚಂದ್ರ, ಬಾಲು, ಸೋಮು ಮತ್ತು ಕುಮಾರ್ ಎನ್ನುವವರು ಭೈರ ಮತ್ತು ಕೆಂಚಿಯ ಫೋಟೋ ಹಿಡಿದು ಸತತ ಐದು ದಿನಗಳಕಾಲ ಅವುಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಬುಧವಾರ ಎರಡೂ ನಾಯಿಗಳು ಪತ್ತೆಯಾಗಿವೆ, ಕಾಡಿನಿಂದ ಮರಳಿದ ನಾಯಿಗಳಿ ಬೀದಿಯಲ್ಲಿ ಅದ್ದೂರಿ ಸ್ವಾಗತವೇ ದೊರಕಿದೆ.
ವ್ಯಾಪಾರಿಗಳು ಪಟಾಕಿ ಹೊಡೆದು, ಸಿಹಿ ಹಂಚಿ ಭೈರ ಮತ್ತು ಕೆಂಚಿ ಆಗಮನದ ಸಂತಸವನ್ನು ಹಂಚಿಕೊಂಡರು. ಘೋಷಣೆ ಮಾಡಿದಂತೆ, ಐದು ಯುವಕರಿಗೂ ಐದು ಸಾವಿರ ರೂ.ಗಳನ್ನು ಬಹುಮಾನವಾಗಿ ನೀಡಿದ್ದಾರೆ. ಬೀದಿನಾಯಿಯ ಮೇಲೆ ಇವರಿಗೆ ಅದೆಂತಹ ಪ್ರೀತಿಯೋ?