ಮೈತ್ರಿಯಲ್ಲಿ ಮತ್ತೆ ಬಂಡಾಯ: ಅಪ್ಪ-ಮಗಳು ಸೇರಿ ಒಟ್ಟು 13 ಶಾಸಕರ ರಾಜೀನಾಮೆ?
Recommended Video
ಬೆಂಗಳೂರು, ಜುಲೈ 6: ಕಾಂಗ್ರೆಸ್ನ ಬಿಟಿಎಂ ಲೇಔಟ್ ಕ್ಷೇತ್ರದ ಶಾಸಕ ಮತ್ತು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಮತ್ತು ಅವರ ಮಗಳು, ಜಯನಗರ ಕ್ಷೇತ್ರದ ಶಾಸಕಿ ಸೌಮ್ಯಾ ರೆಡ್ಡಿ ಸೇರಿದಂತೆ 13 ಮಂದಿ ಶಾಸಕರು ರಾಜೀನಾಮೆ ಸಲ್ಲಿಸಲು ಮುಂದಾಗಿದ್ದಾರೆ ಎಂಬ ವದಂತಿ ಹರಡಿದೆ.
ಪಕ್ಷದ ನಾಯಕರೆಡೆಗೆ ಅಸಮಾಧಾನ ಹೊಂದಿರುವ ಕಾಂಗ್ರೆಸ್ ಮತ್ತು ಜೆಡಿಎಸ್ನ ಕೆಲವು ಶಾಸಕರು ಸ್ಪೀಕರ್ ಅವರನ್ನು ಭೇಟಿ ಮಾಡಲು ಸಮಯಾವಕಾಶ ಕೋರಿದ್ದಾರೆ ಎನ್ನಲಾಗಿದೆ. ಆದರೆ, ಶನಿವಾರ ತಮ್ಮ ನಿವಾಸದಿಂದ ವಿಧಾನಸೌಧಕ್ಕೆ ಆಗಮಿಸಿದ ಸ್ಪೀಕರ್ ರಮೇಶ್ ಕುಮಾರ್ ಅವರು ಯಾರೂ ಕೂಡ ತಮ್ಮ ಭೇಟಿಗೆ ಸಮಯ ಕೋರಿಲ್ಲ ಎಂದು ಈ ಸುದ್ದಿಯನ್ನು ನಿರಾಕರಿಸಿದ್ದಾರೆ.
ಸರ್ಕಾರ ಮತ್ತು ಪಕ್ಷದ ನಾಯಕರ ವಿರುದ್ಧ ಅಸಮಾಧಾನಗೊಂಡಿರುವ 13 ಶಾಸಕರು ರಾಜೀನಾಮೆ ನೀಡಲು ಉದ್ದೇಶಿಸಿದ್ದಾರೆ ಎಂದು ಹೇಳಲಾಗಿದೆ. ಸಚಿವ ಸ್ಥಾನ ಸಿಗದ ಕಾರಣ ಬೇಸರಗೊಂಡಿರುವ ರಾಮಲಿಂಗಾರೆಡ್ಡಿ ಅವರು ಕೂಡ ಅತೃಪ್ತರ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ.
ವಿಶ್ವನಾಥ್-ರಾಮಲಿಂಗಾರೆಡ್ಡಿ ಭೇಟಿ: ಸಿದ್ದರಾಮಯ್ಯಗೆ ರಾಜಕೀಯ ಖೆಡ್ಡಾ?
ಅಪ್ಪನಿಗೆ ಸೂಕ್ತ ಗೌರವ ಸಿಗದ ಕಾರಣ ಸೌಮ್ಯಾ ರೆಡ್ಡಿ ಅವರು ಹಲವು ಬಾರಿ ಅಸಮಾಧಾನವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದರು. ಈಗ ತಂದೆ ರಾಜೀನಾಮೆ ನೀಡಿದರೆ ಮಗಳೂ ಅವರನ್ನು ಅನುಸರಿಸಲಿದ್ದಾರೆ ಎಂದು ಹೇಳಲಾಗಿದೆ.
ಅಪ್ಪ-ಮಗಳ ರಾಜೀನಾಮೆ?
ರಾಮಲಿಂಗಾರೆಡ್ಡಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ಹರಡಿದ ಬೆನ್ನಲ್ಲೇ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಸೌಮ್ಯಾ ರೆಡ್ಡಿ ಕೂಡ ಹಾಜರಿದ್ದರು. ರಾಜೀನಾಮೆಗೆ ಮುಂದಾಗಿರುವ ರಾಮಲಿಂಗಾ ರೆಡ್ಡಿ ಅವರ ಮನವೊಲಿಸಲು ಖಂಡ್ರೆ ಪ್ರಯತ್ನ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಆದರೆ ಯಾವುದೇ ಕಾರಣಕ್ಕೂ ರಾಜೀನಾಮೆ ನಿರ್ಧಾರದಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದು ರಾಮಲಿಂಗಾರೆಡ್ಡಿ ಅವರು ಈಶ್ವರ್ ಖಂಡ್ರೆ ಅವರ ಮೂಲಕ ಪಕ್ಷಕ್ಕೆ ದೃಢ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.
ವಿಶ್ವನಾಥ್ ರಾಜೀನಾಮೆಗೆ ತಯಾರಿ?
ಕಾಂಗ್ರೆಸ್ನ 11 ಶಾಸಕರ ಜತೆಗೆ ಜೆಡಿಎಸ್ನ ಇಬ್ಬರು ಶಾಸಕರು ಕೂಡ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ. ಕೆಆರ್ ಪೇಟೆ ಶಾಸಕ ನಾರಾಯಣ ಗೌಡ ಮತ್ತು ಹುಣಸೂರು ಕ್ಷೇತ್ರ ಶಾಸಕ ಎಚ್ ವಿಶ್ವನಾಥ್ ಅವರು ಜೆಡಿಎಸ್ ತೊರೆಯುವುದು ಖಚಿತ ಎಂಬ ವದಂತಿ ಹರಡಿದೆ. ಮಹಾಲಕ್ಷ್ಮಿ ಲೇಔಟ್ನ ಜೆಡಿಎಸ್ ಶಾಸಕ ಕೆ. ಗೋಪಾಲಯ್ಯ ಅವರ ಹೆಸರೂ ಕೊನೆಯ ಕ್ಷಣದಲ್ಲಿ ಸೇರಿಕೊಂಡಿದೆ. ಇವರೆಲ್ಲರೂ ಒಂದೇ ಸ್ಥಳದಲ್ಲಿ ಸೇರಿದ್ದಾರೆ ಎನ್ನಲಾಗಿದೆ. ವಿಶ್ವನಾಥ್ ಅವರು ಇತ್ತೀಚೆಗಷ್ಟೇ ಜೆಡಿಎಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಲ್ಲದೆ ದೆಹಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದರು.
ಪಟ್ಟಿಯಲ್ಲಿ ಇರುವವರು ಯಾರು?
ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಅಥಣಿ ಶಾಸಕ ಮಹೇಶ್ ಕುಮಟಳ್ಳಿ, ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್, ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್, ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್, ಹಿರೇಕೆರೂರು ಶಾಸಕ ಬಿ.ಸಿ. ಪಾಟೀಲ್, ಕೆಆರ್ ಪುರಂ ಶಾಸಕ ಭೈರತಿ ಬಸವರಾಜು, ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ, ಕೆಆರ್ ಪೇಟೆ ಶಾಸಕ ನಾರಾಯಣಗೌಡ, ಹುಣಸೂರು ಶಾಸಕ ಎಚ್ ವಿಶ್ವನಾಥ್, ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾ ರೆಡ್ಡಿ, ಜಯನಗರ ಶಾಸಕಿ ಸೌಮ್ಯಾ ರೆಡ್ಡಿ, ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವವರ ಪಟ್ಟಿಯಲ್ಲಿದ್ದಾರೆ ಎಂದು ವರದಿಯಾಗಿದೆ.
ಸಿದ್ದರಾಮಯ್ಯ-ಖಂಡ್ರೆ ಮಾತುಕತೆ?
'ಕೈ' ಶಾಸಕರ ರಾಜೀನಾಮೆಯ ಸುಳಿವು ಸಿಕ್ಕಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅತೃಪ್ತ ಶಾಸಕರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರು. ಆದರೆ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ ಎನ್ನಲಾಗಿದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ವಿದೇಶದಲ್ಲಿದ್ದಾರೆ. ಸಚಿವ ಡಿಕೆ ಶಿವಕುಮಾರ್ ಅವರು ಈ ವಿಚಾರದಲ್ಲಿ ಇನ್ನೂ ಅಖಾಡಕ್ಕೆ ಇಳಿಯದೆ ದೂರವೇ ಉಳಿದಿದ್ದಾರೆ ಎನ್ನಲಾಗಿದೆ. ಹೀಗಾಗಿ ಈಶ್ವರ್ ಖಂಡ್ರೆ ಅವರು ಅತೃಪ್ತ ಶಾಸಕರ ಮನವೊಲಿಕೆಗೆ ಪ್ರಯತ್ನಿಸುತ್ತಿದ್ದಾರೆ. ಅವರೊಂದಿಗೆ ಜಮೀರ್ ಅಹ್ಮದ್ ಕೂಡ ಕೈಜೋಡಿಸಿದ್ದಾರೆ. ಈಶ್ವರ್ ಖಂಡ್ರೆ ಮತ್ತು ಸಿದ್ದರಾಮಯ್ಯ ಅವರು ಈ ಬಗ್ಗೆ ಗೋಪ್ಯ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ನಾನು ಸಂತೆಯಲ್ಲಿರುವ ಕುರಿಯಲ್ಲ
ಅತೃಪ್ತ ಶಾಸಕರು ರಾಜೀನಾಮೆ ನೀಡುತ್ತಾರೆ ಎಂಬ ವಿಚಾರಕ್ಕೆ ಸ್ಪೀಕರ್ ರಮೇಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. 'ನನ್ನ ಭೇಟಿಗೆ ಯಾರೂ ಸಮಯ ಕೋರಿಲ್ಲ. ನನ್ನನ್ನು ಭೇಟಿ ಮಾಡಲು ಬರುವುದಾದರೆ ಬರಲಿ. ಆ ಮಹಾನುಭಾವರು ಬರ್ತಾರೆ ಎಂದು ಕಾಯ್ತಾ ಇದ್ದೇನೆ. ನಾನು ಸಂತೆಯಲ್ಲಿರುವ ಕುರಿಯಲ್ಲ, ನಾನು ವಿಧಾನಸೌಧದಲ್ಲಿದ್ದೇನೆ. 13 ಅಲ್ಲ, 30 ಶಾಸಕರು ಬೇಕಾದರೂ ಬರಲಿ. ಅವರ ಭೇಟಿಗೆ ಅವಕಾಶವಿದೆ. ರಾಜೀನಾಮೆ ವದಂತಿ ಹಬ್ಬಿಸಿ ಬ್ಯುಸಿನೆಸ್ ಮಾಡಿಕೊಳ್ಳುತ್ತಿದ್ದಾರೆ. ಸ್ಪೀಕರ್ ಭೇಟಿ ಮಾಡಲು ನಿಯಮ ಅಂತ ಇರುತ್ತದೆ. ಅವರು ಬರುತ್ತೇವೆ ಎಂದ ಕೂಡಲೇ ನಾನು ಕಾಯುತ್ತಾ ಕೂರಲು ಆಗುವುದಿಲ್ಲ. ಸ್ಪೀಕರ್ ಭೇಟಿಗೆ ಹೋಗುತ್ತೇನೆ ಎಂದು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಯಾರನ್ನೂ ನಂಬಬೇಡಿ. ನನ್ನನ್ನು ನಂಬಿ ಸತ್ಯ ಹೇಳುತ್ತೇನೆ' ಎಂದು ಹೇಳಿದರು.