ಗೋಕರ್ಣದ ವಿಜ್ಞಾನಿಗೆ ಅಂತಾರಾಷ್ಟ್ರೀಯ ಸಮ್ಮಾನ!
ಕಾರವಾರ, ಸೆಪ್ಟೆಂಬರ್ 29 : ವಿಶ್ವದ ಖ್ಯಾತ ಕ್ಯಾನ್ಸರ್ ಸಂಶೋಧನಾ ವಿಜ್ಞಾನಿಗಳಲ್ಲಿ ಪ್ರಮುಖರಾದ, ಮೂಲತಃ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದವರಾದ ಡಾ. ನಾರಾಯಣ ಸದಾಶಿವ ಭಟ್ಟ ಅವರು ಅಂತಾರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಳೆದ 40 ವರ್ಷಗಳಿಗಿಂತಲೂ ಹೆಚ್ಚಿನ ಸಮಯದಿಂದ ಅಮೆರಿಕಾದಲ್ಲಿ ನೆಲೆಸಿರುವ ಡಾ.ನಾರಾಯಣ ಸದಾಶಿವ ಭಟ್ಟ ಹೊಸ್ಮನೆ ಅವರಿಗೆ 2017ನೇ ಸಾಲಿನ ಪ್ರತಿಷ್ಠಿತ ಅಂತಾರಾಷ್ಟ್ರೀಯ ಮಹಾತ್ಮಾ ಗಾಂಧಿ ಪ್ರವಾಸಿ ಸಮ್ಮಾನ ಪ್ರಶಸ್ತಿಗೆ ಲಭಿಸಿದೆ. ಅವರಿಗೆ ಅಭಿನಂದನೆಗಳು.
ಸೆ. 27ರ ರಾತ್ರಿ ಲಂಡನ್ನ ಹೌಸ್ ಆಫ್ ಲಾರ್ಡ್ಸ್ ನಲ್ಲಿ ನಡೆದ ವಿಶ್ವ ಭಾರತೀಯ ಸಮ್ಮೇಳನದಲ್ಲಿ (ಗ್ಲೋಬಲ್ ಇಂಡಿಯನ್ ಸಮಿಟ್) ಡಾ. ನಾರಾಯಣ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕನ್ನಡಿಗ ಡಾ.ವಿಶಾಲ್ರಾವ್ ಅವರಿಗೆ ಪ್ರತಿಷ್ಠಿತ ವಿಲ್ಕೆನ್ಫೆಲ್ಡ್ ಪ್ರಶಸ್ತಿ
ಅವರು ಸದ್ಯ ಉತ್ತರ ಅಮೆರಿಕಾದ ಇಲಿನಾಯ್ ವಿಶ್ವ ವಿದ್ಯಾಲಯದಲ್ಲಿ ಜೀವ ರಸಾಯನ ವಿಜ್ಞಾನದ ಸಂಶೋಧನಾ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದು, ವಿಶ್ವದ ಅಗ್ರಗಣ್ಯ ಕ್ಯಾನ್ಸರ್ ಸಂಶೋಧನಾ ವಿಜ್ಞಾನಿ ಎಂಬ ಗೌರವಕ್ಕೆ ಕೂಡ ಪಾತ್ರರಾಗಿದ್ದಾರೆ.
ವಿಶ್ವ ಮಟ್ಟದಲ್ಲಿ ಕ್ಯಾನ್ಸರ್ ಕುರಿತು ನೂರಕ್ಕೂ ಅಧಿಕ ಸಂಶೋಧನಾ ವರದಿಗಳನ್ನು ಡಾ.ಹೊಸ್ಮನೆ ಪ್ರಕಟಿಸಿದ್ದಾರೆ. ಹಲವಾರು ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಅವರು ಪಡೆದಿದ್ದು, ವಿಶ್ವದ ಹಾಲಿ ಸಂಶೋಧಕ ವಿಜ್ಞಾನಿಗಳ (ಹೂ ಈಸ್ ಹೂ ಇನ್ ದಿ ವರ್ಡ್ಲ್) ಪಟ್ಟಿಯಲ್ಲಿ ಅವರ ಹೆಸರು ದಾಖಲಿಸಲ್ಪಟ್ಟಿದೆ.
ಗೋಕರ್ಣದ ವೈದಿಕ ಕುಟುಂಬದಲ್ಲಿ ಹುಟ್ಟಿದ ಇವರು, ಅತ್ಯಂತ ಬಡತನದಲ್ಲಿ ಗೋಕರ್ಣದ ಭದ್ರಕಾಳಿ ಪ್ರೌಢ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. ನಂತರ ಧಾರವಾಡದ ಕರ್ನಾಟಕ ವಿ.ವಿ.ಯಲ್ಲಿ ಬಂಗಾರದ ಪದಕದೊಂದಿಗೆ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು. ಆ ನಂತರ ಸ್ಕಾಟ್ಲೆಂಡಿನ ಎಡಿನ್ಬರ್ಗ್ ವಿಶ್ವವಿದ್ಯಾಲಯದಲ್ಲಿ ಬಯೋಕೆಮಿಸ್ಟ್ರಿಯಲ್ಲಿ ಡಾಕ್ಟರೇಟ್ ಪಡೆದವರಾಗಿದ್ದಾರೆ.