ಸಿ.ವಿ.ರಾಮನ್ ನಗರದಲ್ಲಿ ಕಾಂಗ್ರೆಸ್ಗೆ ಬಂಡಾಯದ ಬಿಸಿ?
Recommended Video
ಬೆಂಗಳೂರು, ಫೆಬ್ರವರಿ 19 : ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷಕ್ಕೆ ಬಂಡಾಯದ ಬಿಸಿ ತಟ್ಟಲಿದೆ?. ಸಿ.ವಿ.ರಾಮನ್ ನಗರ ಕ್ಷೇತ್ರದ ಚುನಾವಣಾ ಕಣ ಕುತೂಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಪಕ್ಷದಲ್ಲೇ ಟಿಕೆಟ್ಗೆ ಪೈಪೋಟಿ ನಡೆಯುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತ, ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಬೆಂಗಳೂರಿಗೆ ವಲಸೆ ಬರಲಿದ್ದಾರೆ. ಸಿ.ವಿ.ರಾಮನ್ ನಗರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ಸಿ.ವಿ.ರಾಮನ್ ನಗರದಿಂದ ಸ್ಪರ್ಧೆ, ಮಹದೇವಪ್ಪ ಹೇಳಿದ್ದೇನು?
ಆದರೆ, ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಪಿ.ರಮೇಶ್ ಪಕ್ಷದ ನಾಯಕರ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟಿಕೆಟ್ 'ಕೈ' ತಪ್ಪಿದರೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಪಕ್ಷದ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.
ಸಿ.ವಿ.ರಾಮನ್ ನಗರಕ್ಕೆ ಎಚ್.ಸಿ.ಮಹದೇವಪ್ಪ ಅಭ್ಯರ್ಥಿ?
'ಕಾಂಗ್ರೆಸ್ ಟಿಕೆಟ್ ಸಿಕ್ಕದಿದ್ದರೆ ಪಕ್ಷಾಂತರ ಮಾಡಿ ಜೆಡಿಎಸ್ ಅಥವ ಬಿಜೆಪಿ ಸೇರುವುದಿಲ್ಲ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ಅವರು ನನ್ನನ್ನು ಪಕ್ಷಕ್ಕೆ ಆಹ್ವಾನಿಸಿದ್ದರು' ಎಂದು ಪಿ.ರಮೇಶ್ ಹೇಳಿದ್ದಾರೆ.
ಸಿ.ವಿ.ರಾಮನ್ ನಗರ ಕ್ಷೇತ್ರ ಸದ್ಯ ಬಿಜೆಪಿಯ ವಶದಲ್ಲಿದೆ. ಎಸ್.ರಾಘು ಅವರು ಹಾಲಿ ಶಾಸಕರು. ಕಾಂಗ್ರೆಸ್ನಲ್ಲಿ ಯಾರಿಗೆ ಟಿಕೆಟ್ ಸಿಗಲಿದೆ? ಎಂಬುದರ ಮೇಲೆ ಕ್ಷೇತ್ರದ ಚುನಾವಣೆಯ ಹಣಾಹಣಿ ನಿರ್ಧರಿತವಾಗಲಿದೆ..
ಎಚ್.ಸಿ.ಮಹದೇವಪ್ಪ ಹೇಳುವುದೇನು?
ಸಿ.ವಿ.ರಾಮನ್ ನಗರದಿಂದ ಸ್ಪರ್ಧೆ ಮಾಡುವ ಕುರಿತು ಮಾತನಾಡಿರುವ ಎಚ್.ಸಿ.ಮಹದೇವಪ್ಪ ಅವರು, 'ಕ್ಷೇತ್ರವನ್ನು ನಾನು ಆಯ್ಕೆ ಮಾಡಿಕೊಂಡಿಲ್ಲ. ಪಕ್ಷದ ನಾಯಕರು ಸ್ಪರ್ಧೆಗೆ ಆಹ್ವಾನಿಸುತ್ತಿದ್ದಾರೆ. ಪಕ್ಷದ ತೀರ್ಮಾನಕ್ಕೆ ನಾನು ಬದ್ಧ. ಸದ್ಯ, ತಿ.ನರಸೀಪುರ ಕ್ಷೇತ್ರದ ಶಾಸಕ. ನನ್ನ ಅವಧಿ ಮೇ ತಿಂಗಳಿನ ತನಕ ಇದೆ. ಆ ಮೇಲೆ ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ' ಎಂದು ಸ್ಪಷ್ಟಪಡಿಸಿದ್ದಾರೆ.
