ಸಂಪುಟ ವಿಸ್ತರಣೆಗೆ ಒಪ್ಪಿಗೆ?: ಅಮಿತ್ ಶಾ ಪಟ್ಟಿಯಲ್ಲಿ 'ಅರ್ಹ' ಶಾಸಕರಿಗೆ ಆಘಾತ?
ಬೆಂಗಳೂರು, ಜನವರಿ 18: ಸುದೀರ್ಘ ಕಾಲದಿಂದ ಕಗ್ಗಂಟಾಗಿ ಉಳಿದಿರುವ ಸಂಪುಟ ವಿಸ್ತರಣೆಗೆ ಶನಿವಾರ ಮುಕ್ತಿ ಸಿಗಲಿದೆಯೇ ಎಂಬ ಕುತೂಹಲ ಮೂಡಿದೆ. ಉಪ ಚುನಾವಣೆಯಲ್ಲಿ ಗೆದ್ದು ಅರ್ಹರಾದ ಎಲ್ಲ 11 ಶಾಸಕರಿಗೂ ಸಚಿವ ಸ್ಥಾನ ನೀಡಬೇಕು ಎಂಬ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬೇಡಿಕೆ ಈಡೇರುವುದು ಅನುಮಾನ ಎನ್ನಲಾಗಿದೆ. ಆದರೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸ್ವತಃ ಪಟ್ಟಿ ಸಿದ್ಧಪಡಿಸಿದ್ದು, ಅದರ ಅನ್ವಯವೇ ಸಂಪುಟ ವಿಸ್ತರಣೆ ಆಗಲಿದೆ ಎಂದು ಹೇಳಲಾಗುತ್ತಿದೆ.
ಬಿಜೆಪಿ ಸರ್ಕಾರ ರಚನೆಯಾಗಲು ನೆರವಾದ ಎಲ್ಲ 'ಅರ್ಹ' ಶಾಸಕರಿಗೂ ಸಚಿವ ಸ್ಥಾನ ನೀಡುವ ಮೂಲಕ ಮಾತು ಉಳಿಸಿಕೊಳ್ಳುವ ಪ್ರಯತ್ನಕ್ಕೆ ಅಮಿತ್ ಶಾ ತಣ್ಣೀರೆರಚಲಿದ್ದಾರೆ. ಒಂಬತ್ತು ಶಾಸಕರಿಗೆ ಮಾತ್ರ ಸಚಿವ ಸ್ಥಾನ ನೀಡಲು ಅಮಿತ್ ಶಾ ಹೆಸರು ಸಿದ್ಧಪಡಿಸಿದ್ದಾರೆ. ಈ ಬಗ್ಗೆ ಅಮಿತ್ ಶಾ ಮತ್ತು ಯಡಿಯೂರಪ್ಪ ನಡುವೆ ಚರ್ಚೆ ನಡೆಯುವ ಸಾಧ್ಯತೆ ಇದೆ.
ಸಚಿವ ಸ್ಥಾನಕ್ಕೆ ಪಟ್ಟು: ಸಿಎಂ ಮನೆ ಮುಂದೆ ಆಕಾಂಕ್ಷಿಗಳ ಪರೇಡ್
ಅಮಿತ್ ಶಾ ನೀಡಿರುವ ಪಟ್ಟಿಯಲ್ಲಿ ಸಮ್ಮಿಶ್ರ ಸರ್ಕಾರ ಉರುಳಿ, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾದ 17 ಶಾಸಕರಲ್ಲಿ ಏಳು ಮಂದಿಗೆ ಮಾತ್ರ ಸಚಿವ ಸ್ಥಾನ ಸಿಗಲಿದೆ. ಇನ್ನು ಮೂಲ ಬಿಜೆಪಿಯ ಇಬ್ಬರು ಶಾಸಕರಿಗೆ ಸಂಪುಟ ಸೇರುವ ಅವಕಾಶ ಲಭ್ಯವಾಗಲಿದೆ. ಈ ನಡುವೆ ಎಲ್ಲ 11 ಅರ್ಹ ಶಾಸಕರನ್ನು ಒಳಗೊಂಡಂತೆ ಯಡಿಯೂರಪ್ಪ 12 ಶಾಸಕರ ಪಟ್ಟಿಯನ್ನು ಅಮಿತ್ ಶಾ ಗೆ ನೀಡಿದ್ದಾರೆ ಎನ್ನಲಾಗಿದೆ.
ಭಾನುವಾರವೇ ಪ್ರಮಾಣವಚನ?
