ಆರ್ ಅಶೋಕ್, ತನ್ನ ಸಹದ್ಯೋಗಿ ರೇಣುಕಾಚಾರ್ಯ ಕಿವಿಹಿಂಡಿದ್ದು ಹೀಗೆ..
ಬೆಂಗಳೂರು, ಜ 23: ಹೊನ್ನಾಳಿಯಲ್ಲಿ ಮೊನ್ನೆ, ಕೂಲಿಂಗ್ಲಾಸ್ ಹಾಕಿಕೊಂಡು, ಮುಸ್ಲಿಂ ಸಮುದಾಯದ ಬಗ್ಗೆ ಅಬ್ಬರಿಸಿದ್ದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯಗೆ, ಅವರದ್ದೇ ಪಕ್ಷದ ಆರ್. ಅಶೋಕ್ ಟಾಂಗ್ ನೀಡಿದ್ದಾರೆ.
"ಮುಸ್ಲಿಂ ಸಮುದಾಯದ ಬಗ್ಗೆ ರೇಣುಕಾಚಾರ್ಯ ಏನು ಹೇಳಿಕೆ ನೀಡಿದ್ದಾರೋ, ಅದು ಅವರ ವೈಯಕ್ತಿಕವಾಗಿದ್ದೇ ಹೊರತು, ಬಿಜೆಪಿ ಅಥವಾ ಸರಕಾರದಲ್ಲ" ಎಂದು ಕಂದಾಯ ಸಚಿವ ಅಶೋಕ್ ಹೇಳಿದರು.
ಹೊನ್ನಾಳಿ ಮಾತ್ರವಲ್ಲ, ಇಡೀ ಕರ್ನಾಟಕವನ್ನೇ ಕೇಸರೀಕರಣ ಮಾಡುತ್ತೇವೆ: ರೇಣುಕಾಚಾರ್ಯ
"ನಮ್ಮದು ಕನ್ನಡಿಗರ ಸರಕಾರ, ಆರೂವರೆ ಕೋಟಿ ಜನರ ಸರಕಾರ. ನಮ್ಮ ಸರಕಾರ ಯಾವುದೇ ಜಾತಿಮತಕ್ಕೆ ಸೀಮಿತವಾಗಿರುವ ಸರಕಾರವಲ್ಲ" ಎಂದು ಅಶೋಕ್, ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
"ಸಂವಿಧಾನದ ಅಡಿಯಲ್ಲಿ ಏನು ಕೆಲಸ ಮಾಡಬೇಕೋ ಅದನ್ನು ನಾವು ಮಾಡುತ್ತೇವೆ. ರೇಣುಕಾಚಾರ್ಯ ಹೇಳಿಕೆಗೂ, ನಮಗೂ ಸಂಬಂಧವಿಲ್ಲ" ಎಂದು ಹೇಳಿಕೆ ನೀಡುವ ಮೂಲಕ, ಅಶೋಕ್, ರೇಣುಕಾಚಾರ್ಯ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದ್ದಾರೆ, ಜೊತೆಗೆ, ಪಕ್ಷವನ್ನೂ ದೂರವಿಡುವ ಕೆಲಸಕ್ಕೆ ಪ್ರಯತ್ನಿಸಿದ್ದಾರೆ.
"ಇದುವರೆಗಿನ ಎಲ್ಲ ಭಯೋತ್ಪಾದಕ ಪ್ರಕರಣಗಳಲ್ಲಿ ಭಾಗಿಯಾಗಿರುವವರೆಲ್ಲ ಮುಸ್ಲಿಮರೇ. ಆದರೆ ಮುಸ್ಲಿಮರೆಲ್ಲ ಭಯೋತ್ಪಾದಕರಲ್ಲ. ನಾವೂ ಮುಸ್ಲಿಮರನ್ನು ಗೌರವಿಸುತ್ತೇವೆ" ಎಂದು ರೇಣುಕಾಚಾರ್ಯ ಹೇಳಿದ್ದರು.
"ಹೊನ್ನಾಳಿ ಮಾತ್ರವಲ್ಲ. ಇಡೀ ಕರ್ನಾಟಕವನ್ನೇ ಕೇಸರೀಕರಣ ಮಾಡುತ್ತೇವೆ. ಹಿಂದುತ್ವದ ಬಗ್ಗೆ ಯುವಕರಲ್ಲಿ ಅರಿವು ಮೂಡಿಸುತ್ತೇವೆ. ಕೇಸರೀಕರಣ ಎಂದರೆ ಕೇಸರಿಶಾಲು ಹಾಕುವುದಲ್ಲ. ನಾವು ಕ್ರಾಂತಿ ಮಾಡಲ್ಲ, ಶಾಂತಿ ಹರಡುತ್ತೇವೆ" ಎನ್ನುವ ಅಶಾಂತಿಯ ಹೇಳಿಕೆಯನ್ನು ರೇಣುಕಾಚಾರ್ಯ ನೀಡಿದ್ದರು.