ಚುನಾವಣಾ ನೀತಿ ಸಂಹಿತೆ ಸಡಿಲಿಕೆ : ಆಯೋಗಕ್ಕೆ ಬಿಎಸ್ವೈ ಪತ್ರ
ಬೆಂಗಳೂರು, ಏಪ್ರಿಲ್ 26 : ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಮತದಾನ ಮುಕ್ತಾಯವಾಗಿದ್ದು ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ. ಚುನಾವಣಾ ಆಯೋಗ ಮಾದರಿ ನೀತಿ ಸಂಹಿತೆಯನ್ನು ಸ್ವಲ್ಪ ಸಡಿಲಗೊಳಿಸಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.
ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ಚುನಾವಣಾ ಪ್ರಕ್ರಿಯೆ ಮುಗಿದು ಫಲಿತಾಂಶ ಪ್ರಕಟವಾಗುವ ತನಕ ಮಾದರಿ ನೀತಿ ಸಂಹಿತೆಯನ್ನು ಸಡಿಲಿಸಬಾರದು ಎಂದು ಮನವಿ ಮಾಡಿದ್ದಾರೆ.
ಲೋಕಸಭಾ ಚುನಾವಣೆ ಘೋಷಣೆ : ಮಾದರಿ ನೀತಿ ಸಂಹಿತೆ ಎಂದರೇನು?
ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವ ಯಡಿಯೂರಪ್ಪ ಅವರು ಕರ್ನಾಟಕದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ನೀತಿ ಸಂಹಿತೆಯನ್ನು ಸಡಿಲಿಸಿದ್ದರೆ ಅದನ್ನು ತಕ್ಷಣ ವಾಪಸ್ ಪಡೆಯಬೇಕು ಪತ್ರದಲ್ಲಿ ಕೋರಿದ್ದಾರೆ.
ಲೋಕಸಭೆ ಚುನಾವಣೆ 2019ರ ಮಾಹಿತಿ ಅಂಕಿ- ಅಂಶಗಳಲ್ಲಿ
ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 18 ಮತ್ತು 23ರಂದು ಮತದಾನ ನಡೆದಿತ್ತು. ಈಗ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಿದೆ. ಮೇ 23ರಂದು ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆಯಲಿದೆ.
ಕರ್ನಾಟಕ ಸರ್ಕಾರ
ಚುನಾವಣಾ ಆಯೋಗ ಮಾದರಿ ನೀತಿ ಸಂಹಿತೆಯನ್ನು ಸಡಿಲಿಕೆ ಮಾಡಿದೆ ಎಂದು ಕರ್ನಾಟಕ ಸರ್ಕಾರ ಹೇಳುತ್ತಿದೆ. ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಮೂಲ ಸೌಕರ್ಯದ ಯೋಜನೆಗಳು, ಖರೀದಿಯಲ್ಲಿ ತೊಡಗಿದೆ ಎಂದು ಯಡಿಯೂರಪ್ಪ ಪತ್ರದಲ್ಲಿ ತಿಳಿಸಿದ್ದಾರೆ.
ನೀತಿ ಸಂಹಿತೆ ಜಾರಿಯಲ್ಲಿರಬೇಕು
ಎಲ್ಲರಿಗೂ ತಿಳಿದಿರುವಂತೆ ಚುನಾವಣಾ ಪ್ರಕ್ರಿಯೆ ಮುಗಿಯುವ ತನಕ ಅಂದರೆ ಫಲಿತಾಂಶ ಪ್ರಕಟವಾಗುವ ತನಕ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರಬೇಕು. ಆದರೆ, ಕರ್ನಾಟಕ ಸರ್ಕಾರ ನೀತಿ ಸಂಹಿತೆ ಸಡಿಲಿಕೆ ಮಾಡಲಾಗಿದೆ ಎಂದು ಹೇಳುತ್ತಿದೆ.
ತುರ್ತು ಕಾರ್ಯಕ್ಕೆ ಅಡ್ಡಿ ಇಲ್ಲ
ಚುನಾವಣಾ ನೀತಿ ಸಂಹಿತೆ ಬರ, ಪ್ರಕೃತಿ ವಿಕೋಪ, ತುರ್ತು ಕೆಲಸಗಳಿಗೆ ಅನ್ವಯ ವಾಗುವುದಿಲ್ಲ ಎಂಬದು ತಿಳಿದಿದೆ. ಕುಡಿಯುವ ನೀರಿನ ಪೂರೈಕೆ, ತುರ್ತು ರಕ್ಷಣಾ ಕಾರ್ಯಗಳನ್ನು ಸರ್ಕಾರ ನೀತಿ ಸಂಹಿತೆ ಜಾರಿಯಲ್ಲಿರುವಾಗ ಕೈಗೊಳ್ಳಬಹುದು.
ಸರ್ಕಾರ ಟೆಂಡರ್ ಕರೆಯುತ್ತಿದೆ
ನೀತಿ ಸಂಹಿತೆ ಸಡಿಲಗೊಳಿಸಲಾಗಿದೆ ಎಂದು ಹೇಳುತ್ತಿರುವ ಕರ್ನಾಟಕ ಸರ್ಕಾರ ಮೂಲ ಸೌಕರ್ಯ ಯೋಜನೆಗಳನ್ನು ಕೈಗೊಳ್ಳುತ್ತಿದೆ. ಖರೀದಿಯಲ್ಲಿ ತೊಡಗಿದೆ. ಯೋಜನೆಗಳಿಗಾಗಿ ಟೆಂಡರ್ ಕರೆಯುತ್ತಿದೆ. ಈ ಮೂಲಕ ನೀತಿ ಸಂಹಿತೆಸಯನ್ನು ಉಲ್ಲಂಘನೆ ಮಾಡುತ್ತಿದೆ ಎಂದು ಯಡಿಯೂರಪ್ಪ ಆರೋಪಿಸಿದ್ದಾರೆ.
ಪತ್ರದಲ್ಲಿ ಮನವಿ
ಕರ್ನಾಟಕ ಸರ್ಕಾರ ಹೇಳಿದಂತೆ ಮಾದರಿ ನೀತಿ ಸಂಹಿತೆಯನ್ನು ಸಡಿಲಿಕೆ ಮಾಡಿದ್ದರೆ ಅದನ್ನು ತಕ್ಷಣ ವಾಪಸ್ ಪಡೆಯಬೇಕು ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಮತ್ತು ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಪತ್ರದಲ್ಲಿ ಮನವಿ ಮಾಡಿದ್ದಾರೆ.