ನಾಯಕತ್ವ ಬದಲಾವಣೆ ಕುರಿತು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಸ್ಪೋಟಕ ಹೇಳಿಕೆ!
ಬೆಂಗಳೂರು, ಜ. 29: ಸಂಪುಟ ವಿಸ್ತರಣೆ ಹಾಗೂ ಖಾತೆ ಹಂಚಿಕೆ ಕುರಿತು ಬಿಜೆಪಿಯಲ್ಲಿನ ಅಸಮಾಧಾನ ಶಮನವಾಗುವಂತೆ ಕಾಣುತ್ತಿಲ್ಲ. ಇದೇ ವಿಚಾರವಾಗಿ ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರು ಸಚಿವ ಡಾ. ಸುಧಾಕರ್ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ವಿಧಾನಸೌಧದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೇಣುಕಾಚಾರ್ಯ ಅವರು ಪರೋಕ್ಷವಾಗಿ ಸುಧಾಕರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೆಲಸ ಮಾಡಲು ಇಂಥದ್ದೇ ಖಾತೆ ಬೇಕು ಅಂತಿಲ್ಲ. ಮಹತ್ವದ ಖಾತೆಗಳನ್ನು ಪಡೆದುಕೊಳ್ಳುವ ಮೂಲಕ ವ್ಯಾಪಾರಕ್ಕೆ ನಿಂತಿದ್ದಾರಾ? ಎಂದು ಪರೋಕ್ಷವಾಗಿ ಸುಧಾಕರ್ ಅವರ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಪ್ರತ್ಯೇಕ ಸಭೆ ಸೇರಿ ಮಾತುಕತೆ ನಡೆಸಿರುವ ಕುರಿತು ಇದೇ ಸಂದರ್ಭದಲ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಜೊತೆಗೆ ರಾಜ್ಯದಲ್ಲಿ ಬಿಜೆಪಿ ನಾಯಕತ್ವ ಬದಲಾವಣೆ ಕುರಿತು ರೇಣುಕಾಚಾರ್ಯ ಅವರು ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಅವರಿಗೆ ಮಂತ್ರಿ ಸ್ಥಾನ ಕೊಟ್ರೆ ನಾನಂತೂ ಸುಮ್ಮನಿರಲ್ಲ: ಶಾಸಕ ರೇಣುಕಾಚಾರ್ಯ!
ಶಮನವಾಗದ ಅಸಮಾಧಾನ
ದಿನಕಳೆದಂತೆ ಅಸಮಾಧಾನ ಶಮನವಾಗುತ್ತದೆ ಎಂಬ ಬಿಜೆಪಿ ನಾಯಕರ ನಂಬಿಕೆ ಈಡೇರುವ ಲಕ್ಷಣಗಳು ಕಾಣುತ್ತಿಲ್ಲ. ಅಸಮಾಧಾನ ಕಡಿಮೆಯಾಗುವ ಬದಲು ಬಲಸೆ-ಮೂಲ ಶಾಸಕರಲ್ಲಿನ ಕಂದಕ ಮತ್ತಷ್ಟು ಹೆಚ್ಚಾಗುತ್ತಿದೆ. ಇದಕ್ಕೆ ಪೂರಕವಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಆಪ್ತರೊಂದಿಗೆ ಸಭೆ ಸೇರಿ ಮಾತನಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ನನ್ನ ನೇತೃತ್ವದಲ್ಲಿ ಸಭೆ ನಡೆದಿಲ್ಲ, ನಾವೆಲ್ಲಾ ಸಮಾನ ಮನಸ್ಕರು. ನಮ್ಮೆಲ್ಲರ ನೇತೃತ್ವದಲ್ಲಿ ಸಭೆ ನಡೆದಿದೆ ಎಂದು ಹೇಳಿಕೆ ನೀಡಿದ್ದಾರೆ. ನಾವು ಬಹಳ ಜನ ಬಿಜೆಪಿ ಶಾಸಕರಿದ್ದೇವೆ. ಪಕ್ಷ ಹಾಗೂ ಸಿಎಂ ಯಡಿಯೂರಪ್ಪ ಅವರಿಗೆ ಮುಜುಗುರ ಆಗಬಾರದು ಎಂದು ಸುಮ್ಮನಿದ್ದೇವೆ ಎಂದು ರೇಣುಕಾಚಾರ್ಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವ್ಯಾಪಾರ ಮಾಡಲು ಸಚಿವ ಸ್ಥಾನ!
