BTS2020: ಭರವಸೆ ಮೂಡಿಸಿದ ಕೊರೊನಾ ಲಸಿಕೆ!
ಬೆಂಗಳೂರು, ನ. 22: ಕೊರೊನಾ ವೈರಸ್ ಸೋಂಕಿಗೆ ಪರಿಣಾಮಕಾರಿ ಲಸಿಕೆ ಕಂಡುಹಿಡಿಯುವ ದಿಸೆಯಲ್ಲಿ ಸಂಶೋಧನಾ ಸಂಸ್ಥೆಗಳಿಗೆ ಔಷಧ ತಯಾರಿಕಾ ಕಂಪನಿಗಳ ಸಹಕಾರ ಅಗತ್ಯ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಪ್ರೊ. ರಾಘವನ್ ವರದರಾಜನ್ ಅಭಿಪ್ರಾಯಪಟ್ಟಿದ್ದಾರೆ.
ಸಮ್ಮೇಳನದ ಮೂರನೇ ದಿನವಾದ ಶನಿವಾರ ಕೋವಿಡ್ ಲಸಿಕೆ ಕುರಿತ ವಿಚಾರ ಗೋಷ್ಠಿಯಲ್ಲಿ ಅಭಿಪ್ರಾಯಗಳನ್ನು ಹಂಚಿಕೊಂಡ ಅವರು, ಕೊರೊನಾಕ್ಕೆ ಸಂಬಂಧಪಟ್ಟಂತೆ ಕೆಲವು ಕಂಪನಿಗಳ ಲಸಿಕೆಗಳು ದೊಡ್ಡ ಮಟ್ಟದಲ್ಲಿ ಭರವಸೆ ಮೂಡಿಸಿವೆ; ಆದರೂ ಸಾರ್ವಜನಿಕ ಬಳಕೆಗೆ ಯಾವಾಗ ಲಭ್ಯವಾಗಲಿದೆ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಮೂಡಿಲ್ಲ. ಈ ನಿಟ್ಟಿನಲ್ಲಿ ಸಂಶೋಧನೆಗಳು ಮುಂದುವರಿದಿವೆ, ಐಐಎಸ್ಸಿ, ಏಮ್ಸ್ ನಂತಹ ಸಂಶೋಧನಾ ಸಂಸ್ಥೆಗಳಿಗೆ ಔಷಧ ತಯಾರಿಕಾ ಕಂಪನಿಗಳು ಸಹಕಾರ ನೀಡುವುದು ಅಗತ್ಯ ಎಂದರು.
ಭಾರತ; 24 ಗಂಟೆಯಲ್ಲಿ 45,209 ಹೊಸ ಕೋವಿಡ್ ಪ್ರಕರಣ
ಯಾವುದೇ ಒಂದು ಸಾಂಕ್ರಾಮಿಕ ಕಾಯಿಲೆಗೆ ಲಸಿಕೆ ಕಂಡುಹಿಡಿಯಬೇಕೆಂದರೆ ಹಲವು ವರ್ಷಗಳೇ ಬೇಕಾಗುತ್ತದೆ. ಮಾನವನ ಜೈವಿಕ ವ್ಯವಸ್ಥೆ ಮೇಲೆ ಲಸಿಕೆ ಅಡ್ಡ ಪರಿಣಾಮ ಬೀರುವುದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ನಾನಾ ಹಂತದಲ್ಲಿ ಪ್ರಯೋಗಗಳನ್ನು ನಡೆಸಬೇಕಾಗುತ್ತದೆ. ಆದರೆ ಕೋವಿಡ್ ವಿಚಾರಕ್ಕೆ ಬಂದರೆ ಸಂಶೋಧನೆಗಳು ತ್ವರಿತಗತಿಯಲ್ಲಿ ಸಾಗಿವೆ. ಔಷಧ ತಯಾರಿಕಾ ಕಂಪನಿಗಳ ಸಹಭಾಗಿತ್ವದಲ್ಲಿ ಸಂಶೋಧನೆಗಳು ನಡೆದರೆ ಲಸಿಕೆ ಅಭಿವೃದ್ಧಿ ಹಾಗೂ ಉತ್ಪಾದನೆ ಸುಲಭವಾಗಲಿದೆ ಎಂದು ರಾಘವನ್ ವರದರಾಜನ್ ಹೇಳಿದರು.
ಹೆಪಟೈಟಿಸ್-ಬಿ ಗೆ ಲಸಿಕೆ ಅಭಿವೃದ್ಧಿಗೆ ಕಾರಣವಾಗಿದ್ದೇ ಐಐಎಸ್ಸಿ ಸಂಶೋಧನೆ. ಅದೇ ರೀತಿ ರೀಟಾ ವೈರಸ್ ಗೆ ಸಹ ಲಸಿಕೆ ಕಂಡುಹಿಡಿಯಲು ನೆರವಾಗಿದ್ದು ಏಮ್ಸ್ನ ಸಂಶೋಧನೆ. ಈಗ ಕೊರೊನಾ ವೈರಸ್ಗೆ ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್, ಆಕ್ಸ್ಫರ್ಡ್ ವಿವಿ ಮತ್ತು ಆಸ್ಟ್ರಾಜೆನಿಕಾ ಕಂಪನಿ ಜಂಟಿಯಾಗಿ ಅಭಿವೃದ್ಧಿ ಪಡಿಸುತ್ತಿರುವ ಲಸಿಕೆಗಳು ಭರವಸೆ ಮೂಡಿಸಿವೆ ಎಂದು ಬಿಲ್ ಅಂಡ್ ಮಿಲಿಂದಾ ಪ್ರತಿಷ್ಠಾನದ ಹಿರಿಯ ಸಲಹೆಗಾರ ಡಾ. ಹರೀಶ್ ಅಯ್ಯರ್ ಹೇಳಿದರು.
ಕೋವಿಡ್ ಲಸಿಕೆ ಪೂರ್ತಿ ಸಿದ್ಧಗೊಂಡಾಗ ಅದರ ಸಂಗ್ರಹ, ಸಾಗಣೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಅದನ್ನು ಹಾಕುವ ವಿಚಾರದಲ್ಲಿ ಸಾಕಷ್ಟು ಸವಾಲುಗಳು ಎದುರಾಗಲಿವೆ ಎಂದು ಅವರು ಅಭಿಪ್ರಾಯಪಟ್ಟರು.
Recommended Video
ಎಮೋರಿ ವ್ಯಾಕ್ಸಿನ್ ಸೆಂಟರ್ನ ಪ್ರೊಫೆಸರ್ ಡಾ. ರಾಮರಾವ್ ಅಮಾರಾ ಹಾಗೂ ಎಸ್. ಕೃಷ್ಣಾ ಲ್ಯಾಬ್ನಕ್, ಡಾ. ಅರುಣ್ ಶಂಕರದಾಸ್ ಅವರು ಡೆಂಗೆ ಹಾಗೂ ಕೋವಿಡ್ ಲಸಿಕೆ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡರು.