ಖ್ಯಾತ ಉದ್ಯಮಿ ಆರ್ ಎನ್ ಶೆಟ್ಟಿ ನಿಧನ
ಬೆಂಗಳೂರು, ಡಿಸೆಂಬರ್ 17: ದೇಶ ವಿದೇಶಗಳಲ್ಲಿ ಖ್ಯಾತಿ ಗಳಿಸಿದ್ದ ಹಿರಿಯ ಉದ್ಯಮಿ, ಶಿಕ್ಷಣ ತಜ್ಞ ಆರ್ ಎನ್ ಶೆಟ್ಟಿ ಗುರುವಾರ ನಿಧನರಾಗಿದ್ದಾರೆ. 92 ವರ್ಷದ ಆರ್ ಎನ್ ಶೆಟ್ಟಿ ಅವರು ಗುರುವಾರ ನಸುಕಿನ 3.30ರ ಸುಮಾರಿಗೆ ನಿಧನರಾದರು ಎನ್ನಲಾಗಿದೆ.
ಡಾ. ರಾಮ ನಾಗಪ್ಪ ಶೆಟ್ಟಿ ಅವರು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಮುರುಡೇಶ್ವರದಲ್ಲಿ 1928ರ ಆಗಸ್ಟ್ 15ರಂದು ಜನಿಸಿದ್ದರು. ಮುರುಡೇಶ್ವರ ದೇವಸ್ಥಾನದ ಆನುವಂಶಿಕ ಆಡಳಿತಾಧಿಯಾಗಿ ಈ ಸ್ಥಳವನ್ನು ಪ್ರೇಕ್ಷಣೀಯ ಕ್ಷೇತ್ರವನ್ನಾಗಿ ಪರಿವರ್ತಿಸಿದ ಕೀರ್ತಿ ಅವರದು. ಮುರುಡೇಶ್ವರದ ಸಮುದ್ರ ತೀರದಲ್ಲಿ 123 ಅಡಿ ಎತ್ತರದ ಶಿವನ ಪ್ರತಿಮೆಯನ್ನು ಸ್ಥಾಪಿಸಿದ್ದರು.
ಸಮಾಜಮುಖಿ ಚಿಂತಕ, ಖ್ಯಾತ ಉದ್ಯಮಿ ಆರ್.ಎನ್.ಶೆಟ್ಟಿ ಅವರ ವ್ಯಕ್ತಿ ಚಿತ್ರಣ
ಆರ್ ಎನ್ ಶೆಟ್ಟಿ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ಮಧ್ಯಾಹ್ನ 2 ಗಂಟೆಯ ಬಳಿಕ ಬೆಂಗಳೂರಿನ ಉತ್ತರಹಳ್ಳಿಯ ಆರ್ ಎನ್ ಎಸ್ ತಾಂತ್ರಿಕ ವಿದ್ಯಾಲಯ ಕಾಲೇಜು ಆವರಣದಲ್ಲಿ ಇರಿಸಲಾಗುವುದು. ಸಂಜೆ ವೇಳೆ ಅಂತ್ಯಸಂಸ್ಕಾರ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮುಂದೆ ಓದಿ.
ಅನೇಕ ನಿರ್ಮಾಣ ಕಾರ್ಯಗಳು
ಆರ್ ಎನ್ ಶೆಟ್ಟಿ ಅವರು ಉದ್ಯಮಿಯಾಗಿ ಬಹುದೊಡ್ಡ ಹೆಸರು ಮಾಡಿದ್ದರು. 1961ರಲ್ಲಿ ಪಾಲುದಾರ ಕಂಪೆನಿಯಾದ ಆರ್ ಎನ್ ಶೆಟ್ಟಿ ಆಂಡ್ ಕಂಪೆನಿ ಆರಂಭಿಸಿದ್ದರು. ಕಂಪೆನಿ ಮೂಲಕ ಅನೇಕ ಸೇತುವೆ, ಅಣೆಕಟ್ಟುಗಳು, ಕಟ್ಟಡಗಳ ನಿರ್ಮಾಣ ಕಾರ್ಯ ಮಾಡಿದ್ದರು.
