ಬಿಜೆಪಿ ಶಾಸಕರ ಸಭೆ; ಶಾಸಕ ರೇಣುಕಾಚಾರ್ಯ ಸ್ಪೋಟಕ ಹೇಳಿಕೆ!
ಬೆಂಗಳೂರು, ಫೆ. 02: ನಿನ್ನೆ ವಿಧಾನಸೌಧದಲ್ಲಿ ನಡೆದಿರುವ ಬಿಜೆಪಿಯ 14 ಶಾಸಕರ ಸಭೆ ಪಕ್ಷದಲ್ಲಿ ಸಂಚಲನವನ್ನುಂಟು ಮಾಡಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. ಸರ್ಕಾರದ ಮುಖ್ಯ ಸಚೇತಕ, ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಅವರ ಕಚೇರಿಯಲ್ಲಿ ನಿನ್ನೆ ಭೋಜನಕೂಟಕ್ಕೆ ಬಿಜೆಪಿಯ 14 ಹಿರಿಯ ಶಾಸಕರು ಸೇರಿದ್ದರು.
Recommended Video
ಭೋಜನಕೂಟದ ನೆಪದಲ್ಲಿ ಸೇರಿದ್ದ ಹಿರಿಯ ಶಾಸಕರು ರಾಜ್ಯ ಸರ್ಕಾರದ ಕಾರ್ಯವೈಖರಿ ಕುರಿತು ಚರ್ಚೆ ನಡೆಸಿದ್ದಾರೆ. ಈ ಎಲ್ಲ ಶಾಸಕರು ಆರ್ಎಸ್ಎಸ್ ಹಿನ್ನೆಲೆಯಿಂದ ಬಂದವರು ಎಂಬುದು ಗಮನಿಸಬೇಕಾದ ಅಂಶ. ಸಭೆಯಲ್ಲಿ ಒಟ್ಟು ಆರು ವಿಷಯಗಳ ಬಗ್ಗೆ ಅವರು ಚರ್ಚೆ ಮಾಡಿದ್ದು ಅವುಗಳ ಕುರಿತು ಪಕ್ಷದ ವರಿಷ್ಠರ ಗಮನ ಸೆಳೆಯಲು ಮುಂದಾಗಿದ್ದಾರೆ. ಇದೇ ವಿಚಾರದ ಕುರಿತು ವಿಧಾನಸೌಧದಲ್ಲಿ ರೇಣುಕಾಚಾರ್ಯ ಅವರು ಮಹತ್ವದ ಮಾತುಗಳನ್ನು ಆಡಿದ್ದಾರೆ.
ನಿನ್ನೆ ಹಿರಿಯ ಶಾಸಕರು ಸಭೆ ಸೇರಿದ್ದರಲ್ಲಿ ಏನೂ ತಪ್ಪಿಲ್ಲ. ಅವರೆಲ್ಲರೂ ಸಂಘ ಪರಿವಾರದವರು ಹಾಗೂ ಹಿರಿಯರು. ಸರ್ಕಾರದ ಕಾರ್ಯವೈಖರಿ ಕುರಿತು ಹಾದಿ ಬೀದಿಯಲ್ಲಿ ಮಾತಾಡುವ ಬದಲು ಒಂದು ಕಡೆ ಕುಳಿತು ಮಾತನಾಡಿದ್ದಾರೆ ಎಂದು ಹೇಳಿದ್ದಾರೆ. ಜೊತೆಗೆ ಮಹತ್ವದ ಬೆಳವಣಿಗೆಯಲ್ಲಿ ಸಿಎಂ ಯಡಿಯೂರಪ್ಪ ಅವರ ಪರವಾಗಿ ರೇಣುಕಾಚಾರ್ಯ ಮಾತನಾಡಿದ್ದಾರೆ.
ಯಡಿಯೂರಪ್ಪ ಅವರನ್ನು ಸಿಎಂ ಮಾಡಿದ್ದು ಹೈಕಮಾಂಡ್. ಸಿಎಂ ಬದಲಾವಣೆ ಆಗುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಸರಿಯಲ್ಲ. ಅವರೊಂದಿಗೆ ನಾವೆಲ್ಲ ಮಾತನಾಡುತ್ತೇವೆ. ಅವರು ಹಾಗೆಲ್ಲ ಮಾತಾಡಬಾರದು ಎಂದಿದ್ದಾರೆ. ನಿನ್ನೆ ಯಡಿಯೂರಪ್ಪ ಅವರ ಮನೆಗೆ ಹೋಗಿದ್ದೇವು. ನಮ್ಮ ನಮ್ಮ ಕ್ಷೇತ್ರಗಳ ಅಭಿವೃದ್ಧಿ ಕುರಿತು ಮುಖ್ಯಮಂತ್ರಿಗಳೊಂದಿಗೆ ಜತೆ ಚರ್ಚೆ ಮಾಡಿದ್ದೆವೆ. ಅದು ಬಿಟ್ಟು ಬೇರೆ ಏನೂ ಮಾತಾಡಿಲ್ಲ. ಇವತ್ತು ಯಡಿಯೂರಪ್ಪ ಅವರು ಮತ್ತೆ ಎಲ್ಲರನ್ನೂ ಊಟಕ್ಕೆ ಕರೆದಿದ್ದಾರೆ. ರಾಜಕಾರಣದಲ್ಲಿ ಯಾರೂ ಸನ್ಯಾಸಿಗಳು ಅಲ್ಲ. ಹೀಗಾಗಿ ಎಲ್ಲರೂ ಅಧಿಕಾರ ಬಯಸುವುದರಲ್ಲಿ ತಪ್ಪಿಲ್ಲ ಎಂದು ತಮ್ಮ ಹೇಳಿಕೆಯಲ್ಲಿ ರೇಣುಕಾಚಾರ್ಯ ತಿಳಿಸಿದ್ದಾರೆ.