ಸಿದ್ದರಾಮಯ್ಯನವರ ಕಾಲದಲ್ಲಿ ಗಿರೀಶ್ ಕಾರ್ನಾಡ್ ದಸರಾ ಉದ್ಘಾಟಿಸಿದಾಗ
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ, ನಾಟಕಕಾರ, ಚಿತ್ರ ನಿರ್ದೇಶಕ, ನಟ, ಗಿರೀಶ್ ಕಾರ್ನಾಡ್ (81) ಸೋಮವಾರ ಬೆಳಗ್ಗೆ ವಿಧಿವಶರಾಗಿದ್ದಾರೆ. ಬಲಪಂಥೀಯ ಧೋರಣೆಗೆ ವಿರುದ್ದವಾದ ನಿಲುವನ್ನು ಕಾರ್ನಾಡ್ ಹೊಂದಿದ್ದರಿಂದ, ಇವರ ಹೇಳಿಕೆಗಳು ಸದಾ ಚರ್ಚೆಯ ವಿಷಯವಾಗಿದ್ದವು.
2014ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗ, ಗಿರೀಶ್ ಕಾರ್ನಾಡ್ ಅವರನ್ನು ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಆಹ್ವಾನಿಸಲು ನಿರ್ಧರಿಸಿತ್ತು. ಇದಕ್ಕೆ ತೀವ್ರ, ವಿರೋಧವೂ ಅಂದು ವ್ಯಕ್ತವಾಗಿತ್ತು.
ಹಿಂದೂ ಪೂಜಾಪದ್ದತಿ, ಆಚರಣೆಯ ಬಗ್ಗೆ ತದ್ವಿರುದ್ದ ನಿಲುವನ್ನು ಗಿರೀಶ್ ಕಾರ್ನಾಡ್ ಹೊಂದಿರುವುದರಿಂದ, ಇವರನ್ನು ದಸರಾ ಉದ್ಘಾಟನೆಗೆ ಕರೆಯುವುದು ಎಷ್ಟು ಸೂಕ್ತ ಎಂದು ಸಿದ್ದರಾಮಯ್ಯನವರ ಸರಕಾರದ ವಿರುದ್ದ ಆಕ್ರೋಶ ವ್ಯಕ್ತವಾಗಿತ್ತು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ವಿಧಿವಶ
ಹಲವು ವಿರೋಧದ ನಡುವೆಯೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ, ಗಿರೀಶ್ ರಘುನಾಥ್ ಕಾರ್ನಾಡ್ ಅವರಿಂದ ಮೈಸೂರು ದಸರಾ ಉದ್ಘಾಟನೆ ಮಾಡಿಸುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗಿತ್ತು.
ಎಸ್.ಎಲ್.ಭೈರಪ್ಪ ಅವರಿಂದ ದಸರಾ ಉದ್ಘಾಟನೆ ಮಾಡಿಸುವ ಪ್ರಸ್ತಾಪ
ಮೈಸೂರು ಸಂಸದ ಪ್ರತಾಪ್ ಸಿಂಹ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶ್ರೀನಿವಾಸ ಪ್ರಸಾದ್, ಸಚಿವರಾದ ಎಚ್.ಎಸ್. ಮಹದೇವ ಪ್ರಸಾದ್. ಎಚ್.ಸಿ.ಮಹದೇವಪ್ಪ, ಅಂದಿನ ಮೈಸೂರು ಜಿಲ್ಲಾಧಿಕಾರಿ ಮುಂತಾದವರು ದಸರಾ ಸಂಬಂಧದ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆಯಲ್ಲಿ ಭಾಗವಹಿಸಿದ್ದ ಸಂಸದ ಪ್ರತಾಪ್ ಸಿಂಹ ಅವರು ಸಾಹಿತಿ ಎಸ್.ಎಲ್.ಭೈರಪ್ಪ ಅವರಿಂದ ದಸರಾ ಉದ್ಘಾಟನೆ ಮಾಡಿಸುವ ಪ್ರಸ್ತಾಪಿಸಿದ್ದರು.
ಗಿರೀಶ್ ಕಾರ್ನಾಡ್ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಬೆಂಬಲಿಸುತ್ತಾರೆ
ಗಿರೀಶ್ ಕಾರ್ನಾಡ್ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಬೆಂಬಲಿಸುತ್ತಾರೆ. ದೇಶದ ಸಂಸ್ಕೃತಿ, ಹಿಂದುತ್ವವನ್ನು ವಿರೋಧಿಸುತ್ತಲೇ ಬರುತ್ತಿದ್ದಾರೆ. ಇಂಥವರಿಂದ ಚಾಮುಂಡೇಶ್ವರಿ ದೇವಿಯ ಪೂಜೆ ಮಾಡಿಸಬೇಕೆ? ದಸರಾಕ್ಕೆ ಐತಿಹಾಸಿಕ ಮಹತ್ವದ ಜತೆಗೆ ಧಾರ್ಮಿಕ ಮಹತ್ವವೂ ಇದೆ ಹೀಗಿರುವಾಗ ಕಾರ್ನಾಡ್ ಅವರ ಆಯ್ಕೆ ಎಷ್ಟು ಸರಿ? ಎನ್ನುವುದು ಚರ್ಚೆಯ ವಿಷಯವಾಗಿದ್ದವು.
ಮೂಗಲ್ಲಿ ನಳಿಕೆ, ಆದರೂ ಹೋರಾಟದಲ್ಲಿ ಮುಂದೆ! ಕಾರ್ನಾಡರೆಂದರೆ ಹಾಗೆ!
ಎಸ್.ಎಲ್.ಭೈರಪ್ಪನವರಿಂದಲೇ ದಸರಾ ಉದ್ಘಾಟಿಸಬಹುದಿತ್ತು
ನಮ್ಮ ಜಿಲ್ಲೆಯವರಾದ ಹಿರಿಯ ಸಾಹಿತಿ ಆಸ್ತಿಕ ಎಸ್.ಎಲ್.ಭೈರಪ್ಪನವರಿಂದಲೇ ದಸರಾ ಉದ್ಘಾಟಿಸಬಹುದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಜಿಲ್ಲೆಯವರೇ ಆಗಿದ್ದಾರೆ. ಅವರು ಸ್ಥಳೀಯರಿಗೆ ಆದ್ಯತೆ ನೀಡಬಹುದಲ್ಲವೇ? ಒಂದು ವೇಳೆ ಕಾರ್ನಾಡ್ ಅವರೇ ಉದ್ಘಾಟಿಸಬೇಕಾದರೆ 'ಇದುವರೆಗೆ ನಾಸ್ತಿಕನಾಗಿದ್ದೆ. ಇನ್ನು ಮುಂದೆ ಆಸ್ತಿಕನಾಗಿರುತ್ತೇನೆ' ಎಂದು ಘೋಷಿಸಿ ನಂತರ ದಸರಾ ಹಬ್ಬ ಉದ್ಘಾಟಿಸಲಿ ಎಂದು ಮಾಜಿ ಮೇಯರ್ ಸಂದೇಶ್ ಸ್ವಾಮಿ ಆಗ್ರಹಿಸಿದ್ದರು.
ಗಿರೀಶ್ ಕಾರ್ನಾಡ್ ಅವರಿಗೆ ಕರ್ನಾಟಕ ಸರಕಾರ ಅಧಿಕೃತವಾಗಿ ಆಹ್ವಾನ
ಮೈಸೂರು ದಸರಾ ಉದ್ಘಾಟಿಸಲು ಗಿರೀಶ್ ಕಾರ್ನಾಡ್ ಅವರಿಗೆ ಕರ್ನಾಟಕ ಸರಕಾರ ಅಧಿಕೃತವಾಗಿ ಆಹ್ವಾನ ನೀಡಿ, ಈ ಕುರಿತು ಉದ್ಭವವಾಗಿದ್ದ ವಿವಾದಕ್ಕೆ ಅಂತಿಮವಾಗಿ ತೆರೆ ಎಳೆದಿತ್ತು. ಗಿರೀಶ್ ಕಾರ್ನಾಡ್ ಚಾಮುಂಡಿ ಬೆಟ್ಟದಲ್ಲಿ 2014ರ ದಸರಾವನ್ನು ಉದ್ಘಾಟಿಸಿದ್ದರು. ಕಾರ್ನಾಡ್ ದಸರಾ ಉದ್ಘಾಟಿಸಬಾರದು ಎಂದು ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಚಾಮುಂಡಿ ದೇವಿಯ ವಿಗ್ರಹಕ್ಕೆ ಪುಷ್ಪಾರ್ಚನೆ ಮೂಲಕ ದಸರಾ ಚಾಲನೆ
ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ಗಿರೀಶ್ ಕಾರ್ನಾಡ್, ಸಿಎಂ ಸಿದ್ದರಾಮಯ್ಯ ಮುಂತಾದವರು ಮೊದಲು ತಾಯಿ ಚಾಮುಂಡಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ದೇವಾಲಯದ ಆವರಣದ ವೇದಿಕೆಯಲ್ಲಿದ್ದ ಬೆಳ್ಳಿರಥದಲ್ಲಿದ್ದ ಚಾಮುಂಡಿ ದೇವಿಯ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ 2014ರ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದ್ದರು.