ಕೆಲವರು ಇಂಥದ್ದೇ ಖಾತೆ ಬೇಕು ಎಂದು ಕುಳಿತಿದ್ದಾರೆ. ವ್ಯಾಪಾರಕ್ಕಾಗಿ ದೊಡ್ಡ ಸಚಿವ ಸ್ಥಾನವೇ ಬೇಕಾ? ಅದರಿಂದಾಗಿ ಮಂತ್ರಿಗಳು ಹಾಗೂ ಸರ್ಕಾರದ ವರ್ಚಸ್ಸು ಕಡಿಮೆಯಾಗಲಿದೆ. ಎಲ್ಲಾ ಸಚಿವರು ಹಾಗೆ ಎಂದು ನಾನು ಹೇಳುವುದಿಲ್ಲ, ಕೆಲವರು ಈ ರೀತಿ ಮಾಡುತ್ತಿದ್ದಾರೆ. ಕೆಲವರಂತೂ ಬಹಳ ಉದ್ಧಟತನ ಮಾಡುತ್ತಿದ್ದಾರೆ. ಸರ್ಕಾರ ಅಧಿಕಾರಕ್ಕೆ ಬರಬೇಕು ಅಂತ ಸಂಘಟನೆ ಮಾಡಿತ್ತು. ಆದ್ರೆ ಕೆಲವರು ಈಗ ಎರಡು ಮೂರು ಖಾತೆ ಬೇಕು ಅಂತ ಕುಳಿತಿದ್ದಾರೆ ಎಂದು ಪರೋಕ್ಷವಾಗಿ ಸಚಿವ ಡಾ. ಸುಧಾಕರ್ ಅವರ ಮೇಲೆ ರೇಣುಕಾಚಾರ್ಯ ಅವರು ವಾಗ್ದಾಳಿ ನಡೆಸಿದರು.
ಹಮಾಲಿ ಮಾಡಿದ್ದು ನಾವು...!
ಸರ್ಕಾರ ಬರಲು ಅಂದು ಹಮಾಲಿ ಕೆಲಸ ಮಾಡಿದ್ದು ನಾವು, ಬೇರೆಯವರು ಅಧಿಕಾರವನ್ನು ಅನುಭವಿಸುತ್ತಿದ್ದಾರೆ. ಇನ್ನೂ ಎರಡು ವರ್ಷ ಸ್ಥಿರ ಸರ್ಕಾರ ನೀಡಬೇಕು. ಸ್ವಾಭಿಮಾನಕ್ಕೂ ಧಕ್ಕೆ ಬರಬಾರದು, ಬಂದರೆ ಅದರ ವಿರುದ್ಧ ನಿಲ್ಲುತ್ತೇನೆ. ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸಬೇಕು ಅನ್ನೋ ಅಪೇಕ್ಷೆ ಇದೆ. ಮೊದಲು ರಾಜಿನಾಮೆ ಕೊಟ್ಟು ಬಂದಿದ್ದು ಸಚಿವ ಆನಂದ್ ಸಿಂಗ್ ಅವರು. ಅವರ ಪರವಾಗಿ ಇರೋದಾಗಿ ಮೊದಲೇ ಹೇಳಿದ್ದೆವು. ಹೀಗಾಗಿ ಅವರೊಂದಿಗೆ ನಿಲ್ಲುವುದು ಸರ್ಕಾರ ಅಥವಾ ನಾಯಕತ್ವ ವಿರುದ್ಧ ನಮ್ಮ ಹೋರಾಟ ಅಲ್ಲ ಎಂದು ನಾಯಕತ್ವ ಬದಲಾವಣೆ ಕುರಿತು ತಮ್ಮ ಅಭಿಪ್ರಾಯವನ್ನು ರೇಣುಕಾಚಾರ್ಯ ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ.
ಬೇರೆ ಪಕ್ಷದಿಂದ ಬಂದವರಿಗೆ ಗೌರವ
ನನ್ನ ಕ್ಷೇತ್ರ ಜನತೆ ಕಾಯುತ್ತಿದ್ದಾರೆ, ಮೂರು ಬಾರಿ ನನ್ನನ್ನು ಗೆಲ್ಲಿಸಿದ್ದಾರೆ. ಅಬಕಾರಿ ಖಾತೆ ಕೊಟ್ಟಾಗ ಉತ್ತಮವಾಗಿ ನಿಭಾಯಿಸಿದ್ದೇನೆ. ಕಳೆದ ವಾರ ನಡೆದ ಘಟನೆ ನನಗೆ ನೋವು ತಂದಿದೆ. ಬೇರೆ ಪಕ್ಷದಿಂದ ಬಂದವರನ್ನು ಗೌರವಿಸುತ್ತಾರೆ. ನಾವು ಹಿರಿಯರಲ್ವಾ, ನಮಗಿಂತ ಹಿರಿಯರಿಲ್ವಾ? ನಾನು ಬಹಿರಂಗವಾಗಿ ಹೇಳಿಕೆ ನೀಡಲ್ಲ. ಸಿಎಂ ಯಡಿಯೂರಪ್ಪ ಅವರು ಶಾಸಕಾಂಗ ಪಕ್ಷದ ಸಭೆ ಕರೆದಾಗ, ನೇರವಾಗಿ ಅಲ್ಲಿಯೇ ಹೇಳುತ್ತೇನೆ. ರಾಜ್ಯಾಧ್ಯಕ್ಷ ಹಾಗೂ ಮುಖ್ಯಮಂತ್ರಿ ಅವರ ಬಳಿ ಹೇಳುತ್ತೇನೆ. ಸಚಿವ ಸ್ಥಾನ ಕೊಡುವುದು ಗೌರವಕ್ಕಾಗಿ, ದೊಡ್ಡ ಖಾತೆ ಯಾಕೆ? ನಮ್ಮ ಪೂರ್ವಜರು ತೆಂಗಿನ ಮರ ನೆಟ್ಟಿದ್ರು, ಬೇರೆಯವರು ಎಳನೀರು ಕುಡಿಯುತ್ತಿದ್ದಾರೆ ಎಂದು ಪರೋಕ್ಷವಾಗಿ ಸುಧಾಕರ್ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ.