ಅನರ್ಹತೆ ಶಿಕ್ಷೆಯಿಂದ ಪಾರಾದ ನಾಲ್ವರು ರೆಬೆಲ್ ಶಾಸಕರು
ಬೆಂಗಳೂರು, ಫೆಬ್ರವರಿ 15: ಜೆಡಿಎಸ್ -ಕಾಂಗ್ರೆಸ್ ಸರ್ಕಾರದ ವಿರುದ್ಧ ತಿರುಗಿಬಿದ್ದು, ಬಜೆಟ್ ಅಧಿವೇಶನ, ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗದೆ ಸೆಡ್ಡು ಹೊಡೆದಿದ್ದ ನಾಲ್ವರು ಕಾಂಗ್ರೆಸ್ ಶಾಸಕರು ಅಧಿವೇಶನದಲ್ಲಿ ಪಾಲ್ಗೊಳ್ಳುವ ಮೂಲಕ ಶಾಸಕ ಸ್ಥಾನದಿಂದ ಅನರ್ಹಗೊಳ್ಳುವ ಭೀತಿಯಿಂದ ಪಾರಾಗಿದ್ದಾರೆ.
ಕಾಂಗ್ರೆಸ್ಸಿನ ನಾಲ್ವರು ಅತೃಪ್ತ ಶಾಸಕರನ್ನು ಅನರ್ಹ ಮಾಡುವಂತೆ ಕೋರಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪೀಕರ್ ರಮೇಶ್ಕುಮಾರ್ ಅವರಿಗೆ ದೂರು ಸಲ್ಲಿಸಿದ್ದರು. ಪಕ್ಷಾಂತರ ನಿಷೇಧ ಕಾಯ್ದೆ ಪ್ರಕಾರ ಕ್ರಮಕೈಗೊಳ್ಳಲು ಮನವಿ ಮಾಡಿದ್ದರು. ಎರಡೆರಡು ಬಾರಿ ಶೋಕಾಸ್ ನೋಟಿಸ್, ವಿಪ್ಗಳನ್ನು ಜಾರಿ ಮಾಡಿದ್ದರೂ ಅತೃಪ್ತ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ ಕುಮಠಳ್ಳಿ, ಬಿ.ನಾಗೇಂದ್ರ ಹಾಗೂ ಡಾ. ಉಮೇಶ್ ಜಾಧವ್ ಅವರು ಉಲ್ಲಂಘನೆ ಮಾಡಿದ್ದರು.
ಕಾಂಗ್ರೆಸ್ ಅತೃಪ್ತ ಶಾಸಕರು ಸಿದ್ದರಾಮಯ್ಯ ಮನೆಯಲ್ಲಿ ಪ್ರತ್ಯಕ್ಷ
ಆದರೆ, ದೂರಿನಲ್ಲಿ ಹೆಸರಿಸಲಾಗಿದ್ದ ಅತೃಪ್ತ ಶಾಸಕರಾದ ರಮೇಶ್ ಜಾರಕಿಹೊಳಿ, ಬಿ ನಾಗೇಂದ್ರ, ಡಾ.ಉಮೇಶ್ ಜಾಧವ್, ಮಹೇಶ್ ಕುಮಠಳ್ಳಿ ಅವರು ಬುಧವಾರ ಮತ್ತು ಗುರುವಾರದಂದು ಸದನದ ಕಲಾಪಕ್ಕೆ ಹಾಜರಾದರು. ನಾಗೇಂದ್ರ ಅವರಿಗಂತೂ ಎಲ್ಲರಿಂದ ನಗುಮೊಗದ ಸ್ವಾಗತ ಸಿಕ್ಕಿತು.
ಕಲಾಪದಲ್ಲಿ ಸಕ್ರಿಯರಾಗಿದ್ದ ಈ ನಾಲ್ವರು ಶಾಸಕರು ಹಣಕಾಸು ವಿಧೇಯಕದ ಪರ ಧ್ವನಿಮತ ಚಲಾಯಿಸಿದರು. ಈ ಮೂಲಕ ಸರ್ಕಾರದ ಪರ ಇರುವುದನ್ನು ಸಾಬೀತುಪಡಿಸಿದರು.ಈ ಎಚ್ಚರಿಕೆಯ ನಡೆ ಮೂಲಕ ತಮ್ಮ ಮೇಲಿದ್ದ ಅರೋಪವನ್ನು ಬಹುತೇಕ ಕಡಿಮೆಗೊಳಿಸಿಕೊಂಡಿದ್ದಾರೆ.