ಸಿ.ವಿ.ರಾಮನ್ ನಗರದಲ್ಲಿ ಸಕಲ ಸಿದ್ಧತೆ
ಸಿ.ವಿ.ರಾಮನ್ ನಗರದಿಂದ ಎಚ್.ಸಿ.ಮಹದೇವಪ್ಪ ಅವರು ಸ್ಪರ್ಧೆ ಮಾಡುವುದು ಖಚಿತವಾಗಿದೆ. ಕಾರ್ಯಕರ್ತರು ಈ ಬಗ್ಗೆ ಮಾತನಾಡುತ್ತಿದ್ದಾರೆ. ಸಂಕ್ರಾಂತಿ, ಹೊಸ ವರ್ಷದ ಶುಭಾಶಯ ಕೋರುವ ಬ್ಯಾನರ್ಗಳಲ್ಲಿ ಎಚ್.ಸಿ.ಮಹದೇವಪ್ಪ ಅವರು ಅಭ್ಯರ್ಥಿ ಎಂದು ಹಾಕಲಾಗಿತ್ತು.
ಪಿ.ರಮೇಶ್ ಟಿಕೆಟ್ ಆಕಾಂಕ್ಷಿ
ಸಿ.ವಿ.ರಾಮನ್ ನಗರದ ಟಿಕೆಟ್ಗಾಗಿ ಪಿ.ರಮೇಶ್ ಪ್ರಯತ್ನ ನಡೆಸಿದ್ದಾರೆ. ಕಳೆದ ಚುನಾವಣೆಯಲ್ಲಿ ಅವರು 44,982 ಮತಗಳನ್ನು ಪಡೆದು ಸೋಲು ಕಂಡಿದ್ದರು. ನಾಲ್ಕು ವರ್ಷಗಳಿಂದ ಅವರು ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದು, ಈ ಬಾರಿಯೂ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
'ಟಿಕೆಟ್ ಸಿಗುವ ವಿಶ್ವಾಸವಿದೆ'
'ಕ್ಷೇತ್ರದಲ್ಲಿ ನಾಲ್ಕೂವರೆ ವರ್ಷಗಳಿಂದ ಓಡಾಡಿ ಪಕ್ಷ ಸಂಘಟನೆ ಮಾಡಿದ್ದೇನೆ. ಹಾಗಾಗಿ ಟಿಕೆಟ್ ಸಿಗಲಿದೆ ಎಂಬ ವಿಶ್ವಾಸವಿದೆ. ಒಂದು ವೇಳೆ ಟಿಕೆಟ್ ಸಿಗದಿದ್ದರೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲಿದ್ದೇನೆ' ಎಂದು ಪಿ.ರಮೇಶ್ ಎಚ್ಚರಿಕೆ ನೀಡಿದ್ದಾರೆ.
ಕುಮಾರಸ್ವಾಮಿ ಬೆಂಬಲ ನೀಡಲಿದ್ದಾರೆಯೇ?
'ಕುಮಾರಸ್ವಾಮಿ ಅವರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ಪಕ್ಷದಿಂದ ಕಣಕ್ಕಿಳಿಯುವಂತೆ ಅವರು ಆಹ್ವಾನಿಸಿದ್ದರು. ಆದರೆ, ಬಂಡಾಯವಾಗಿ ಕಣಕ್ಕಿಳಿಯುವೆ ಎಂದು ಸ್ಪಷ್ಟಪಡಿಸಿರುವೆ. ಬಂಡಾಯವಾಗಿ ಸ್ಪರ್ಧಿಸಿದರೆ ಜೆಡಿಎಸ್ ಅಭ್ಯರ್ಥಿ ಹಾಕದೆ ಬೆಂಬಲ ನೀಡುವ ವಿಶ್ವಾಸವಿದೆ' ಎಂದು ರಮೇಶ್ ಹೇಳಿದ್ದಾರೆ.
ಬಿಜೆಪಿ ವಶದಲ್ಲಿರುವ ಕ್ಷೇತ್ರ
2013ರ ಚುನಾವಣೆಯಲ್ಲಿ ಬಿಜೆಪಿಯ ಎಸ್.ರಾಘು 53,444 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ನ ಪಿ.ರಮೇಶ್ 44,982 ಮತ, ಜೆಡಿಎಸ್ನ ಜೆ.ಹೇಮಲತಾ ಸುರೇಶ್ ರಾಜ್ 3,179 ಮತಗಳನ್ನು ಪಡೆದಿದ್ದರು.