ಚಿತ್ರದಲ್ಲಿನ ಬಿಎಸ್ವೈ ಬಾಡಿ ಲಾಂಗ್ವೇಜ್: ಹುಟ್ಟು ಹಾಕುವುದು ನೂರು ಪ್ರಶ್ನೆಗಳನ್ನಾ..
ಒಂದು ಚಿತ್ರ ಸಾವಿರ ಪದಗಳಿಗೆ ಸಮ ಎಂಬ ಮಾತಿದೆ. ಕೆಲವೊಮ್ಮೆ ಏನೇ ಮುಚ್ಚಿಟ್ಟರು, ಮನಸ್ಸಿನ ಭಾವನೆಗಳಿಗೆ ಪರದೆ ಎಳೆದುಕೊಂಡರೂ ಕ್ಯಾಮೆರಾ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
Recommended Video
ನೀವು ಈ ಸ್ಟೋರಿಗಾಗಿ ಕ್ಲಿಕ್ ಮಾಡುವ ಮುನ್ನ ಗಮನಿಸಿರುವ ಈ ಚಿತ್ರಗಳು ರಾಜ್ಯದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರದ್ದು. ಇದು ಕೇವಲ ಬಿಎಸ್ವೈ ಚಿತ್ರಗಳಲ್ಲ, ಬದಲಿಗೆ ಇವತ್ತಿಗೆ ಅವರ ಮನಸ್ಸಿನೊಳಗೆ ಇರಬಹುದಾದ ದುಗುಡಗಳನ್ನು ಹೊತ್ತು ತಂದಿವೆ.
ಯಡಿಯೂರಪ್ಪ ಮುಂದೆ 'ಪವರ್' ತೋರಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಟೀಲ್
ಗುರುವಾರ ( ಸೆ 26) ಸಂಜೆ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠಕ್ಕೆ ಸಿಎಂ ಯಡಿಯೂರಪ್ಪ ಭೇಟಿ ನೀಡಿದ್ದರು. ಈ ಸಮಯದಲ್ಲಿ ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಹಾಗೂ ಕುಕ್ಕೇ ಸುಬ್ರಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥರನ್ನು ಅವರು ಭೇಟಿಯಾಗಿದ್ದರು.
ಉಪಚುನಾವಣೆ ಗೆಲ್ಲಿಸುವ ಹೊಣೆ ಬಿಎಸ್ ವೈ ಹೆಗಲಿಗೆ; ಇದು 'ಹೈ' ಅಪೇಕ್ಷೆ
ಈ ಸಮಯದಲ್ಲಿ ಸ್ವಾಮೀಜಿಗಳ ಜತೆ ಅವರೇನು ಮಾತುಕತೆ ನಡೆಸಿದರು, ಶ್ರೀಗಳಿಬ್ಬರು ಸಿಎಂಗೆ ಏನು ಸಲಹೆ ನೀಡಿದರು ಎಂಬುದು ಇಲ್ಲಿ ಮುಖ್ಯವಲ್ಲ. ಬದಲಿಗೆ, ಸಿಎಂ ಯಡಿಯೂರಪ್ಪ ಯಾಕಿಷ್ಟು ದುಗುಡಗೊಂಡಿರುವ ಮನಸ್ಸು ಹೊಂದಿದ್ದಾರೆ ಎಂಬುದು ಚಿತ್ರಗಳು ಎತ್ತುತ್ತಿರುವ ಪ್ರಶ್ನೆ.
ಸಮ್ಮಿಶ್ರ ಸರಕಾರವನ್ನು ಉರುಳಿಸಲು ಬಿಎಸ್ವೈ ಪಟ್ಟ ಕಷ್ಟ ಅಷ್ಟಿಷ್ಟಲ್ಲ
ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರಕಾರವನ್ನು ಉರುಳಿಸಲು ಬಿಎಸ್ವೈ ಪಟ್ಟ ಕಷ್ಟ, ಅನುಸರಿಸಿದ ತಂತ್ರಗಾರಿಕೆ, ಹೊತ್ತುಕೊಂಡ ಆರೋಪಗಳು ಸರಳವಾಗೇನಿರಲಿಲ್ಲ. ಕರ್ನಾಟಕ ರಾಜಕೀಯ ಇತಿಹಾಸದ ಕಳಂಕಗಳ ಅಧ್ಯಾಯಗಳಲ್ಲಿ ಕಾಣಿಸಿಕೊಳ್ಳುವ ಈ ಪ್ರಯತ್ನಗಳಿಂದಾಗಿ ವಿಧಾನಸಭೆಯ ಸ್ಪೀಕರ್ ಸ್ಥಾನವೇ ವಿವಾದದ ಕೇಂದ್ರವಾಗಿತ್ತು.
ಧ್ವನಿ ಮುದ್ರಿಕೆಯೊಂದು ಯಡಿಯೂರಪ್ಪ ಮೇಲೆ ಗಂಭೀರ ಕಳಂಕ ಹೊರಿಸಿತ್ತು
ಆಗ ಹೊರಬಿದ್ದಿದ್ದ ಧ್ವನಿ ಮುದ್ರಿಕೆಯೊಂದು ಯಡಿಯೂರಪ್ಪ ಮೇಲೆ ಗಂಭೀರ ಕಳಂಕ ಹೊರಿಸಿತ್ತು. ಕೊನೆಗೆ ಈ ಕುರಿತು ತನಿಖೆಗೂ ಅಂದಿನ ಸರಕಾರ ಆದೇಶಿಸಿತ್ತು. ಈ ಸಮಯದಲ್ಲಿ ನಡೆದ ಕಲಾಪದಲ್ಲಿ ಯಡಿಯೂರಪ್ಪ ಯಾವ ಪರಿ ಅವಮಾನಿತರಾಗಿದ್ದರು ಎಂಬುದನ್ನು ರಾಜ್ಯದ ಜನತೆ ನೋಡಿದ್ದರು. ಆದರೆ ಅವತ್ತು ಕಾಣಿಸಿಕೊಳ್ಳದ ದುಗುಡ ಈಗ ಬಿಎಸ್ವೈ ಅವರಲ್ಲಿ ಕಾಣಿಸಿಕೊಂಡಿದೆ. ಇದಕ್ಕೆ ಸಾಕ್ಷಿ ಇತ್ತೀಚಿನ ಈ ಚಿತ್ರಗಳು.
ಗೌರಿಗದ್ದೆಯಲ್ಲಿರುವ ಯುವ ಗುರು ವಿನಯ್
ಇತ್ತೀಚಿಗೆ ಸಿಎಂ ಯಡಿಯೂರಪ್ಪ ಚಿಕ್ಕಮಗಳೂರಿನ ಗೌರಿಗದ್ದೆಯಲ್ಲಿರುವ ಯುವ ಗುರು ವಿನಯ್ ಅವರನ್ನು ಭೇಟಿಯಾಗಿದ್ದರು. ಅಲ್ಲಿಯೂ ಕೂಡ ಹೋಮ, ಹವನ, ಪೂಜೆಗಳನ್ನು ಮಾಡಿಸಿಕೊಂಡಿದ್ದರು. ಅಂತಿಮವಾಗಿ ಕಾರು ಹತ್ತುವ ಸಮಯದಲ್ಲಿ ವಿನಯ್ ಗುರೂಜಿ ಬಂದು ಸಿಎಂ ಕಿವಿಯಲ್ಲಿ ಉಸುರಿ ಹೋಗಿದ್ದು ವರದಿಯಾಗಿತ್ತು.
ಈ ಸಮಯದಲ್ಲಿ ಒಟ್ಟಾರೆ ಘಟನೆಯನ್ನು ವಿಶ್ಲೇಷಣೆಗೆ ಒಳಪಡಿಸಿದ್ದ 'ಒನ್ ಇಂಡಿಯಾ', ಸಿಎಂ ಹುದ್ದೆಯಲ್ಲಿ ಕುಳಿತ ಯಡಿಯೂರಪ್ಪ ಹತಾಶರಾಗಿದ್ದಾರಾ ಎಂಬ ಪ್ರಶ್ನೆಯನ್ನು ಮುಂದಿಟ್ಟಿತ್ತು.
ಯಡಿಯೂರಪ್ಪ ಅವರ ಸಂದಿಗ್ಧತೆಗೆ ಸಾಕ್ಷಿ ನುಡಿಯುವಂತಿವೆ
ಯಾಕೆ ಅಧಿಕಾರದಲ್ಲಿರುವ ಪರಿಹಾರಕ್ಕಾಗಿ ಇನ್ನೊಬ್ಬರ ಮೊರೆ ಹೋಗುವ ಸ್ಥಿತಿಗೆ ಬಂದಿದ್ದಾರೆ ಎಂಬುದನ್ನು ಮುಂದಿಟ್ಟಿತ್ತು. ಜತೆಗೆ, ನಾಯಕತ್ವ ಗುಣಗಳನ್ನು ಹೇಗೆ ಮನುಷ್ಯ ಕಳೆದುಕೊಳ್ಳುತ್ತಾನೆ ಎಂಬುದನ್ನು ವಿವರಿಸಲಾಗಿತ್ತು. ಇದೀಗ ಮತ್ತೆ ಸಿಎಂ ಕಾವಿ ಮಠಾಧಿಪತಿಗಳ ಭೇಟಿ ಮಾಡುವ ಮೂಲಕ ಇದೇ ಪ್ರಶ್ನೆಗಳನ್ನು ಮತ್ತೆ ಹುಟ್ಟು ಹಾಕಿದ್ದಾರೆ. ಅದರಲ್ಲೂ ಅವರು ಕುಳಿತಿರುವ ಭಂಗಿ, ಹೊದ್ದುಕೊಂಡಿರುವ ಆತಂಕ, ದುಗುಡ ತುಂಬಿದ ಚಹರೆಗಳು ಸಿಎಂ ಕುರ್ಚಿಯಲ್ಲಿ ಕುಳಿತ ಬಿ. ಎಸ್. ಯಡಿಯೂರಪ್ಪ ಅವರ ಸಂದಿಗ್ಧತೆಗೆ ಸಾಕ್ಷಿ ನುಡಿಯುವಂತಿವೆ.
ಅಧಿಕಾರಶಾಹಿ, ಹೈಕಮಾಂಡ್ನ ಹಿಡಿತಗಳು
ಬಿಜೆಪಿ ಒಳಗೆ ಸೃಷ್ಟಿಯಾಗಿರುವ ಅಧಿಕಾರಶಾಹಿ, ಹೈಕಮಾಂಡ್ನ ಹಿಡಿತಗಳು, ಬರ ಪರಿಹಾರದ ವಿಚಾರದಲ್ಲಿ ಅದು ರಾಜ್ಯ ಸರಕಾರವನ್ನು ಸಿಕ್ಕಿಸಿರುವ ರೀತಿ ಹೀಗೆ ನಾನಾ ಕಾರಣಗಳಿಂದಾಗಿ ಸಿಎಂ ಹುದ್ದೆಯಲ್ಲಿ ಕುಳಿತರೂ ಬಿಎಸ್ವೈ ಸ್ವತಂತ್ರವಾಗಿಲ್ಲ ಎಂಬುದನ್ನು ಸಾರಿ ಹೇಳುತ್ತಿವೆ. ಜನರ ಒತ್ತಡ ಒಂದು ಕಡೆಗಿದ್ದರೆ, ಪಕ್ಷದೊಳಗೆ ದೊರೆಯದ ಸ್ವಾತಂತ್ರ್ಯ ಕೂಡ ಬಿಎಸ್ವೈ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿವೆ.
ಯಡಿಯೂರಪ್ಪನವರ ಈ ಎರಡು ಚಿತ್ರ: ಅದೇನು ನೋವು ಅವರನ್ನು ಕಾಡುತ್ತಿದೆಯೋ?
ಹೋರಾಟದ ಹಿನ್ನೆಲೆಯಿಂದ ಬಂದರೂ ಒಬ್ಬ ನಾಯಕ ತನ್ನ ನಾಯಕತ್ವ ಗುಣಗಳನ್ನು ಮರೆಸುವ ಪರಿಸ್ಥಿತಿಗಳನ್ನು ಇವು ಸೃಷ್ಟಿಸಿರುವ ಸಾಧ್ಯತೆಗಳಿವೆ. ಅದರ ಒಟ್ಟಾರೆ ಫಲಿತಾಂಶ ಮಾತ್ರ ಇಂತಹ ಚಿತ್ರಗಳ ರೂಪದಲ್ಲಿ ಕಾಣಿಸಿಕೊಂಡಿದೆ. ಇದನ್ನು ಮುಖ್ಯಮಂತ್ರಿ ಹಾಗೂ ಅವರ ಹಿತೈಷಿಗಳು ಅರ್ಥ ಮಾಡಿಕೊಳ್ಳಬೇಕಿದೆ.