ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ಎಚ್ಚರಿಕೆ ಕೊಟ್ಟ ರೇಣುಕಾಚಾರ್ಯ!
ಬೆಂಗಳೂರು, ಫೆ. 18: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಮುನಿಸಿಕೊಂಡಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಸಮಾಧಾನಗೊಂಡಿದ್ದಾರೆ. ನಿರೀಕ್ಷಿತ ಬೆಳವಣಿಗೆಯಲ್ಲಿ ಯಡಿಯೂರಪ್ಪ ಅವರ ಕುಟುಂಬದ ಪರವಾಗಿ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಮೇಲೆ ಪರೋಕ್ಷ ವಾಗ್ದಾಳಿ ಮಾಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿರುವ ರೇಣುಕಾಚಾರ್ಯ ಅವರು, ಸಿಎಂ ಯಡಿಯೂರಪ್ಪ ಅವರ ಕುಟುಂಬದ ಬಗ್ಗೆ ಹಗುರವಾಗಿ ಮಾತಾಡುತ್ತಿದ್ದಾರೆ. ನೀವು ಇದೇ ರೀತಿ ಮಾತಾಡಿದರೆ ರಾಜ್ಯದ ಜನತೆ ಕಾಮಿಡಿ ಪೀಸ್ ನಂತೆ ನೋಡುತ್ತಾರೆ ಎಂದು ಯತ್ನಾಳ್ ಅವರ ಹೆಸರು ಹೇಳದೆ ವಾಗ್ದಾಳಿ ನಡೆಸಿದ್ದಾರೆ.
ನೀವು ಹಾಸ್ಯಾಸ್ಪದ ಹೇಳಿಕೆ ನೀಡುತ್ತಿದ್ದೀರಿ. ಆರ್ಜೆಡಿ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಯಡಿಯೂರಪ್ಪ ಹಣ ನೀಡಿದ್ದಾರೆ ಎಂದು ಹೇಳಿದ್ದೀರಿ. ಯಡಿಯೂರಪ್ಪ ಅವರ ಬಗ್ಗೆ ಮಾತನಾಡದಿದ್ದರೆ ನಿಮಗೆ ತಿಂದ ಅನ್ನ ಜೀರ್ಣವಾಗುವುದಿಲ್ಲ. ಯಡಿಯೂರಪ್ಪ ಬಗ್ಗೆ ಟೀಕೆ ಮಾಡುವುದು, ಪಕ್ಷದ ಬಗ್ಗೆ ಟೀಕೆ ಮಾಡುವುದು ಎರಡೂ ಒಂದೇ. ವಿನಾಕಾರಣ ಟೀಕೆ ಮಾಡುವುದು ಒಳ್ಳೆಯಲ್ಲ ಎಂದು ರೇಣುಕಾಚಾರ್ಯ ಅವರು ಎಚ್ಚರಿಸಿದ್ದಾರೆ.