ಅಮಿತ್ ಶಾ ಸಿದ್ಧಪಡಿಸಿರುವ ಪಟ್ಟಿಗೆ ಯಡಿಯೂರಪ್ಪ ಕೂಡ ಒಪ್ಪಿಕೊಂಡು ಮುಂದುವರಿದರೆ ಭಾನುವಾರ ಬೆಳಿಗ್ಗೆಯೇ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎನ್ನಲಾಗಿದೆ. ಯಡಿಯೂರಪ್ಪ ಅವರು ಈ ಪಟ್ಟಿಗೆ ಒಪ್ಪಿಗೆ ನೀಡದೆ ಇನ್ನಷ್ಟು ಚರ್ಚೆ ಬಯಸಿದರೆ ಸಂಪುಟ ವಿಸ್ತರಣೆಯು ಫೆಬ್ರವರಿ ತಿಂಗಳಿಗೆ ಮುಂದೂಡುವ ಸಾಧ್ಯತೆ ಇದೆ.
ಅಮಿತ್ ಶಾ ಪಟ್ಟಿಯಲ್ಲಿ ಯಾರಿದ್ದಾರೆ?
ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಚಿಕ್ಕಬಳ್ಳಾಪುರ ಶಾಸಕ ಕೆ ಸುಧಾಕರ್, ಯಲ್ಲಾಪುರ ಶಾಸಕರ ಶಿವರಾಂ ಹೆಬ್ಬಾರ್, ಮಹಾಲಕ್ಷ್ಮಿ ಲೇಔಟ್ ಶಾಸಕ ಕೆ. ಗೋಪಾಲಯ್ಯ, ಹಿರೇಕೆರೂರು ಶಾಸಕ ಬಿಸಿ ಪಾಟೀಲ್, ಕೆಆರ್ ಪುರಂ ಶಾಸಕ ಬೈರತಿ ಬಸವರಾಜ್, ಕೆಆರ್ ಪೇಟೆ ಶಾಸಕ ಕೆ.ಸಿ. ನಾರಾಯಣ ಗೌಡ ಅವರ ಹೆಸರನ್ನು ಅಮಿತ್ ಶಾ ಅಂತಿಮಗೊಳಿಸಿದ್ದಾರೆ.
ಕೊನೆಯ ಕಸರತ್ತು: ಸಿಎಂ ಭೇಟಿ ಬಳಿಕ ತ್ಯಾಗದ ಬಗ್ಗೆ ಎಂಟಿಬಿ ಮಾತು
ಮೂಲ ಬಿಜೆಪಿಯ ಇಬ್ಬರಿಗೆ ಸ್ಥಾನ
ಸರ್ಕಾರ ಅಸ್ತಿತ್ವಕ್ಕೆ ಬಂದ ಆರಂಭದಲ್ಲಿ ಸಂಪುಟ ರಚನೆಯಾದಾಗ ತಮಗೆ ಸಚಿವ ಸ್ಥಾನ ಸಿಗದಿರುವುದಕ್ಕೆ ಅಸಮಾಧಾನ ವ್ಯಕ್ತಡಿಸುತ್ತಲೇ ಇದ್ದ ಹುಕ್ಕೇರಿ ಶಾಸಕ ಉಮೇಶ್ ಕತ್ತಿ, ಪಕ್ಷದ ನಾಯಕರ ಮೇಲೆ ನಿರಂತರ ಒತ್ತಡ ಹೇರಿದ್ದರು. ಹೀಗಾಗಿ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡಲು ಅಮಿತ್ ಶಾ ಮುಂದಾಗಿದ್ದಾರೆ ಎನ್ನಲಾಗಿದೆ. ಜತೆಗೆ ಬಿಜೆಪಿ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಪ್ರಬಲವಾಗಿ ಕೇಳಿಬಂದಿದ್ದ ಅರವಿಂದ ಲಿಂಬಾವಳಿ ಹೆಸರನ್ನು ಕೂಡ ಅಮಿತ್ ಶಾ ಸಂಪುಟದ ಪಟ್ಟಿಯಲ್ಲಿ ಸೇರಿಸಿದ್ದಾರೆ.
ನಾಲ್ವರು ಶಾಸಕರಿಗಿಲ್ಲ ಸಚಿವ ಸ್ಥಾನ?
ಆದರೆ ಸಂಪುಟ ವಿಸ್ತರಣೆಯ ಸಂಭ್ರಮ ಎಲ್ಲ 'ಅರ್ಹ' ಶಾಸಕರಿಗೂ ಸಿಗುವುದು ಅನುಮಾನ. ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್, ಅಥಣಿ ಶಾಸಕ ಮಹೇಶ್ ಕುಮಟಳ್ಳಿ, ಯಶವಂತಪುರ ಶಾಸಕ ಎಸ್ಟಿ ಸೋಮಶೇಖರ್ ಮತ್ತು ವಿಜಯನಗರ ಶಾಸಕ ಆನಂದ್ ಸಿಂಗ್ ಅವರಿಗೆ ಅಮಿತ್ ಶಾ ಪಟ್ಟಿ ಆಘಾತ ನೀಡಲಿದೆ. ಈ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ.