ಸಿದ್ದರಾಮಯ್ಯನವರನ್ನು ವಿರೋಧ ಪಕ್ಷದ ನಾಯಕನ ಸ್ಥಾನದಿಂದ ಕಿತ್ತಾಕಿ, ಆಮೇಲೆ ಅವರ ನಿಜಬಣ್ಣ ನೋಡಿ
ಬೆಂಗಳೂರು, ಫೆ 7: ಸಚಿವ ಸಂಪುಟ ವಿಸ್ತರಣೆಯ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಡಿದ ಮಾತಿಗೆ, ಕಂದಾಯ ಸಚಿವ ಆರ್.ಅಶೋಕ್ ಕಿಡಿಕಾರಿದ್ದಾರೆ.
"ಜನಾದೇಶ ಧಿಕ್ಕರಿಸಿ, ಪಕ್ಷಕ್ಕೆ ರಾಜೀನಾಮೆ ನೀಡಿ, ಮತ್ತೆ ಚುನಾವಣೆ ಗೆದ್ದು ಬಂದು ಸಚಿವರಾದರೂ, ಅವರೆಲ್ಲರೂ ಅನರ್ಹರೇ" ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದರು. ಇದಕ್ಕೆ ಸಚಿವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು ಸಚಿವರ ಪಟ್ಟಿಗೆ ಮೂರು ಹೊಸ ಸೇರ್ಪಡೆ
"ಅನರ್ಹರ ಬಗ್ಗೆ ಸಿದ್ದರಾಮಯ್ಯ ಮಾತನಾಡುವ ಮೊದಲು, ಅವರ ರಾಜಕೀಯವನ್ನೊಮ್ಮೆ ನೋಡಲಿ. ಮೂರುಮೂರು ಪಕ್ಷ ಬಿಟ್ಟು ಬಂದ ಸಿದ್ದರಾಮಯ್ಯ ಅನರ್ಹರೇ ಹೊರತು, ನೂತನ ಸಚಿವರಲ್ಲ" ಎಂದು ಅಶೋಕ್ ತಿರುಗೇಟು ನೀಡಿದ್ದಾರೆ.
"ಸಿದ್ದರಾಮಯ್ಯನವರು ಕಾಂಗ್ರೆಸ್ ನಲ್ಲೇ ಮುಂದುವರಿಯುವುದು ಡೌಟು. ವಿರೋಧ ಪಕ್ಷದ ನಾಯಕನ ಸ್ಥಾನದಿಂದ ಅವರನ್ನು ಕಿತ್ತಾಕಿ, ಆಮೇಲೆ ಗೊತ್ತಾಗುತ್ತೆ ನೋಡಿ ಅವರ ನಿಜಬಣ್ಣ" ಎಂದು ಅಶೋಕ್ ಲೇವಡಿ ಮಾಡಿದ್ದಾರೆ.
"ಬಿಜೆಪಿಯ ಆಂತರಿಕ ವಿಚಾರದಲ್ಲಿ ಸಿದ್ದರಾಮಯ್ಯ ಅಥವಾ ಕುಮಾರಸ್ವಾಮಿ ಮೂಗು ತೂರಿಸುವ ಅಗತ್ಯವಿಲ್ಲ. ನಮ್ಮ ಮನೆಯ ಸಮಸ್ಯೆಯನ್ನು ನಾವು ನೋಡಿಕೊಳ್ಳುತ್ತೇವೆ" ಎಂದು ಅಶೋಕ್ ಹೇಳಿದ್ದಾರೆ.
"ಮೂರು ವರ್ಷದ ನಂತರ, ಇನ್ನೊಂದು ಬಾರಿ ನಮ್ಮ ಪಕ್ಷಕ್ಕೆ ಅವಕಾಶ ನೀಡಿ ಎಂದು ಕುಮಾರಸ್ವಾಮಿಯವರು ಹೇಳುತ್ತಿದ್ದಾರೆ. ಮೂರು ವರ್ಷದ ನಂತರ ಜೆಡಿಎಸ್ ಇದ್ದರೆ ತಾನೇ" ಎಂದು ಸಚಿವ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.