ಪಕ್ಷದ ವಿಪ್ ಉಲ್ಲಂಘನೆಗೆ ಈ ರೀತಿ ಉತ್ತರ ನೀಡಿದ್ದಾರೆ. ಅಲ್ಲದೇ, ನಾಲ್ವರು ಶಾಸಕರು ಮತ್ತೊಂದು ಪಕ್ಷದ ಸಭೆಯಲ್ಲಿ ಪಾಲ್ಗೊಂಡ ದಾಖಲೆಗಳಿರಲಿಲ್ಲ, ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆಂಬ ಸಾಕ್ಷ್ಯವನ್ನು ಸ್ಪೀಕರ್ ಗೆ ಕಾಂಗ್ರೆಸ್ ಒದಗಿಸಿರಲಿಲ್ಲ. ಕೇವಲ ಎರಡು ಶಾಸಕಾಂಗ ಪಕ್ಷದ ಸಭೆಗೆ ಬಂದಿಲ್ಲ ಎಂಬುದಷ್ಟೇ ದೂರಿನ ಅಂಶದಲ್ಲಿತ್ತು. ಹೀಗಾಗಿ, ಈ ದೂರಿನ ಆಧಾರದಲ್ಲಿ ನಾಲ್ವರು ಶಾಸಕರ ಮೇಲೆ ಸ್ಪೀಕರ್ ರಮೇಶ್ ಕುಮಾರ್ ಅವರು ಕ್ರಮಕೈಗೊಳ್ಳುವ ಸಾಧ್ಯತೆ ಇಲ್ಲ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
82 ಪುಟಗಳ ದೂರು ನೀಡಿದ ಸಿದ್ದರಾಮಯ್ಯ
ಶಾಸಕಾಂಗ ಸಭೆ, ಬಜೆಟ್ ಅಧಿವೇಶನಕ್ಕೆ ಗೈರು ಹಾಜರಾಗಿರುವ ಬಗ್ಗೆ ವಿವರಣೆ ಕೋರಿ ಈ ನಾಲ್ವರು ಶಾಸಕರಿಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು. ಆದರೆ, ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ .ವಿಪ್ ಉಲ್ಲಂಘನೆ, ಸಚೇತಕರ ಆದೇಶ ಪಾಲಿಸದಿರುವುದು, ಪಕ್ಷ ವಿರೋಧಿ ಚಟುವಟಿಕೆ ಮುಂತಾದ ಆರೋಪಗಳನ್ನು ಉಲ್ಲೇಖಿಸಿರುವ 82 ಪುಟಗಳ ದೂರಿನ ಪ್ರತಿಯನ್ನು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಸಲ್ಲಿಸಲಾಗಿದೆ. ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಡಿಸಿಎಂ ಜಿ ಪರಮೇಶ್ವರ ಅವರು ಜತೆಗಿದ್ದರು.
ಶಾಸಕರು ರಾಜೀನಾಮೆ ಸಲ್ಲಿಸಿದರೆ, ಮುಂದೇನು?
ಸ್ಪೀಕರ್ ರಮೇಶ್ ಕುಮಾರ್ ಅವರು ಶಾಸಕರ ಅಮಾನತು ಮನವಿ ಕುರಿತಂತೆ ಕ್ರಮ ಜರುಗಿಸುವುದಕ್ಕೂ ಮುನ್ನ ಶಾಸಕರು ರಾಜೀನಾಮೆ ನೀಡಬಹುದು. ಆದರೆ, ಯಾವುದೇ ಅತೃಪ್ತ ಶಾಸಕರು ರಾಜೀನಾಮೆ ನೀಡಿದರೂ ಅದನ್ನು ತಕ್ಷಣ ಅಂಗೀಕರಿಸಬೇಕೆಂದಿಲ್ಲ.
ಶಾಸಕರ ಸರಣಿ ರಾಜೀನಾಮೆ? ಸ್ಪೀಕರ್ ರಮೇಶ್ ಕುಮಾರ್ ಮುಂದಿನ ಆಯ್ಕೆಗಳು?
ರಾಜೀನಾಮೆ ಅಂಗೀಕರಿಸುವುದು ಬಿಡುವುದು ಸ್ಪೀಕರ್ ಇಚ್ಛೆ
ಶಾಸಕರ ರಾಜೀನಾಮೆಯನ್ನು ಯಾವಾಗ ಅಂಗೀಕರಿಸಬೇಕು ಎಂಬುದು ಸ್ಪೀಕರ್ ವಿವೇಚನೆಗೆ ಬಿಟ್ಟ ವಿಚಾರ. ಇಂತಿಷ್ಟೇ ಅವಧಿಯಲ್ಲಿ ರಾಜೀನಾಮೆ ಅಂಗೀಕರಿಸಬೇಕು ಎಂಬ ನಿಯಮವಿಲ್ಲ. ವೈಎಸ್ಆರ್ ಕಾಂಗ್ರೆಸ್ ಸಂಸದರು ರಾಜೀನಾಮೆ ನೀಡಿದ ಸಂದರ್ಭ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ತಕ್ಷಣ ಅಂಗೀಕರಿಸಿರಲಿಲ್ಲ. ಐದಾರು ತಿಂಗಳು ಕಳೆದರೂ ಈ ಬಗ್ಗೆ ಮುಂದಿನ ಕ್ರಮ ಜರುಗಿಸಿರಲಿಲ್ಲ.
ಸ್ಪೀಕರ್ ಮೇಲೆ ಒತ್ತಡ ತರಲು ಬರುವುದಿಲ್ಲ
ಶಾಸಕರ ರಾಜೀನಾಮೆ ಅಂಗೀಕಾರ ಆಗದಿದ್ದಲ್ಲಿ ರಾಜ್ಯಪಾಲರಿಗೆ ಅಥವಾ ನ್ಯಾಯಾಲಯದ ಮೊರೆ ಹೋದರೂ ಸ್ಪೀಕರ್ ಮೇಲೆ ಒತ್ತಡ ತರಲು ಬರುವುದಿಲ್ಲ. ರಾಜ್ಯಪಾಲರು ಸದನದಲ್ಲಿ ಬಹುಮತ ಸಾಬೀತಿಗೆ ಸೂಚನೆ ನೀಡಬಹುದು. ಆ ಸಂದರ್ಭದಲ್ಲಿ ರಾಜೀನಾಮೆ ಅಂಗೀಕಾರ ಆಗದೆ ಇರುವ ಶಾಸಕರಿಗೂ ವಿಪ್ ಜಾರಿ ಮಾಡಬಹುದು. ಸದನದಲ್ಲಿ ವಿಪ್ ಉಲ್ಲಂಘನೆ ಮಾಡಿದರೆ ರಾಜಕೀಯ ಭವಿಷ್ಯಕ್ಕೆ ಸಂಚಕಾರ ತರುವ ಅವಕಾಶ ಸ್ಪೀಕರ್ಗೆ ಇದೆ.