ಶಾಲೆಗಳಲ್ಲಿ ವಿದ್ಯಾರ್ಥಿಗಳಿಗಾಗಿ ವಿಪತ್ತು ನಿರ್ವಹಣಾ ಸಮಿತಿ ರಚನೆ
ಬೆಂಗಳೂರು, ಜೂನ್ 15: ಅತಿವೃಷ್ಟಿ ಅನಾವೃಷ್ಟಿ ಉಂಟಾದಾಗ ಕೂಡಲೇ ವಿದ್ಯಾರ್ಥಿಗಳ ನೆರವಿಗೆ ತೆರಳಲು ವಿಪತ್ತು ನಿರ್ವಹಣಾ ಸಮಿತಿ ರಚಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಈ ಸಮಿತಿಗಳಿಗೆ ಜಿಲ್ಲಾ ಹಂತದಲ್ಲಿ ಜಿಲ್ಲಾಧಿಕಾರಿ ಹಾಗೂ ಶಾಲಾ ಹಂತದಲ್ಲಿ ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ ಅಧ್ಯಕ್ಷರು ಉಸ್ತುವಾರಿ ವಹಿಸುತ್ತಾರೆ.
ಮಕ್ಕಳು ಶಾಲೆಯಲ್ಲಿ 8-10 ಗಂಟೆ ಕಳೆಯುತ್ತಾರೆ, ಇವರ ಸುರಕ್ಷತೆ ಬಹಳ ಮುಖ್ಯವಾದದ್ದು, ಬಹುತೇಕ ಸರ್ಕಾರಿ ಶಾಲೆಗಳು ಹಳೆಯ ಹಾಗೂ ಶಿಥಿಲ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ, ಅಪಾಯಕ್ಕೆ ಸಿಲುಕುವ ವಿದ್ಯಾರ್ಥಿಗಳಿಗೆ ಅಗತ್ಯ ಕ್ರಮಗಳಿಲ್ಲ, ವಿದ್ಯಾರ್ಥಿಗಳ ಮೇಲೆ ನಡೆಯುವ ನಾನಾ ರೀತಿಯ ದೌರ್ಜನ್ಯ ಪ್ರಕರಣಗಳಿಗೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಇಂತಹ ಸಮಸ್ಯೆಗಳಿಂದ ವಿದ್ಯಾರ್ಥಿಗಳನ್ನು ಪಾರು ಮಾಡುವ ಸಲುವಾಗಿ ಶಾಲೆಗಳಲ್ಲಿ ವಿಪತ್ತು ನಿರ್ವಹಣಾ ಸಮಿತಿ ರಚನೆಗೆ ಇಲಾಖೆ ಮುಂದಾಗಿದೆ.
ಕೊಪ್ಪಳ: ಮಳೆ ನೀರಲ್ಲಿ ಮುಳುಗಿದ ಶಾಲೆ, ಸಿಡಿದೆದ್ದ ಗ್ರಾಮಸ್ಥರು
ಸಮಿತಿ ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ವಿಪತ್ತುಗಳಿಂದ ರಕ್ಷಣೆಗೆ ಸಂಬಂಧಿಸಿದಂತೆ ಸೂಕ್ತ ಯೋಜನೆಯನ್ನು ರೂಪಿಸಬೇಕು. ಶಾಲಾ ಕಟ್ಟಡ, ಕಾಂಪೌಂಡ್, ಆಟದ ಮೈದಾನ, ಕುಡಿಯುವ ನೀಡು, ಸಮರ್ಪಕ ವಿದ್ಯುತ್ ವ್ಯವಸ್ಥೆ, ಕುರ್ಚಿ, ಮೇಜು ಸೇರಿದಂತೆ ಇತರೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು.
ಪ್ರತಿ ಶಾಲೆಯಲ್ಲಿ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಹಾಗೂ ಔಷಧಗಳನ್ನು ಕಡ್ಡಾಯವಾಗಿ ಇಡಬೇಕು. ವಿದ್ಯಾರ್ಥಿಗಳಿಗೆ ತುರ್ತು ಆರೋಗ್ಯ ಸೇವೆಗಾಗಿ ಹತ್ತಿರದ ಆಸ್ಪತ್ರೆ, ವೈದ್ಯರು ಹಾಗೂ ಆಂಬ್ಯುಲೆನ್ಸ್ಗಳ ಸೂರವಾಣಿ ಸಂಖ್ಯೆಗಳನ್ನು ಹೊಂದಲಾಗಿದೆಯೇ ಎಂಬುದನ್ನು ಪರೀಕ್ಷಿಸಬೇಕು. ಜತೆಗೆ ಪ್ರತಿ ಶಾಲೆಯ 100 ಮೀಟರ್ ಅಂತರದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮಾಡದಂತೆ ಬೋರ್ಡ್ ಅಳವಡಿಸಲು ಕ್ರಮ ವಹಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಿದೆ.