ಮೀಡಿಯಾದವರಿಗೆ ದಿಗ್ಬಂಧನ: ಪತ್ರಕರ್ತರಿಗೂ ತಗುಲಿತೇ ಕೊರೊನಾ ಸೋಂಕು?
ಕರ್ನಾಟಕ, ಮಾರ್ಚ್ 14: ವಿಶ್ವದಾದ್ಯಂತ ಬೆಚ್ಚಿಬೀಳಿಸಿರುವ ಮಾರಣಾಂತಿಕ ಕೊರೊನಾ ವೈರಸ್ ಸೋಂಕಿನ ಕುರಿತು ಕರ್ನಾಟಕದ ಮೀಡಿಯಾಗಳಲ್ಲಿ ನಿರಂತರವಾಗಿ ವರದಿ ಪ್ರಸಾರ ಮಾಡಲಾಗುತ್ತಿದೆ.
5000ಕ್ಕೂ ಹೆಚ್ಚು ಜನರ ಪ್ರಾಣ ನುಂಗಿರುವ ಕೊರೊನಾ ವೈರಸ್ ಸೋಂಕು ಅಪಾಯಕಾರಿ ಎಂಬುದು ತಿಳಿದಿದ್ದರೂ, ಕರ್ನಾಟಕದ ಕೆಲ ಪತ್ರಕರ್ತರು ಮತ್ತು ಮೀಡಿಯಾ ವರದಿಗಾರರು ಕೊರೊನಾ ಪೀಡಿತರು ಮತ್ತು ಶಂಕಿತರ ಬಗ್ಗೆ ಪ್ರತ್ಯಕ್ಷ ವರದಿ ಮಾಡುವ ದುಸ್ಸಾಹಸಕ್ಕೆ ಕೈಹಾಕಿದ್ದಾರೆ.
ಕಲಬುರಗಿ To ಹಾಸನ: ಇದು ಕೊರೊನಾ ವೈರಸ್ ಲಿಂಕ್?
ಕೊರೊನಾ ಸೋಂಕು ಶಂಕಿತರ ಸಂದರ್ಶನ ಪಡೆದ ಕೆಲ ಪತ್ರಕರ್ತರು ಮತ್ತು ಸುದ್ದಿ ವಾಹಿನಿಯ ವರದಿಗಾರರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ, 14 ದಿನಗಳ ಕಾಲ ದಿಗ್ಬಂಧನದಲ್ಲಿ ಇಡಲು ಆರೋಗ್ಯ ಇಲಾಖೆ ಮುಂದಾಗಿದೆ.
ಸಿದ್ದಿಕಿ ಕುಟುಂಬದವರನ್ನು ಸಂದರ್ಶಿಸಿದ್ದ 4 ಪತ್ರಕರ್ತರು
ಕಲಬುರಗಿ ನಿವಾಸಿ 76 ವರ್ಷದ ಮೊಹಮ್ಮದ್ ಹುಸೇನ್ ಸಿದ್ದಿಕಿ ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟಿರುವುದು ಗೊತ್ತಿರುವ ವಿಚಾರ. ಮೊಹಮ್ಮದ್ ಹುಸೇನ್ ಸಿದ್ದಿಕಿ ಮೃತಪಟ್ಟ ಎರಡು ದಿನಗಳ ಬಳಿಕ ಅವರಿಗೆ ಕೊರೊನಾ ಸೋಂಕು ತಗುಲಿರುವ ಕುರಿತು ವೈದ್ಯಕೀಯ ವರದಿ ಬಂತು. ಮೊಹಮ್ಮದ್ ಹುಸೇನ್ ಸಿದ್ದಿಕಿ ಸಾವು ಮತ್ತು ಆರೋಗ್ಯ ಇಲಾಖೆ ನೀಡಿದ ಹೇಳಿಕೆಗಳು ವಿವಾದಾತ್ಮಕ ತಿರುವು ಪಡೆದುಕೊಂಡ ಕಾರಣ ಕರ್ನಾಟಕದ ಕೆಲ ಪತ್ರಕರ್ತರು ಮತ್ತು ಸುದ್ದಿ ವಾಹಿನಿಯ ವರದಿಗಾರರು, ಮೃತ ಸಿದ್ದಿಕಿ ಕುಟುಂಬದವರನ್ನು ಸಂದರ್ಶಿಸಿದ್ದರು.
ಪತ್ರಕರ್ತರನ್ನು ದಿಗ್ಬಂಧನದಲ್ಲಿಡಿ
ಮೃತ ಮೊಹಮ್ಮದ್ ಹುಸೇನ್ ಸಿದ್ದಿಕಿ ಅವರ ಕುಟುಂಬದವರಿಗೂ ಕೊರೊನಾ ಸೋಂಕು ತಗುಲಿರುವ ಬಗ್ಗೆ ಅನುಮಾನವಿರುವ ಕಾರಣ, ಸಿದ್ದಿಕಿ ಕುಟುಂಬಸ್ಥರಿಗೂ ಆರೋಗ್ಯ ಇಲಾಖೆ ವೈದ್ಯಕೀಯ ತಪಾಸಣೆ ನಡೆಸುತ್ತಿದೆ. ಈ ನಡುವೆ ಕೆಲ ಪತ್ರಕರ್ತರು ಮತ್ತು ಸುದ್ದಿ ವಾಹಿನಿಯ ವರದಿಗಾರರು ಮೃತ ಸಿದ್ದಿಕಿ ಅವರ ಫ್ಯಾಮಿಲಿಯ ಸಂದರ್ಶನ ಪಡೆದಿದೆ. ಹಾಗೆ ಇಂಟರ್ ವ್ಯೂ ಮಾಡಿದ 4 ಪತ್ರಕರ್ತರನ್ನು ದಿಗ್ಬಂಧನದಲ್ಲಿ (ಐಸೋಲೇಷನ್) ಇಡುವಂತೆ ಕಲಬುರಗಿ ಡಿ.ಸಿ ಬಿ.ಶರತ್ ಸೂಚಿಸಿದ್ದಾರೆ.
ಮೈಸೂರಿನ ಡಿಸಿ ಆದೇಶ
''ಕೊರೊನಾ ಶಂಕಿತ ವ್ಯಕ್ತಿಯ ಸಂದರ್ಶನ ಹಾಗೂ ಫೋಟೋ/ವೀಡಿಯೋ ಮಾಡಲು ಪತ್ರಕರ್ತರು ತೆರಳಿದರೆ, ಅಂತಹ ಪತ್ರಕರ್ತರನ್ನೂ ಸಹ ಮನೆಯಲ್ಲಿ ದಿಗ್ಬಂಧನ(home quarantine)ದಲ್ಲಿ 14 ದಿನಗಳ ಕಾಲ ಇರಿಸಲಾಗುತ್ತದೆ. ಆದ್ದರಿಂದ ಯಾರೂ ಸಹ ಅಂತಹ ಪ್ರಯತ್ನ ಮಾಡಬಾರದು. ಕೊರೊನಾ ಬಗ್ಗೆ ಯಾವುದೇ ಪ್ರಕರಣ ಪತ್ತೆಯಾದರೂ ಸಹ ಸರ್ಕಾರವೇ ಮಾಹಿತಿ ನೀಡುತ್ತದೆ'' ಎಂದು ಮೈಸೂರು ಡಿಸಿ ಕೂಡ ಆದೇಶಿಸಿದ್ದಾರೆ.
ಎಲ್ಲಾ ಪತ್ರಕರ್ತರಿಗೂ ತಪಾಸಣೆ
ಸುದ್ದಿ ನೀಡುವ ಭರದಲ್ಲಿ, ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಮನೆ, ಆಸುಪಾಸಿನ ಸ್ಥಳಗಳಿಗೆ ತೆರಳಿ, ಮೃತನ ಕುಟುಂಬದ ಸದಸ್ಯರೊಂದಿಗೆ interview ಮತ್ತು ಬೈಟ್ ತೆಗೆದುಕೊಂಡ ಕಲಬುರ್ಗಿಯ ಎಲ್ಲಾ ಪತ್ರಕರ್ತರನ್ನು ತಪಾಸಣೆಗೆ ಒಳಪಡಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಇನ್ನಾದರೂ ಪತ್ರಕರ್ತರು ಇಂತಹ ಸಾವಿನ ಸಾಹಸಕ್ಕೆ ಕೈಹಾಕದೆ ಇದ್ದರೆ, ಅವರ ಆರೋಗ್ಯಕ್ಕೆ ಒಳ್ಳೆಯದ್ದು.