ಮೂರು ವಿಚಾರಕ್ಕೆ ವರಿಷ್ಠರ ನಿರ್ಲಕ್ಷ್ಯ, ಬಿಎಸ್ವೈ ದಿವ್ಯಮೌನ, ರಾಜ್ಯ ಬಿಜೆಪಿ ತಬ್ಬಿಬ್ಬು
ದಕ್ಷಿಣ ಭಾರತದ ಬಿಜೆಪಿಯ ಹೆಬ್ಬಾಗಿಲು ಕರ್ನಾಟಕದಲ್ಲಿ, ದಿನದಿಂದ ದಿನಕ್ಕೆ ನಡೆಯುತ್ತಿರುವ ಬೆಳವಣಿಗೆ ಪಕ್ಷದ ಭವಿಷ್ಯದ ದೃಷ್ಟಿಯಲ್ಲಿ ಉತ್ತಮ ಬೆಳವಣಿಗೆಯಲ್ಲ. ಆದರೂ, ವರಿಷ್ಠರ ದಿವ್ಯಮೌನ ಕಾರ್ಯಕರ್ತರನ್ನು ಚಿಂತೆಗೀಡು ಮಾಡಿದೆ.
ಆಪರೇಶನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಾಗಿನಿಂದ ಒಂದಲ್ಲಾ ಒಂದು ವಿದ್ಯಮಾನಗಳು ಪಕ್ಷವನ್ನು ಮುಜುಗರಕ್ಕೀಡು ಮಾಡುತ್ತಿದೆ. ಅದರಲ್ಲೂ, ಇತ್ತೀಚಿನ ದಿನಗಳಲ್ಲಂತೂ ಬಿಜೆಪಿಯ ಆಂತರಿಕ ಬೇಗುದಿ ಸ್ಪೋಟಿಸುತ್ತಲೇ ಇದೆ.
ತಮ್ಮ ತಪ್ಪನ್ನು ಮುಚ್ಚಿಡಲು ಸಿಎಂ ಬಿಎಸ್ವೈ ವಿರುದ್ದ ದೂರು ಕೊಟ್ಟರೇ ಈಶ್ವರಪ್ಪ
ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಯಡಿಯೂರಪ್ಪನವರ ನೇತೃತ್ವ ಬಹುಮುಖ್ಯ ಎಂದು ದೆಹಲಿ ಹೈಕಮಾಂಡ್ ಹೇಳುತ್ತಲೇ ಬರುತ್ತಿದ್ದರೂ, ಅವರ ವಿರುದ್ದ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ವರಿಷ್ಠರು ತಲೆಕೆಡಿಸಿಕೊಳ್ಳುತ್ತಿಲ್ಲ.
ರಾಜ್ಯ ಬಿಜೆಪಿ ಘಟಕ ಬಣಗಳಾಗಿ ಪರಿವರ್ತನೆಗೊಂಡಂತೆ ಪಕ್ಷದ ಮುಖಂಡರು ಹೇಳಿಕೆಯನ್ನು ನೀಡುತ್ತಿದ್ದಾರೆ. ಉಪಚುನಾವಣೆಯ ಈ ಸಂದರ್ಭದಲ್ಲಿ ಮೂರು ವಿಚಾರದಲ್ಲಿ ವರಿಷ್ಠರ ದಿವ್ಯಮೌನ ಕಾರ್ಯಕರ್ತರಲ್ಲಿ ಆಂತಕ ತಂದಿದೆ.
"ನೀವು ಸಿಎಂ ಆಗಿರಿ, ಉಳಿದೆಲ್ಲಾ ಖಾತೆ ವಿಜಯೇಂದ್ರಗೆ ಕೊಟ್ಟು ಬಿಡಿ"
ಸಚೇತಕ ಸುನಿಲ್ ಕುಮಾರ್ ರಾಜ್ಯಾಧ್ಯಕ್ಷ ಕಟೀಲ್ ಗೆ ಬರೆದ ಪತ್ರ
ಸಂಪುಟ ವಿಸ್ತರಣೆಯ ವಿಚಾರದಲ್ಲಿ ನಡೆಯುತ್ತಿದ್ದ ವಿದ್ಯಮಾನಗಳನ್ನು ಉಲ್ಲೇಖಿಸಿ ಪಕ್ಷದ ಸಚೇತಕ ವಿ.ಸುನಿಲ್ ಕುಮಾರ್ ಅವರು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಪತ್ರ ಬರೆದದ್ದು ದೊಡ್ಡ ಸುದ್ದಿಯಾಗಿತ್ತು. ಪತ್ರದಲ್ಲಿ, ತಕ್ಷಣ ಶಾಸಕರ ಸಭೆ ಕರೆಯುವಂತೆ ಸುನಿಲ್ ಕುಮಾರ್ ಆಗ್ರಹಿಸಿದ್ದದ್ದು ಸಿಎಂ ಯಡಿಯೂರಪ್ಪನವರಿಗೆ ಆದ ಹಿನ್ನಡೆ ಎಂದೇ ವ್ಯಾಖ್ಯಾನಿಸಲಾಗಿತ್ತು. ಸಾಮಾನ್ಯವಾಗಿ ನಾಯಕತ್ವ ಬದಲಾವಣೆಯಂತಹ ಬೆಳವಣಿಗೆಗಳು ನಡೆಯುವಾಗ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲಾಗುತ್ತದೆ.
ಸರ್ಕಾರದ ಆಡಳಿತ ಸುಗಮ - ಪತ್ರದಲ್ಲಿ ಉಲ್ಲೇಖ
ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಸುನಿಲ್ ಕುಮಾರ್ ಅವರ ಪತ್ರ ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಿತ್ತು. ದೆಹಲಿಯ ವರಿಷ್ಠರು ಕೂಡಾ ಕಟೀಲ್ ಅವರಿಂದ ಈ ವಿಚಾರದಲ್ಲಿ ಮಾಹಿತಿ ಪಡೆದುಕೊಂಡಿದ್ದರು. "ರಾಜ್ಯ ಸರ್ಕಾರದ ಬೆಳವಣಿಗೆಗಳು, ನಿರ್ಧಾರಗಳು ಮತ್ತು ಪಕ್ಷದಲ್ಲಿನ ಚಟುವಟಿಕೆಗಳ ಕುರಿತಂತೆ ನಮ್ಮ ಭಾವನೆಗಳನ್ನು-ಸಲಹೆಗಳನ್ನು ನಿಮ್ಮ ಎದುರು ಹಂಚಿಕೊಳ್ಳಬೇಕಾಗಿದೆ. ನಾವು ಕೊಡುವ ಸಲಹೆಗಳು ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸಿ ಸರ್ಕಾರದ ಆಡಳಿತ ಸುಗಮವಾಗಿ ನಡೆಯುವಂತೆ ಆಗಲಿದೆ" ಎಂದು ಸುನಿಲ್ ಕುಮಾರ್ ಪತ್ರದಲ್ಲಿ ಬರೆದಿದ್ದರು. ಈ ವಿಚಾರದಲ್ಲೂ ಸಚೇತಕರಿಗೆ ವರಿಷ್ಠರು ಏನೂ ಎಚ್ಚರಿಕೆಯನ್ನು ನೀಡಿರಲಿಲ್ಲ.
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ಇದೊಂದು ಘಟನೆಯಾದರೆ, ಇನ್ನೊಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್. ಸಿಎಂ ಯಡಿಯೂರಪ್ಪನವರ ವಿರುದ್ದ ಕಿಡಿಕಾರುತ್ತಲೇ ಇದ್ದರೂ, ಬಿಜೆಪಿಯ ಹಿರಿಯ ಮುಖಂಡರು ಸುಮ್ಮನಾಗಿರುವುದು. ಒಂದು ಬಾರಿ ಅವರಿಗೆ ನೋಟಿಸ್ ಕೊಟ್ಟಿದ್ದರೂ, ಯತ್ನಾಳ್ ಅವರ ವಾಕ್ ಪ್ರಹಾರ ಮುಂದುವರಿಯುತ್ತಲೇ ಇದೆ. ಬಿಜೆಪಿ ವರಿಷ್ಠರು ಒಂದು ಬಾರಿ ಎಚ್ಚರಿಕೆ ಕೊಟ್ಟು ಸುಮ್ಮನಾಗಿದ್ದರೆ.
Recommended Video
ಈಶ್ವರಪ್ಪನವರ ಘಟನೆ - ಯಡಿಯೂರಪ್ಪನವರ ವಿರುದ್ದ ರಾಜ್ಯಪಾಲರಿಗೆ ದೂರು
ಇದಾದ ಮೇಲೆ ಮೊನ್ನೆಮೊನ್ನೆ ನಡೆದ ಕೆ.ಎಸ್.ಈಶ್ವರಪ್ಪನವರ ಘಟನೆ. ಸಿಎಂ ಯಡಿಯೂರಪ್ಪನವರ ವಿರುದ್ದ ನೇರ ರಾಜ್ಯಪಾಲರಿಗೆ ದೂರು ನೀಡುವ ಮೂಲಕ, ರಾಜ್ಯ ಬಿಜೆಪಿಯಲ್ಲಿನ ಗೊಂದಲವನ್ನು ಜಗಜ್ಜಾಹೀರು ಮಾಡಿದ್ದಾರೆ. ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಈ ಬಗ್ಗೆ ಅಸಮಾಧಾನ ತೋರಿದ್ದರೂ, ವರಿಷ್ಠರಿಂದ ನಿರೀಕ್ಷಿತ ಬೆಂಬಲ ಸಿಎಂ ಬಿಎಸ್ವೈಗೆ ಸಿಗಲಿಲ್ಲ. ಈ ಮೂರು ವಿದ್ಯಮಾನಗಳಿಂದ ರಾಜ್ಯ ಬಿಜೆಪಿಯಲ್ಲಿ ಏನು ನಡೆಯುತ್ತಿದೆ ಎನ್ನುವ ಗೊಂದಲ ಕಾರ್ಯಕರ್ತರಲ್ಲಿ ಮನೆಮಾಡಿದೆ.