ಸವಣೂರು ವೃಂದಾವನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು
ಸವಣೂರು, ಅ. 10 : ಕೂಡಲಿ ಆರ್ಯ ಅಕ್ಷೋಭ್ಯತೀರ್ಥ ಸಂಸ್ಥಾನ ಮಠದ ಶ್ರೀ ರಘುವಿಜಯತೀರ್ಥರ ನೇತೃತ್ವದಲ್ಲಿ ಸವಣೂರಿನ ಶ್ರೀ ಸತ್ಯಬೋಧ ಸ್ವಾಮಿಗಳ ಮೂಲವೃಂದಾವನ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಗುರುವಾರ ಚಾಲನೆ ನೀಡಲಾಯಿತು.
ಶ್ರೀ ವೈಕುಂಠ ರಾಮದೇವರ ಮಹಾಪೂಜೆಯನ್ನು ಸ್ವಾಮೀಜಿ ವಿಧ್ಯುಕ್ತವಾಗಿ ಕೈಗೊಂಡರು. ಸಂಜೆ ಶ್ರೀಮದ್ ಭಾಗವತ ಪ್ರವಚನ ನಡೆಯಿತು. ಪರೀಕ್ಷಿತ ಹಾಗೂ ಶುಕಾಚಾರ್ಯರ ಸಂವಾದದ ಮೂಲಕ ಭಾಗವತ ಸೇರಿದಂತೆ ಹಲವಾರು ಪುರಾಣದ ಕಥೆಗಳು ನೀಡುವ ಸಂದೇಶ ವಿವರಿಸಲಾಯಿತು.[ಶ್ರೀ ಸತ್ಯಾತ್ಮತೀರ್ಥರಿಗೆ 60 ಕೆಜಿ ನಾಣ್ಯ ಸಮರ್ಪಣೆ]
ನಿರಂತರವಾಗಿ ಕೈಗೊಳ್ಳುವ ಸತ್ಕಥಾ ಶ್ರವಣ, ಮನನ, ಧ್ಯಾನಗಳಿಂದ ಜ್ಞಾನ ವೃದ್ಧಿಯಾಗುತ್ತದೆ. ಧ್ಯಾನದಿಂದ ತತ್ವ ನಿರ್ಣಯ ಸಾಧ್ಯವಾಗುತ್ತದೆ ಎಂದು ತಿಳಿಸಿದ ಸ್ವಾಮೀಜಿ ಭಗವಂತನ ಅವತಾರಗಳು, ಮಹಿಮೆಗಳು, ಕಲಿಯುಗದಲ್ಲಿ ಧರ್ಮದ ರಕ್ಷಣೆಯ ವಿಧಾನ, ದೇವತೆಗಳಲ್ಲಿನ ತಾರತಮ್ಯ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ವಿವರಿಸಿದರು.
ಮಠದಲ್ಲಿ ದೇವರ ಮಹಾಪೂಜೆ, ಶ್ರೀ ಸತ್ಯಬೋಧತೀರ್ಥದ ಮೂಲವೃಂದಾವನಕ್ಕೆ ಪಂಚಾಮೃತ ಅಭಿಷೇಕ, ಅಲಂಕಾರ, ಹಸ್ಥೋದಕ, ಭಕ್ತವೃಂದಕ್ಕೆ ತೀರ್ಥ ಪ್ರಸಾದ ವಿತರಣೆ ಸೇರಿದಂತೆ ಹಲವಾರು ಧಾರ್ಮಿಕ ಆಚರಣೆಗಳನ್ನು ಕೈಗೊಳ್ಳಲಾಯಿತು. ಭಜನೆ, ಕೀರ್ತನೆ, ದೇವರ ತೊಟ್ಟಿಲೋತ್ಸವಗಳು ನೆರವೇರಿದವು.[ಶ್ರಾವಣದ ಊರಲ್ಲಿ ಗೋಕಾಕರ ನಿರರ್ಥಕ ಹುಟ್ಟುಹಬ್ಬ]
ಸತ್ಯಬೋಧಾಚಾರ್ಯ ರಾಯಚೂರ, ಗುರುರಾಜಾಚಾರ್ಯ ರಾಯಚೂರ, ರಮೇಶ ರಾಯಚೂರ, ರಂಗಾಚಾರ್ಯ ರಾಯಚೂರ ಸೇರಿದಂತೆ ವಿಪ್ರ ಸಮಾಜದ ಸದಸ್ಯರು ಉಪಸ್ಥಿತರಿದ್ದರು.