ಜಲಾಶಯ, ಸುರಂಗ, ಹೆದ್ದಾರಿ ನಿರ್ಮಾಣ
ವಾರಾಹಿ ಜಲವಿದ್ಯುತ್ ಯೋಜನೆ, ಮಾಣಿ ಅಣೆಕಟ್ಟು, ಗೇರುಸೊಪ್ಪ ಜಲಾಶಯ, ಸೂಪ ಜಲಾಶಯ, ಹಿಡಕಲ್ ಜಲಾಶಯ, ತಟ್ಟಿಹಳ್ಳ ಜಲಾಶಯ, ಕೊಂಕಣ ರೈಲು ಸುರಂಗ, ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ಅವರು ತಮ್ಮ ಮೂಲಸೌಕರ್ಯ ಕಂಪೆನಿಯ ಮೂಲಕ ಅನೇಕ ನಿರ್ಮಾಣ ಕಾರ್ಯಗಳನ್ನು ನಡೆಸಿದ್ದರು.
ಶಿಕ್ಷಣೋದ್ಯಮಿಯೂ ಹೌದು
ಮೋಟಾರ್ಸ್ ಕಂಪೆನಿ, ಫೈನಾನ್ಸ್ ಕಂಪೆನಿ, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳನ್ನು ಅವರು ಸ್ಥಾಪಿಸಿದ್ದರು. ಅವರ ಆರ್ ಎನ್ ಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ಕರ್ನಾಟಕದ ಅತಿ ದೊಡ್ಡ ಕ್ಯಾಂಪಸ್ ಎನಿಸಿಕೊಂಡಿದೆ. ಬೆಂಗಳೂರು ವಿಶ್ವವಿದ್ಯಾಲಯ 2009-10ರಲ್ಲಿ ಅವರಿಗೆ ಗೌರವ ಡಾಕ್ಟರೇಟ್ ನೀಡಿತ್ತು.
ಮುಖ್ಯಮಂತ್ರಿ ಯಡಿಯೂರಪ್ಪ ಸಂತಾಪ
ಆರ್ ಎನ್ ಶೆಟ್ಟಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 'ನಾಡಿನ ಖ್ಯಾತ ಉದ್ಯಮಿ ಆರ್.ಎನ್. ಶೆಟ್ಟಿ ನಿಧನಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕೃಷಿಕ ಮನೆತನದಲ್ಲಿ ಜನಿಸಿದ ಆರ್.ಎನ್. ಶೆಟ್ಟಿ ಅವರು ನಿರ್ಮಾಣ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹೋಟೆಲ್ ಉದ್ಯಮ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದರು' ಎಂದು ಮುಖ್ಯಮಂತ್ರಿ ಕಚೇರಿ ಟ್ವಿಟ್ಟರ್ ಖಾತೆಯಲ್ಲಿ ಹೇಳಿದೆ.
'ಜೊತೆಗೆ ಶಿಕ್ಷಣ ಕ್ಷೇತ್ರಕ್ಕೂ ತಮ್ಮ ಕೊಡುಗೆ ನೀಡಿದ್ದರು. ಭಗವಂತನು ಅವರ ಆತ್ಮಕ್ಕೆ ಶಾಂತಿಯನ್ನು ಕರುಣಿಸಲಿ. ಕುಟುಂಬದವರಿಗೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ' ಎಂದು ಟ್ವೀಟ್ ಮಾಡಲಾಗಿದೆ.
Recommended Video
ಸಚಿವ ಶ್ರೀರಾಮುಲು ಸಂತಾಪ
ರಾಜ್ಯದ ಖ್ಯಾತ ಉದ್ಯಮಿ ಆರ್.ಎನ್. ಶೆಟ್ಟಿ ನಿಧನದ ಸುದ್ದಿ ತಿಳಿದು ಅಪಾರ ದುಃಖವಾಗಿದೆ. ಹೋಟೆಲ್, ಶಿಕ್ಷಣ, ಮೂಲ ಸೌಕರ್ಯ ಕ್ಷೇತ್ರದಲ್ಲಿ ಅವರು ಮೂಡಿಸಿದ ಛಾಪು ಅಗಾಧ. ಅವರ ಕುಟುಂಬಸ್ಥರಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಶ್ರೀರಾಮುಲು ಸಂತಾಪ ವ್ಯಕ್ತಪಡಿಸಿದ್ದಾರೆ.