ಬಿಜೆಪಿ ಮುಖಂಡರಿಗೆ ಅಮಿತ್ ಶಾ ಕೊಟ್ಟ ಟಾಸ್ಕ್ ಏನೂ ಗೊತ್ತಾ?
ಬೆಂಗಳೂರು, ಜ. 25: ನಾಳೆ ಗಣರಾಜ್ಯೋತ್ಸವದ ದಿನದಂದು ಮಾಡಲು ಬಿಜೆಪಿ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಶೇಷ ಟಾಸ್ಕ್ ಕೊಟ್ಟಿದ್ದಾರೆ. ರಾಜ್ಯದಲ್ಲಿ ಎನ್ಆರ್ಸಿ ಹಾಗೂ ಸಿಎಎ ಪರ ಬಿಜೆಪಿ ಅಭಿಯಾನ ಹಿನ್ನೆಲೆಯಲ್ಲಿ ಖಡ್ಡಾಯವಾಗಿ ಮಾಡಲು ಕೆಲಸವೊಂದನ್ನು ವಹಿಸಿದ್ದು ಅದಕ್ಕೆ ಸೆಲ್ಫಿ ಮೂಲಕ ಸಾಕ್ಷಿ ಕೊಡಲು ನಿರ್ದೇಶನ ಕೊಟ್ಟಿದ್ದಾರೆ. ಹೌದು ನಾಳೆ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ತ್ರಿವರ್ಣ ಧ್ವಜದೊಂದಿಗೆ ಸೆಲ್ಫಿ ತೆಗೆದುಕೊಳ್ಳಬೇಕು.
ಸೆಲ್ಫಿಯನ್ನು ವಾಟ್ಸಪ್, ಫೇಸ್ ಬುಕ್, ಟ್ವಿಟರ್ ನಲ್ಲಿ ಹಂಚಿಕೊಳ್ಳಬೇಕು. ಸೆಲ್ಫಿ ವಿತ್ ತಿರಂಗ ಎಂಬ ಹ್ಯಾಶ್ ಟ್ಯಾಗ್ ಮೂಲಕವೇ ಹಂಚಿಕೊಳ್ಳಬೇಕು. ಬೂತ್ ಮಟ್ಟದಲ್ಲಿ ರಾಷ್ಟ್ರಧ್ವಜ ಹಾರಿಸಿ, ಬೂತ್ ಅಧ್ಯಕ್ಷರು ಪ್ರಧಾನಿ ಮತ್ತು ಕೇಂದ್ರ ಗೃಹಸಚಿವರಿಗೆ ಅಭಿನಂದನೆ ಸಲ್ಲಿಸಬೇಕು ಎಂದು ಕೇಂದ್ರದಿಂದ ರಾಜ್ಯಕ್ಕೆ ಸೂಚನೆ ಬಂದಿದೆ ಎಂಬ ಮಾಹಿತಿಯಿದೆ.
ರಾಜ್ಯದ 58 ಸಾವಿರ ಬೂತ್ ಗಳಲ್ಲಿ ಈ ಕಾರ್ಯ ನಡೆಯಬೇಕು. ನಂತರ ಕನಿಷ್ಠ 15 ಮನೆಗೆ ಭೇಟಿ ನೀಡಿ 'ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು' ಎಂಬ ಪುಸ್ತಕವನ್ನು ತಲುಪಿಸಬೇಕು. ಮಂಡಲ ಮಟ್ಟದಲ್ಲಿ ಕಾರ್ಯಕರ್ತರು ತ್ರಿವರ್ಣ ಧ್ವಜದೊಂದಿಗೆ ಬೈಕ್ಗಳಲ್ಲಿ ಓಡಾಡಬೇಕು. ಎನ್ಆರ್ಸಿ ಹಾಗೂ ಸಿಎಎ ಪರವಾಗಿ ಬಿಜೆಪಿಯ ಮೂರನೇ ಹಂತದ ಅಭಿಯಾನ ನಾಳೆ ಕೊನೆಯಾಗಲಿದೆ. ಈ ಸಂದರ್ಭದಲ್ಲಿ ಮಹತ್ವದ ಸೂಚನೆ ಹೈಕಮಾಂಡ್ನಿಂದ ಬಂದಿದೆ ಎನ್ನಲಾಗಿದೆ.